ADVERTISEMENT

ಗೂಡೂರು-ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಅಕ್ಕಪಕ್ಕದ ಜಮೀನು ಮುಳುಗಡೆ

ಸೊನ್ನ ಬ್ಯಾರೇಜ್‌ನಿಂದ 2.85 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 8:42 IST
Last Updated 15 ಅಕ್ಟೋಬರ್ 2020, 8:42 IST
ಯಾದಗಿರಿ ಜಿಲ್ಲೆಯ ಗೂಡೂರು-ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಅಕ್ಕಪಕ್ಕದ ಜಮೀನು ಮುಳುಗಡೆ
ಯಾದಗಿರಿ ಜಿಲ್ಲೆಯ ಗೂಡೂರು-ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಅಕ್ಕಪಕ್ಕದ ಜಮೀನು ಮುಳುಗಡೆ   

ಯಾದಗಿರಿ: ಸೊನ್ನ ಬ್ಯಾರೇಜ್‌ನಿಂದ ಗುರುವಾರ ಭೀಮಾ ನದಿಗೆ 2.85 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿದ್ದು, ಜಿಲ್ಲೆಯ ವಡಗೇರಾ, ಸೈದಾಪುರ ವ್ಯಾಪ್ತಿಯ ನೂರಾರು ಎಕರೆ ಭತ್ತ ಮುಳುಗಡೆಯಾಗಿದೆ. ಬ್ಯಾರೇಜ್‌ಗೆ 2,85,000 ಒಳಹರಿವಿದ್ದರೆ ಅಷ್ಟೆ ಪ್ರಮಾಣದಲ್ಲಿ ಭೀಮಾ ನದಿಗೆ ಹರಿಸಲಾಗುತ್ತಿದೆ.

ಏಕಾಏಕಿ ಭೀಮಾನದಿಗೆ ಅಪಾರ ಪ್ರಮಾಣ ನೀರು ಹರಿಸಿದ್ದರಿಂದ ತಾಲ್ಲೂಕಿನ ಸೈದಾಪುರ ಸಮೀಪದ ಗೂಡೂರು ಮತ್ತು ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಸುತ್ತಮುತ್ತಲಿನ ಜಮೀನು ಜಲಾವೃತ್ತವಾಗಿದೆ. ಜೋಳದಡಗಿ ಗೇಟ್‌ಗಳು ತೆಗೆಯದಿದ್ದರಿಂದ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ.

ನದಿ ಪಾತ್ರದ ಗ್ರಾಮಗಳಾದ ಗೂಡೂರು, ಜೋಳದಡಗಿ, ಆನೂರು (ಕೆ), ಗೊಂದಡಗಿ, ಭೀಮನಹಳ್ಳಿ, ಆನೂರು (ಬಿ) ಸೇರಿದಂತೆ ಇತರ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಭತ್ತ ನಾಶವಾಗಿದೆ.

ADVERTISEMENT

ಸೈದಾಪುರ-ವಡಗೇರಾ-ರಾಯಚೂರು ಸಂಪರ್ಕ ಕಡಿತ:ಭೀಮಾ ನದಿ ತುಂಬಿ ಹರಿಯುತ್ತಿರುವುದರಿಂದ ನೆರೆಯ ರಾಯಚೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗ ಸಂಪೂರ್ಣ ಕಡಿತಗೊಂಡಿದೆ. ಅಲ್ಲದೆ ಸೈದಾಪುರದಿಂದ ವಡಗೇರಾ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತ್ತವಾಗಿದೆ.

ನಾರಾಯಣಪುರ ಡ್ಯಾಂನಿಂದಲೂ ನೀರು ಬಿಡುಗಡೆ:ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಜಲಾಶಯಕ್ಕೆ 1.50 ಲಕ್ಷ ಕ್ಯುಸೆಕ್‌ ನೀರು ಒಳಹರಿವಿದ್ದರೆ, 1,61,200 ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಏಕಕಾಲಕ್ಕೆ ಕೃಷ್ಣಾ, ಭೀಮಾ ನದಿಗಳ ಪ್ರವಾಹ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.