ADVERTISEMENT

16 ಖರೀದಿ ಕೇಂದ್ರಗಳ ತೆರವು; ₹23.78 ಲಕ್ಷ ದಂಡ ವಸೂಲಿ

ಅನಧಿಕೃತ ಹತ್ತಿ ಖರೀದಿ ಕೇಂದ್ರಗಳ ಮೇಲೆ ದಾಳಿ

ಬಿ.ಜಿ.ಪ್ರವೀಣಕುಮಾರ
Published 18 ಡಿಸೆಂಬರ್ 2019, 15:27 IST
Last Updated 18 ಡಿಸೆಂಬರ್ 2019, 15:27 IST
ಅನಧಿಕೃತ ಹತ್ತಿ ಖರೀದಿ ಕೇಂದ್ರಗಳಿಗೆ ಅಧಿಕಾರಿಗಳು ದಾಳಿ ನಡೆಸಿದರು
ಅನಧಿಕೃತ ಹತ್ತಿ ಖರೀದಿ ಕೇಂದ್ರಗಳಿಗೆ ಅಧಿಕಾರಿಗಳು ದಾಳಿ ನಡೆಸಿದರು   

ಯಾದಗಿರಿ: ಜಿಲ್ಲೆಯಲ್ಲಿ 16 ಅನಧಿಕೃತ ಹತ್ತಿ ಖರೀದಿ ಕೇಂದ್ರಗಳ ಮೇಲೆ ಎಪಿಎಂಸಿ ಅಧಿಕಾರಿಗಳು ದಾಳಿ ಮಾಡಿ ₹23.78 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ಒಂದೂವರೆ ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ಪರವಾನಗಿ ಇಲ್ಲದೆ ಖರೀದಿ ಮಾಡುತ್ತಿದ್ದವರಿಗೆ ಶುಲ್ಕದ ಮೂರರಷ್ಟು ದಂಡ ವಿಧಿಸಿ ವಸೂಲಿ ಮಾಡಿದ್ದಾರೆ. ಸರ್ಕಾರಕ್ಕೆ ಸೇರಬೇಕಾಗಿದ್ದ ಶುಲ್ಕವನ್ನು ತಪ್ಪಿಸಿಕೊಳ್ಳುತ್ತಿದ್ದವರಿಗೆ ಹಾಗೂ ತೂಕದಲ್ಲಿ ವ್ಯತ್ಯಾಸ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದವರಿಗೆ ಎಚ್ಚರಿಕೆ ಕೊಟ್ಟಂತಾಗಿದೆ.

ಹತ್ತಿ ಖರೀದಿದಾರರು ಎಪಿಎಂಸಿಯಿಂದ ಲೈಸೆನ್ಸ್‌ ಪಡೆಯಬೇಕು. ಅಲ್ಲದೆ ಮಾರುಕಟ್ಟೆ ಪ್ರಾಂಗಣದಲ್ಲಿಯೇ ಖರೀದಿ ಮಾಡಬೇಕು. ಅನಧಿಕೃತ ಖರೀದಿದಾರರಿಂದ ರೈತರಿಗೆ ನಷ್ಟವೇ ಹೊರತು ಲಾಭ ಇಲ್ಲ.

ADVERTISEMENT

ಅನಧಿಕೃತ ಹತ್ತಿ ಖರೀದಿದಾರರು ರೈತರಿಗೆ ತೂಕದಲ್ಲಿ ಮತ್ತು ದರದಲ್ಲಿ ವ್ಯತ್ಯಾಸ ಮಾಡಿ ಮೋಸ ಮಾಡಿದ ಅನೇಕ ಉದಾಹರಣೆಗಳಿವೆ. ಹೀಗಾಗಿ ಸರ್ಕಾರದ ವತಿಯಿಂದಲೇ ₹5550 ಬೆಂಬಲ ಬೆಲೆ ನೀಡಿ ಖರೀದಿಸಲಾಗುತ್ತಿದೆ.

