ಯಾದಗಿರಿ: ‘ಗೃಹ ದಿಗ್ಬಂಧನದಲ್ಲಿರುವವರು ಕಡ್ಡಾಯವಾಗಿ ಮನೆಯಲ್ಲಿರುವಂತೆ ಪ್ರತಿದಿನ ಗ್ರಾಮ ಮಟ್ಟದಲ್ಲಿ ಡಂಗೂರ ಸಾರುವ ಮೂಲಕ ತಿಳಿಸಲಾಗುತ್ತಿದೆ. ಗೃಹ ದಿಗ್ಬಂಧದಲ್ಲಿರದೆ ಹೊರಗಡೆ ತಿರುಗಾಡಿದರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತಿದೆ’ ಎಂದುಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಎಚ್ಚರಿಕೆ ನೀಡಿದರು.
‘ಈಗಾಗಲೇ ಗೃಹದಿಗ್ಬಂಧನ ಉಲ್ಲಂಘಿಸಿದವರಿಗೆ ಮತ್ತೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಯಾರೂ ಮನೆ ಬಿಟ್ಟು ಹೊರಬರಬಾರದು. ಬಂದರೆ ಅವರ ಮೇಲೆ ಕೇಸ್ ಹಾಕಲಾಗುತ್ತಿದೆ’ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೂನ್ 1ರಿಂದ ಅಜೀಮ್ ಪ್ರೇಮ್ ಜೀ ಫೌಂಡೇಷನ್ ವತಿಯಿಂದ ಗೃಹ ದಿಗ್ಬಂಧನದಲ್ಲಿರುವವರಿಗೆ ಆಹಾರ ಧಾನ್ಯದ ಕಿಟ್ಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಗೆ ವಾಪಸ್ಸಾದ ಸುಮಾರು 15 ಸಾವಿರ ಜನ ಮುಂಬೈ, ಪುಣೆ, ಠಾಣೆ ಸ್ಥಳಗಳಿಂದ ಬಂದವರಾಗಿದ್ದಾರೆ. ಇವರಲ್ಲಿಯೇ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ತ್ವರಿತಗತಿಯಲ್ಲಿ ಪ್ರಕರಣ ಪತ್ತೆ ಹಚ್ಚಲು ದಿನಕ್ಕೆ ಸಾವಿರಕ್ಕಿಂತ ಹೆಚ್ಚಿನ ಮಾದರಿಗಳ ಪರೀಕ್ಷೆ ನಡೆಯುತ್ತಿದೆ. ರಾಜ್ಯ ಸರ್ಕಾರ ಜಿಲ್ಲೆಯ ಮಾದರಿಗಳ ಪರೀಕ್ಷೆಗಾಗಿ ಬೆಂಗಳೂರಿನ ವಿವಿಧ ಲ್ಯಾಬ್ಗಳಲ್ಲಿ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
53 ಜನರ ಬಂಧನ,107 ಎಫ್ಐಆರ್: ಜೂನ್ 8ರವರೆಗೆ 1,657 ವಾಹನಗಳನ್ನು ಜಪ್ತಿ ಮಾಡಲಾಗಿದೆ. 53 ಜನರನ್ನು ಬಂಧಿಸಲಾಗಿದ್ದು, 107 ಎಫ್ಐಆರ್ ದಾಖಲಾಗಿವೆ. ₹35,96,200 ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.
19 ಕಂಟೇನ್ಮೆಂಟ್ ಝೋನ್ ಘೋಷಣೆ: ಜಿಲ್ಲೆಯಲ್ಲಿ 19 ನಿರ್ಬಂಧಿತ ವಲಯ (ಕಂಟೇನ್ಮೆಂಟ್ ಝೋನ್)ಗಳನ್ನು ಗುರುತಿಸಲಾಗಿದ್ದು, ಕಂಟೇನ್ಮೆಂಟ್ ಝೋನ್ ಆ್ಯಪ್ (ಸಿಝಡ್ ಆ್ಯಪ್) ಮುಖಾಂತರ ಶೇಕಡ 60.44 ರಷ್ಟು ಸರ್ವೇ ಮಾಡಲಾಗಿದೆ. ಜಿಲ್ಲೆಯಾದ್ಯಂತ ಮತಗಟ್ಟೆ ಅಧಿಕಾರಿಗಳು, ಶಿಕ್ಷಕರು ಮತ್ತು ಆಶಾ ಕಾರ್ಯಕರ್ತೆಯರಿಂದ ‘ಹೆಲ್ತ್ ವಾಚ್ ಆ್ಯಪ್’ ಮೂಲಕ ನಡೆಸುತ್ತಿರುವ ಕುಟುಂಬಗಳ ಸಾರ್ವತ್ರಿಕ ಸಮೀಕ್ಷೆ ಕಾರ್ಯ ಶೇ.89.65ರಷ್ಟು ಪೂರ್ಣಗೊಂಡಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಇದ್ದರು.
ಎನ್ಜಿಒ ಸಹಯೋಗದಲ್ಲಿ ಗೃಹ ಕ್ವಾರಂಟೈನ್ನಲ್ಲಿ ಇರುವವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿಯನ್ನೇ ನೇಮಿಸಲಾಗಿದೆ
ಎಂ. ಕೂರ್ಮಾರಾವ್, ಜಿಲ್ಲಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.