ADVERTISEMENT

ಶೇಂಗಾ ದರ ಕುಸಿತ; ₹12 ಸಾವಿರ ದರ ನಿಗದಿಗೆ ಆಗ್ರಹ

ಶೇಂಗಾ ದರ ಕುಸಿತ; ರಸ್ತೆ ಸಂಚಾರ ತಡೆದು ರೈತ ಸಂಘಟನೆ, ಬೆಳೆಗಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 3:05 IST
Last Updated 7 ಫೆಬ್ರುವರಿ 2026, 3:05 IST
ಯಾದಗಿರಿ ನಗರದ ಎಪಿಎಂಸಿ ಮುಂಭಾಗದ ರಸ್ತೆಯಲ್ಲಿ ಶುಕ್ರವಾರ ರೈತ ಸಂಘಟನೆಯ ಮುಖಂಡರು, ರೈತರು ಪ್ರತಿಭಟನೆ ನಡೆಸಿದರು
ಯಾದಗಿರಿ ನಗರದ ಎಪಿಎಂಸಿ ಮುಂಭಾಗದ ರಸ್ತೆಯಲ್ಲಿ ಶುಕ್ರವಾರ ರೈತ ಸಂಘಟನೆಯ ಮುಖಂಡರು, ರೈತರು ಪ್ರತಿಭಟನೆ ನಡೆಸಿದರು   

ಯಾದಗಿರಿ: ಶೇಂಗಾ ಧಾರಣೆ ಏಕಾಏಕಿ ಕುಸಿದ ಹಿನ್ನೆಲೆಯಲ್ಲಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗದಲ್ಲಿ ರಸ್ತೆ ಸಂಚಾರ ತಡೆದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಮುಖಂಡರು ಹಾಗೂ ಶೇಂಗಾ ಬೆಳೆಗಾರರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಹೋರಾಟಗಾರರು, ಬೆಳೆಗಾರರು ಎಪಿಸಿಎಂಸಿ ಮುಂದೆ ಜಮಾಯಿಸಿದರು. ಗಂಟೆಗಳ ಕಾಲ ರಸ್ತೆ ತಡೆದು ರಾಜ್ಯ ಸರ್ಕಾರ, ದಲ್ಲಾಳಿಗಳ ವಿರುದ್ಧ ಘೋಷಣೆ ಕೂಗಿದರು. ಪ್ರತಿ ಕ್ವಿಂಟಲ್‌ಗೆ ₹ 12 ಸಾವಿರ ದರ ನಿಗದಿ ಮಾಡಿ, ಖರೀದಿ ಕೇಂದ್ರಗಳನ್ನು ಸಹ ತೆರೆಯಬೇಕು ಎಂದು ಆಗ್ರಹಿಸಿದರು.

‘ರೈತರು ಬೆಳೆದ ಎಲ್ಲ ಬೆಳೆಗಳಿಗೆ ಸಮರ್ಪಕವಾಗಿ ಖರೀದಿ ಕೇಂದ್ರಗಳನ್ನು ವರ್ಷಪೂರ್ತಿ ತೆರೆಯಬೇಕು. ಹತ್ತಿ, ತೊಗರಿ, ಭತ್ತ, ಉದ್ದು, ಹೆಸರು, ಶೇಂಗಾ ಸೇರಿದಂತೆ ಇತರೆ ಬೆಳೆಗಳನ್ನು ಖರೀದಿ ಕೇಂದ್ರಗಳ ಮೂಲಕ ಎಂಎಸ್‌ಪಿ ದರದಲ್ಲಿ ಕೊಳ್ಳಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ADVERTISEMENT

‘ಮಳೆ ಹಾಗೂ ನೆರೆಯಿಂದಾಗಿ ರೈತರು ಸಂಕಷ್ಟದಲ್ಲಿ ಇದ್ದಾರೆ. ಮುಂಗಾರ ಹಂಗಾಮಿನಲ್ಲಿ ಬೆಳೆ ಕಳೆದುಕೊಂಡಿದ್ದ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಶೇಂಗಾ ಬಿತ್ತನೆ ಮಾಡಿದ್ದಾರೆ. ಬೆಲೆ ಕುಸಿದಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಅವರ ನೆರವಿಗೆ ಧಾವಿಸಲು ಪ್ರತಿ ಕ್ವಿಂಟಲ್ ಶೇಂಗಾಕ್ಕೆ ₹ 12 ಸಾವಿರ ನಿಗದಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ಎಪಿಎಂಸಿಯಲ್ಲಿ ಕೆಲ ವರ್ತಕರು ತೂಕದಲ್ಲಿ ಕಡಿಮೆ ಮಾಡಿ, ಸೂಟ್‌ ಮುರಿಯುತ್ತಿದ್ದಾರೆ. ಹಮಾಲರು ಸಹ ಶೇಂಗಾ ನೆಲಕ್ಕೆ ಸುರಿದು ಸಾಕಷ್ಟು ಪ್ರಮಾಣದಲ್ಲಿ ಶೇಂಗಾ ತೆಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟು ಆಗುತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ. ತೂಕ, ಸೂಟ್‌ ನೆಪದಲ್ಲಿ ಆಗುತ್ತಿರುವ ಅನ್ಯಾಯವನ್ನು ತಡೆದು, ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು’ ಎಂದರು.

