ಸುರಪುರ: ತಾಲ್ಲೂಕಿನ ತುಪ್ಪದ ಬೊಮ್ಮನಳ್ಳಿ ಗ್ರಾಮದಲ್ಲಿ ದೇವತೆಗಳ ಉತ್ಸವದ ನೆಪದಲ್ಲಿ ನಡೆಯುತ್ತಿರುವ ಕುರಿ,ಕೋಣ ಬಲಿ ನಿಲ್ಲಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಮುಖಂಡರು ಪೊಲೀಸ್ ಇನ್ಸ್ಪೆಕ್ಟರ್ ಆನಂದ ವಾಗ್ಮೋಡೆ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ‘ಟಿ. ಬೊಮ್ಮನಳ್ಳಿ ಗ್ರಾಮದಲ್ಲಿ ಡಿ. 8 ರಿಂದ 9 ರವರೆಗೆ ದ್ಯಾವಮ್ಮ, ಮರಿಗೆಮ್ಮ, ಕೆಂಚಮ್ಮ ದೇವತೆಗಳ ಉತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ನೂರಾರು ಕುರಿ, ಕೋಣ ಬಲಿಕೊಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಈ ಆಚರಣೆಯಿಂದ ಗ್ರಾಮದಲ್ಲಿ ಅಶಾಂತಿ ಸೃಷ್ಟಿಯಾಗಿ ಗಲಾಟೆ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಪ್ರತಿ ಉತ್ಸವ ವೇಳೆ ನಾವು ಮನವಿ ಕೊಡುತ್ತಾ ಬಂದಿದ್ದೇವೆ. ಆದರೂ ಪೊಲೀಸರು ಬಿಗಿ ಕ್ರಮ ಕೈಗೊಳ್ಳುತ್ತಿಲ್ಲ. ನಿರ್ಲಕ್ಷ್ಯ ವಹಿಸಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕು ಸಮಿತಿ ಸಂಚಾಲಕ ಬಸವರಾಜ ದೊಡ್ಮನಿ, ಹಣಮಂತ ಕಟ್ಟಿಮನಿ, ಮಹಾದೇವಪ್ಪ ಬಿಜಾಸ್ಪೂರ, ಮಾನಪ್ಪ ಬಿಜಾಸ್ಪೂರ, ದೇವಿಂದ್ರಪ್ಪ ಬಾದ್ಯಾಪುರ, ವೀರಭದ್ರ, ತಳವಾರಗೇರಾ, ಜಟ್ಟೆಪ್ಪ ನಾಗರಾಳ, ಖಾಜಾ ಹುಸೇನ ಗುಡುಗುಂಟಿ. ಬುದ್ದಿವಂತ ನಾಗರಾಳ, ಮಾನಪ್ಪ ಇಸ್ಲಾಂಪುರ, ಭೀಮರಾಯ ದೊಡ್ಮನಿ, ಮಹೇಶ ಯಾದಗಿರಿಕರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.