ADVERTISEMENT

ಯಾದಗಿರಿ | ಜಿಲ್ಲೆಯಲ್ಲಿ ಒಂದೇ ದಿನ 72 ಪ್ರಕರಣಗಳು ಪತ್ತೆ!

ಸೋಂಕಿತರ ಪಟ್ಟಿಯಲ್ಲಿ ಶುಕ್ರವಾರ 21, ಶನಿವಾರ 8ನೇ ಸ್ಥಾನಕ್ಕೆ ‘ಮಹಾ’ ಜಿಗಿತ

​ಪ್ರಜಾವಾಣಿ ವಾರ್ತೆ
Published 23 ಮೇ 2020, 16:21 IST
Last Updated 23 ಮೇ 2020, 16:21 IST
ಶಹಾಪುರ ತಾಲ್ಲೂಕಿನ ಮೊರಾರ್ಜಿ ವಸತಿಶಾಲೆಯಲ್ಲಿ ವಲಸಿಗರು ಊಟ ಸೇವಿಸುತ್ತಿರುವುದು
ಶಹಾಪುರ ತಾಲ್ಲೂಕಿನ ಮೊರಾರ್ಜಿ ವಸತಿಶಾಲೆಯಲ್ಲಿ ವಲಸಿಗರು ಊಟ ಸೇವಿಸುತ್ತಿರುವುದು   

ಯಾದಗಿರಿ: ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 72 ಕೋವಿಡ್‌–19 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 87ಕ್ಕೆ ಏರಿಕೆಯಾಗಿದೆ.72 ಜನ ಮಹಾರಾಷ್ಟ್ರ ರಾಜ್ಯದಿಂದ ಜಿಲ್ಲೆಗೆ ಬಂದವರು. ಇವರೆಲ್ಲರನ್ನೂ ಯಾದಗಿರಿಯ ಕೋವಿಡ್ ಆಸ್ಪತ್ರೆಯಲ್ಲಿ ಅವಲೋಕನೆಗಾಗಿ ಇರಿಸಲಾಗಿದೆ.

ರಾಜ್ಯದಲ್ಲಿ ಸೋಂಕಿತರ ಪಟ್ಟಿಯಲ್ಲಿ ಶುಕ್ರವಾರ 21ನೇ ಸ್ಥಾನದಲ್ಲಿ ಜಿಲ್ಲೆ ಕಾಣಸಿಕೊಂಡಿತ್ತು. ಶನಿವಾರ 72 ‍ಪ್ರಕರಣಗಳು ಪತ್ತೆಯಾಗಿದ್ದರಿಂದ 8ನೇ ಸ್ಥಾನಕ್ಕೆ ಬಂದಿದೆ. ಈ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಒಂದೇ ದಿನ ಅತಿ ಹೆಚ್ಚು ಪ್ರಕರಣ ಇದೇ ಮೊದಲ ಬಾರಿ ದಾಖಲಾಗಿದೆ.

ಮೇ 12ರ ತನಕ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ಜಿಲ್ಲೆಯಲ್ಲಿ ಮೊದಲ ಬಾರಿಗೆ ಎರಡು ಪ್ರಕರಣಗಳು ಪತ್ತೆಯಾಗಿದ್ದವು. ಆನಂತರ 6 ದಿನಗಳ ನಂತರಮೂವರಲ್ಲಿ ಸೋಂಕುಪತ್ತೆಯಾಗಿತ್ತು. ಅಂದಿನಿಂದ ಏರುಗತಿಯಲ್ಲಿ ಪ್ರಕರಣ ಸಂಖ್ಯೆ ಏರುತ್ತಲಿದೆ. ಆದರೆ, ಶನಿವಾರ ‘ಮಹಾ’ ಜಿಗಿತ ಕಂಡಿದೆ.

ADVERTISEMENT

ಪ್ರಕರಣಗಳು ಹೆಚ್ಚಳ:ಜಿಲ್ಲೆಯಲ್ಲಿ 71 ಜನ ವಿದೇಶದಿಂದ ವಾಪಸ್ಸಾಗಿದ್ದಾರೆ. ಅವರು 28 ದಿನಗಳ ಹೋ ಕ್ವಾರಂಟೈನ್‌ ಅವಧಿ ಮುಗಿಸಿದ್ದಾರೆ. ಅವರಲ್ಲಿ ಸೋಂಕಿನ ಲಕ್ಷಣಗಳು ಬಂದಿಲ್ಲ. ಆದರೆ, ಲಾಕ್‌ಡೌನ್‌ ಸಡಿಲಿಕೆ ನಂತರ ಜಿಲ್ಲೆಗೆ ಮಹಾರಾಷ್ಟ್ರ, ಗುಜರಾತ್‌ನಿಂದ ಅತಿ ಹೆಚ್ಚು ವಲಸೆ ಕಾರ್ಮಿಕರು ಬಂದಿದ್ದಾರೆ. ಜಿಲ್ಲಾಡಳಿತದ ವತಿಯಿಂದ ಅವರನ್ನು ವಿವಿಧ ವಸತಿ ಶಾಲೆ, ಹಾಸ್ಟೆಲ್‌, ಕಲ್ಯಾಣ ಮಂಟಪಗಳಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

ಆದರೆ, ಇಲ್ಲಿ ಸರಿಯಾದ ಸೌಲಭ್ಯ ಇಲ್ಲದಿದ್ದರಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಕ್ವಾರಂಟೈನ್‌ಗಳಲ್ಲಿ ಇದ್ದವರಲ್ಲೇ ಇಲ್ಲಿಯವರೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಊರೊಳಗೆ ಇರುವ ಶಾಲಾ ಕಾಲೇಜುಗಳಲ್ಲಿ ಕ್ವಾರಂಟೈನ್‌ ಮಾಡದಂತೆ ಅಲ್ಲಲ್ಲಿ ಪ್ರತಿಭಟನೆಗಳು ನಡೆದಿವೆ. ಈಗ ಅಂಥ ಕೇಂದ್ರಗಳಲ್ಲಿಯೇ ಸೋಂಕು ಹೆಚ್ಚಳವಾಗಿದ್ದು, ಜನರ ಆತಂಕ ಹೆಚ್ಚಾಗಿದೆ.

ಡಿಸಿ ಮನವಿ:‘ಹೊರ ರಾಜ್ಯಗಳಿಂದ ಜಿಲ್ಲೆಗೆ ಯಾರೇ ಬಂದರೂ ಅವರನ್ನು 14 ದಿನ ಕ್ವಾರಂಟೈನ್ ಮಾಡಬೇಕಾಗುತ್ತದೆ. ಹೊರ ರಾಜ್ಯಗಳಿಂದ ಬಂದವರ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬಹುದು. ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸಲು ಜನಪ್ರತಿನಿಧಿಗಳು, ಮಾಧ್ಯಮ, ಸಂಘ-ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಅವರುಮನವಿ ಮಾಡಿದ್ದಾರೆ.

***

ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಸೋಂಕು ಕಾಣಿಸಿಕೊಂಡಿದೆ. ಅವರೆಲ್ಲರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.
-ಎಂ.ಕೂರ್ಮಾರಾವ್‌,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.