ಈ ವೇಳೆ ಮಾತನಾಡಿ ರೈತ ಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮಿಕಾಂತ ಎ.ಪಾಟೀಲ, ‘ಸಿಎಂ ಸಿದ್ದರಾಮಯ್ಯ ಅವರು ರೈತ ಸಂಘಟನೆಯಿಂದ ಬಂದವರು. ರೈತರ ಸಂಕಷ್ಟಗಳು ಚೆನ್ನಾಗಿ ಗೊತ್ತಿದ್ದು, ಕೂಡಲೇ ಅವರ ನೆರವಿಗೆ ಬರಬೇಕು. ಉತ್ತಮ ದರಕ್ಕೆ ಶೇಂಗಾ ಖರೀದಿಸಲು ಹೊರ ರಾಜ್ಯಗಳಿಂದ ವರ್ತಕರು ಬರುತ್ತಿದ್ದಾರೆ. ಸ್ಥಳೀಯ ಏಜೆಂಟರ್‌ಗಳು ಅವರನ್ನು ತಡೆದು ಕಡಿಮೆ ಬೆಲೆಗೆ ಕೊಂಡು, ತಾವು ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನಿಯಂತ್ರಣ ತರಬೇಕಿದೆ’ ಎಂದು ಹೇಳಿದರು.

ಜಿಲ್ಲಾ ಅಧ್ಯಕ್ಷ ಮಹಾವೀರ ಲಿಂಗೇರಿ ಮಾತನಾಡಿ, ‘ತೊಗರಿ, ಹೆಸರು ನಾಶವಾಗಿದೆ. ಕೈಗೆ ಸಿಕ್ಕಿರುವ ಶೇಂಗಾ ಬೆಳೆಗೆ ಸರಿಯಾದ ಬೆಲೆ ಸಿಗದೆ ಬೆಳೆಗಾರರು ಕಂಗಾಲಾಗಿದ್ದಾರೆ’ ಎಂದರು.

ಪ್ರತಿಭಟನೆಯಲ್ಲಿ ಮುಖಂಡರಾದ ಶ್ರೀಕಾಂತ ಕಂಬಾರ, ತಾಯಪ್ಪ ನಾಗ್ಲಾಪುರ, ನಿಂಗಪ್ಪ ಗುಡಗುಡಿ, ಸುಭಾಷ, ಮಲ್ಲಿಕಾರ್ಜುನ ಹೊನಗೇರಾ ಸೇರಿದಂತೆ ರೈತರು ಪಾಲ್ಗೊಂಡಿದ್ದರು.

ಕಾರ್ಯದರ್ಶಿಯೊಂದಿಗೆ ವಾಗ್ವಾದ

‘ಸರ್ಕಾರದ ಬೆಂಬಲ ಬೆಲೆಗಿಂತ ಮುಕ್ತ ಮಾರುಕಟ್ಟೆಯಲ್ಲಿ ಮಾದರಿ ದರ ₹7424 ಇದೆ. ರೈತರು ಉತ್ಪನ್ನವನ್ನು ಮಣ್ಣು ಕಸ ಕಡ್ಡಿ ಇದ್ದರೆ ಸ್ವಚ್ಛ ಮಾಡಿಕೊಂಡು ಬಂದರೆ ಉತ್ತಮ ದರ ಸಿಗುತ್ತದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಶಿವಕುಮಾರ ಹೇಳುತ್ತಿದ್ದಂತೆ ರೈತರು ಆಕ್ಷೇಪ ವ್ಯಕ್ತಪಡಿಸಿ ವಾಗ್ವಾದಕ್ಕೆ ಇಳಿದರು. ‘ಶೇಂಗಾವನ್ನು ಮಣ್ಣಲ್ಲಿ ಬೆಳೆಯುತ್ತಿವೆ. ಸ್ವಲ್ಪವೂ ಮಣ್ಣು ಹತ್ತ ಬಾರದು ಎಂದರೆ ಹೇಗೆ? ಕಲ್ಲಿನಲ್ಲಿ ಬೆಳೆದು ತರಲು ಆಗುತ್ತದೆಯಾ? ರೈತರಿಗೆ ಅವಮಾನ ಮಾಡುತ್ತಿದ್ದಿರಾ’ ಎಂದು ಪ್ರತಿಭಟನಾ ನಿರತರು ವಾಗ್ವಾದಕ್ಕೆ ಇಳಿದರು. ಡಿಎಸ್‌ಪಿ ಸುರೇಶ ನಾಯಕ ಸಿಪಿಐ ಸುನಿಲ್ ವಿ.ಮೂಲಿಮನಿ ಪಿಎಸ್‌ಐ ಮಂಜನಗೌಡ ಅವರು ಸಮಾಧಾನಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.