
ವಡಗೇರಾ: ‘ಬಡವರ ಹಾಗೂ ಮಹಿಳೆಯರ ಶ್ರೇಯೋಭಿವೃದ್ಧಿಗೆ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭವಾಗಿದೆ’ ಎಂದು ಉತ್ತರ ಕರ್ನಾಟಕದ ಕರವೇ ಅಧ್ಯಕ್ಷ ಶರಣು ಬಿ. ಗದ್ದುಗೆ ಹೇಳಿದರು.
ತಾಲ್ಲೂಕಿನ ಸಮೀಪದ ಖಾನಾಪೂರ ಗ್ರಾಮದಲ್ಲಿ ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆ ಗುರುಸಣಗಿ ವಲಯದಿಂದ ಹಮ್ಮಿಕೊಂಡಿದ್ದ ಸಾಮೂಹಿಕ ವಿಷ್ಣು ಸಹಸ್ರನಾಮ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ವೀರೇಂದ್ರ ಹೆಗ್ಗಡೆ ಅವರು ಬಡವರ ಹಾಗೂ ಮಹಿಳೆಯರ ಬಗ್ಗೆ ಅಪಾರ ಪ್ರಮಾಣದ ಕಾಳಜಿ ಹೊಂದಿದ್ದಾರೆ. ಹೀಗಾಗಿ ಅವರ ಆರ್ಥಿಕ ಅಭಿವೃದ್ಧಿಗೆ ಯೋಜನೆ ರೂಪಿಸಿ, ಅದರ ಮುಖಾಂತರ ಕಾರ್ಯರೂಪಕ್ಕೆ ತರಲು ಹಗಳಿರುಳು ಶ್ರಮಿಸುತ್ತಿದ್ದಾರೆ’ ಎಂದು ತಿಳಿಸಿದರು.
‘ನಮ್ಮ ಜಿಲ್ಲೆಯಲ್ಲಿಯೂ ಕೂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪರಿಣಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಅವರ ಕಾರ್ಯ ಶ್ಲಾಘನೀಯವಾಗಿದೆ’ ಎಂದರು.
ಕಲಬುರಗಿಯ ಪ್ರಾದೇಶಿಕ ನಿರ್ಧೇಶಕ ದಿನೇಶ ಪೂಜಾರಿ ಮಾತನಾಡಿ, ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡುಬಡವರು ಮಧ್ಯಮ ವರ್ಗದವರಿಗೆ ಬ್ಯಾಂಕ್ ಸಾಲಸೌಲಭ್ಯ ಒದಗಿಸುವುದು’ ಎಂದು ಹೇಳಿದರು.
‘ಸಮುದಾಯ ಅಭಿವೃದ್ಧಿ ಚಟುವಟಿಕೆಗಳಾದ ಕೆರೆ ಹೂಳೆತ್ತುವುದು, ದೇವಸ್ಥಾನಗಳ ಜೀರ್ಣೋದ್ಧಾರ, ಶಾಲಾ-ಕಾಲೇಜುಗಳಿಗೆ ಪೀಠೋಪಕರಣ, ವೃದ್ಧರಿಗೆ ಮಾಸಾಶನ, ಶಾಲಾ ಮಕ್ಕಳಿಗೆ ಸುಜ್ಞಾನದ ಶಿಕ್ಷಾ ವೇತನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ’ ಎಂದು ಹೇಳಿದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಗೋವಿಂದಪ್ಪ ಕೊಂಚೆಟ್ಟಿ, ಎವೈ ಪದ್ಮಾಕರ, ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ರಾಘವೇಂದ್ರ ನಾಶಿ, ನಾಗಶೆಟ್ಟಿ ಸಾಹು ಅಂಗಡಿ, ಸಿದ್ದಪ್ಪ ಬಡಿಗೇರ, ಭೀಮರಾಯ ಹೊಸಮನಿ, ಪರಶುರಾಮ, ಅಂಬಾಶಂಕರ, ಭರಮಪ್ಪ ಬೆಳಗುಂದಿ, ಮನೋಜ್ಕುಮಾರ, ಮಹೇಶ ಬಳ್ಳಟ್ಟಿ, ಅಡಿವೆಪ್ಪ ಜಾಕ, ಯೋಜನಾಧಿಕಾರಿಗಳಾದ ಕಲ್ಲಪ್ಪ, ಗೋಪಾಲ, ಮೇಲ್ವಿಚಾರಕಿ ಸಿದ್ದಮ್ಮ ನಾಯ್ಕಲ್ ಆಂತರಿಕ ಲೆಕ್ಕ ಪರಿಶೋಧಕರು, ಒಕ್ಕೂಟ ಪದಾಧಿಕಾರಿಗಳು, ವಲಯ ವ್ಯಾಪ್ತಿಯ ಸ್ವಸಹಾಯ ಸಂಘಗಳ ನೂರಾರು ಮಹಿಳಾ ಸದಸ್ಯರು, ವಲಯ ಸೇವಾ ಪ್ರತಿನಿಧಿಗಳು, ವಿಎಲ್ಇಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.