ಅನಧಿಕೃತ ಹತ್ತಿ ಖರೀದಿ ಕೇಂದ್ರದಲ್ಲಿ ಗುಣಮಟ್ಟದ ತೂಕದ ಯಂತ್ರಗಳಿಲ್ಲ. ತೂಕದಲ್ಲಿ ವಂಚನೆ ಮಾಡಲಾಗುತ್ತಿದೆ ಎಂದು ರೈತರಿಂದ ದೂರುಗಳು ಬಂದಿದ್ದವು.

ರೈತರು ಕಷ್ಟಪಟ್ಟು ಬಿತ್ತನೆ ಮಾಡಿ, ಬೆಳೆ ಕೈಸೇರಲು ಎಕರೆಗೆ 40 ಸಾವಿರ ಖರ್ಚು ತಗುಲುತ್ತಿದೆ. ಇಷ್ಟೆಲ್ಲ ಖರ್ಚಾದರೂ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಅನಧಿಕೃತ ಖರೀದಿದಾರರು ವಂಚಿಸುತ್ತಿದ್ದಾರೆ ಎಂದು ರೈತರು ದೂರುತ್ತಾರೆ.

‘ಎಪಿಎಂಸಿ ಮಾರುಕಟ್ಟೆ ಅಥವಾಖರೀದಿ ಕೇಂದ್ರದಲ್ಲಿ ರೈತರು ನೇರವಾಗಿ ಬಂದು ಮಾರಾಟ ಮಾಡಬೇಕು. ಅನಧಿಕೃತ ಅಂಗಡಿಗಳಲ್ಲಿ ಮಾರಾಟ ಮಾಡಿದರೆ ಮೋಸ ಹೋಗುವುದೇ ಜಾಸ್ತಿ. ಈಗಾಗಲೇ ಅನಧಿಕೃತ ಅಂಗಡಿಗಳ ಮೇಲೆ ದಾಳಿ ನಡೆಸಿ, ದಂಡ ವಿಧಿಸಿ ಅಂಗಡಿಗಳನ್ನು ‌‌‌‌ತೆರವುಗೊಳಿಸಲಾಗಿದೆ. ರೈತರು ಯಾವುದೇಕಾರಣಕ್ಕೂ ಅನಧಿಕೃತ ವ್ಯಾಪಾರಿಗಳ ಮೊರೆ ಹೋಗಬಾರದು’ ಎಂದುಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಭೀಮರಾಯ ಎಂ.ಹೇಳುತ್ತಾರೆ.ಒಂದೂವರೆ ತಿಂಗಳಲ್ಲಿ ಅನಧಿಕೃತ ಹತ್ತಿ ಖರೀದಿ ಕೇಂದ್ರಗಳಿಗೆ ತೆರಳಿ ಅವುಗಳನ್ನು ತೆರವುಗೊಳಿಸಿ ಅವರಿಂದ ದಂಡ ವಸೂಲಿ ಮಾಡಲಾಗಿದೆ ಎಂದುಭೀಮರಾಯತಿಳಿಸಿದರು.

ಈ ಹಿಂದೆ ವರ್ತಕರ ಸಭೆ ಕರೆಯಲಾಗಿತ್ತು. ಎಪಿಎಂಸಿಯಲ್ಲಿ ಮಾರಾಟ ಮಾಡಲು ತಿಳಿಸಲಾಗಿತ್ತು. ಆದರೆ, ಒಬ್ಬರೂ ಬರಲಿಲ್ಲ. ಹೀಗಾಗಿ ಅನಧಿಕೃತವಾಗಿ ತಲೆ ಎತ್ತಿದ ಹತ್ತಿ ಖರೀದಿ ಕೇಂದ್ರಗಳ ಮೇಲೆ ನಿರಂತರ ದಾಳಿ ಮಾಡಲಾಗುತ್ತದೆ ಎಂದುಎಪಿಎಂಸಿಅಧ್ಯಕ್ಷಶರಣಗೌಡ ಕಾಳಬೆಳಗುಂದಿ ತಿಳಿಸಿದರು.

ವಸೂಲಿ ಮಾಡಿರುವ ಮೊತ್ತ (₹ ಲಕ್ಷಗಳಲ್ಲಿ)

ಯಾದಗಿರಿ;₹11 ಲಕ್ಷ

ಶಹಾಪುರ;₹10ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.