ADVERTISEMENT

ಕೆಂಭಾವಿ: ಚರಂಡಿ ವ್ಯವಸ್ಥೆ ಸರಿಪಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜೂನ್ 2023, 14:06 IST
Last Updated 27 ಜೂನ್ 2023, 14:06 IST
ಕೆಂಭಾವಿ ಪಟ್ಟಣದ ಹಿಂದಿನ ಬಜಾರ ರಸ್ತೆಯಲ್ಲಿ ಚರಂಡಿ ನೀರು ರಸ್ತೆ ಮೇಲೆಯೇ ನಿಂತಿರುವುದು
ಕೆಂಭಾವಿ ಪಟ್ಟಣದ ಹಿಂದಿನ ಬಜಾರ ರಸ್ತೆಯಲ್ಲಿ ಚರಂಡಿ ನೀರು ರಸ್ತೆ ಮೇಲೆಯೇ ನಿಂತಿರುವುದು   

ಕೆಂಭಾವಿ: ಅವೈಜ್ಞಾನಿಕವಾಗಿ ಚರಂಡಿಯಿಂದ ನಿರ್ಮಿಸಿರುವುದರಿಂದ ಪಟ್ಟಣದ ಹಿಂದಿನ ಬಜಾರ್ ಬಳಿ ರಸ್ತೆಯಲ್ಲೇ ಕೊಳಚೆ ನೀರು ನಿಲ್ಲುತ್ತಿದೆ. ಜನರಿಗೆ ಸಾಕಷ್ಟು ತೊಂದರೆಯಾದರೂ ಯಾವ ಅಧಿಕಾರಿ, ಜನಪ್ರತಿನಿದಿಗಳು ಇತ್ತ ಗಮನ ಹರಿಸಿಲ್ಲ.

ಸ್ವಲ್ಪ ಮಳೆಯಾದರೆ, ನಲ್ಲಿ ನೀರು ಜಾಸ್ತಿ ಹೊತ್ತು ಬಂದರೂ ಹಿಂದಿನ ಬಜಾರ ರಸ್ತೆಗಳೆಲ್ಲ ಚರಂಡಿಗಳಾಗಿ ಮಾರ್ಪಾಡಾಗುತ್ತವೆ. ವಿದ್ಯಾರ್ಥಿಗಳು, ವೃದ್ಧರು ಅಡ್ಡಾಡಲು ಕಷ್ಟಪಡುವಂತಾಗಿದೆ. ಸೊಳ್ಳೆಗಳ ಕಾಟವೂ ಹೆಚ್ಚಾಗುತ್ತಿದ್ದು ಜನರು ಸಾಂಕ್ರಾಮಿಕ ರೋಗದ ಭಯದಲ್ಲೇ ಜೀವಿಸುತ್ತಿದ್ದಾರೆ. ಸಂತೆಯ ದಿನ (ಸೋಮವಾರ) ಬಂದರಂತೂ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಬೇರೆ ಬೇರೆ ಊರುಗಳಿಂದ ಬರುವ ಜನ ಶಾಪ ಹಾಕಿ ಹೋಗುವಂತಾಗಿದೆ.

ರಸ್ತೆ ವಿಸ್ತರಣೆ ಹಾಗೂ ಚರಂಡಿ ನಿರ್ಮಾಣಕ್ಕಾಗಿ ಟೆಂಡರ್ ಕರೆದಿದ್ದರೂ ಕಾಮಗಾರಿ ಆರಂಭಿಸಿಲ್ಲ. ಅಧಿಕಾರಿಗಳು ನೋಡಿಯೂ ನೋಡದಂತಿದ್ದಾರೆ. ಆದಷ್ಟು ಶೀಘ್ರದಲ್ಲಿಯೇ ಚರಂಡಿ ವ್ಯವಸ್ಥೆ ಸರಿಪಡಿಸದಿದ್ದರೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸ್ಥಳೀಯರಾದ ರಾಜಶೇಖರಯ್ಯ ಚಿಕ್ಕಮಠ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.