
ಸುರಪುರ: ‘ಬಾಲ್ಯ ವಿವಾಹ ಸಂಪೂರ್ಣ ಮುಕ್ತಿಯಿಂದ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದು ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಕೊಡುಗೆ ನೀಡುತ್ತದೆ’ ಎಂದು ಪ್ಯಾನೆಲ್ ವಕೀಲ ಪರಮಣ್ಣ ಕಕ್ಕೇರಾ ಹೇಳಿದರು.
ನಗರದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ‘ಬಾಲ್ಯ ವಿವಾಹ ಮುಕ್ತ ಭಾರತ’ ವಿಷಯದ ಕುರಿತು ಅವರು ಮಾತನಾಡಿದರು.
‘ಕೇಂದ್ರ ಮಹಿಳಾ ಮತ್ತು ಅಭಿವೃದ್ಧಿ ಸಚಿವಾಲಯ ನ. 27, 2024 ರಂದು ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಆರಂಭಿಸಿದೆ. ಇದರ ಗುರಿ 2030ರ ವೇಳೆಗೆ ದೇಶವನ್ನು ಬಾಲ್ಯ ವಿವಾಹ ಮುಕ್ತಗೊಳಿಸುವುದು ಆಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದರು.
ವಕೀಲೆ ಪೂಜಾ ನಾಯಕ ಮಾತನಾಡಿ, ‘ಕಾನೂನು ಇಲಾಖೆ ಇತರ ಇಲಾಖೆಗಳ ಸಹಯೋಗದೊಂದಿಗೆ ಬಾಲ್ಯ ವಿವಾಹ ನಿಷೇಧ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ’ ಎಂದರು.
‘ಮಕ್ಕಳು ಪೋಷಕರು ಅಥವಾ ಸಮುದಾಯದ ಒತ್ತಾಯಕ್ಕೆ ಮಣಿದು ಬಾಲ್ಯ ವಿವಾಹಕ್ಕೆ ಒಳಗಾಗಬಾರದು. ಇದರಿಂದ ದುಷ್ಪರಿಣಾಮಗಳು ಹೆಚ್ಚು. ಬಾಲ್ಯ ವಿವಾಹ ಮಾಡಿದ ಇದಕ್ಕೆ ಪ್ರೇರಣೆ ನೀಡಿದ ವ್ಯಕ್ತಿಗಳಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ’ ಎಂದು ತಿಳಿಸಿದರು.
ಪ್ರಾಚಾರ್ಯ ಲಕ್ಷ್ಮಣ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಬಿಆರ್ಪಿ ಖಾದರ್ ಪಟೇಲ ನಿರೂಪಿಸಿದರು. ಶಿಕ್ಷಕ ಜಯರಾಮ ಚವ್ಹಾಣ ವಂದಿಸಿದರು.
ಶಿಕ್ಷಕರಾದ ಮಹೇಶ ಹುಜರತಿ, ಆನಂದಕುಮಾರ, ಮಹ್ಮದ್ ಅಲಿ, ಸರಸ್ವತಿ, ಸಾಬೇರಾ, ನಜಮಾ ತಬಸುಮ, ಫೌಕಿಯಾ, ಮಲ್ಲಮ್ಮ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.