
ವಡಗೇರಾ ದೇಶದಲ್ಲಿ ಆರ್ಎರ್ಎಸ್ ಸಂಘಟನೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷಸಮಿತಿ ತಾಲ್ಲೂಕು ಘಟಕ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು
ವಡಗೇರಾ: ‘ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಿ ಜನರನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡಿ ಬ್ರಾಹ್ಮಣ್ಯವಾದಿಗಳು ಅಧಿಕಾರವನ್ನು ನಿರಂತರವಾಗಿ ಅನುಭವಿಸಲು ಆರ್ಎಸ್ಎಸ್ ಕುತಂತ್ರ ಮಾಡುತ್ತಿದ್ದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ಗೆ ಸಲ್ಲಿಸಿದರು.
‘1950 ರ ದಶಕದಲ್ಲಿಯೇ ಅಂಬೇಡ್ಕರ್ ಅವರು ಯಾವುದೇ ಕಾರಣಕ್ಕೂ ಆರ್ಎಸ್ಎಸ್ ಹಾಗೂ ವಿಶ್ವ ಹಿಂದೂ ಮಹಾಸಭಾದಂತಹ ಸಂಘಟನೆಗಳೊಂದಿಗೆ ಹೊಂದಾಣಿಕೆ ಮಾಡಕೊಳ್ಳಬಾರದೆಂದು ರಾಜಕೀಯ ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರಣಾಳಿಕೆಯಲ್ಲಿ ಎಚ್ಚರಿಕೆ ನೀಡಿದ್ದರು’ ಎಂದು ತಿಳಿಸಿದರು.
‘ಭಾರತ ಸಂವಿಧಾನ ಜಾರಿಗೊಂಡಾಗ ಇದೇ ಆರ್ಎಸ್ಎಸ್ ಪತ್ರಿಕೆಯಾದ ಆರ್ಗನೈಜರ್ನಲ್ಲಿ ಭಾರತದ ಸಂವಿಧಾನದಲ್ಲಿ ಏನೂ ಇಲ್ಲ ನಮ್ಮ ಮನುಸ್ಮೃತಿ ಪ್ರಾಚೀನವಾಗಿದ್ದು ಎಂದು ಅಂದಿನಿಂದಲೂ ಭಾರತದ ಸಂವಿಧಾನವನ್ನು ತಿರಸ್ಕರಾದದಿಂದ ನೋಡುತ್ತಿದ್ದಾರೆ’ ಎಂದರು.
ಅಲ್ಲದೇ ಇತ್ತೀಚೆಗೆ ಭಾರತದ ಮುಖ್ಯ ನ್ಯಾಯದೀಶರಾದ ನ್ಯಾ. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ ಕಿಶೋರ ಸನಾತನ ಧರ್ಮ ಉಳಿಸಲು ಈ ಕೃತ್ಯ ಮಾಡಿದ್ದೇನೆ ಎಂದು ಹೇಳಿದ್ದಾನೆ. ಇಂತವರಿಗೆ ಇದೇ ಆರ್ಎಸ್ಎಸ್ ಹಾಗೂ ಬಿಜೆಪಿಗರೇ ಬೆಂಬಲ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಜೀವ ಬೆದರಿಕೆ ಹಾಕಿದ ಮತ್ತು ನ್ಯಾ. ಗವಾಯಿ ಅವರ ಮೇಲೆ ಶೂ ಎಸೆದ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಂಘಟನೆ ತಾಲ್ಲೂಕು ಸಂಚಾಲಕ ಗುರುನಾಥ ನಾಟೇಕಾರ, ಮಲ್ಲಿಕಾರ್ಜುನ ಗೋನಾಲ, ಮರುಳಸಿದ್ದ ನಾಯ್ಕಲ್, ದೇವಪ್ಪ ಗೊನಾಲ, ಸಂತೋಷ ಪುಜಾರಿ, ಪ್ರಭು ಮಾಗನೂರ,ಫಕೀರ್ ಅಹ್ಮದ ಮರಡಿ, ಶರಣಪ್ಪ ಕುರಕಳ್ಳಿ, ಶರಣಪ್ಪ ಕುರಿ, ರಾಮು ಪುಜಾರಿ ಸೇರಿದಂತೆ ಇನ್ನೀತರರು ಇದ್ದರು.