ADVERTISEMENT

ಯಾದಗಿರಿ: ಪರಿಹಾರಕ್ಕೆ ವಾರದ ಗಡುವು ನೀಡಿದ ನ್ಯಾಯಾಧೀಶರು

ಅರಕೇರಾ (ಕೆ) ಗ್ರಾಮದ ಕಸ್ತೂರಿ ಬಾ ಗಾಂಧಿ ವಸತಿ ಶಾಲೆಗೆ ನ್ಯಾ.ಮರಿಯಪ್ಪ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 7:13 IST
Last Updated 20 ಜುಲೈ 2025, 7:13 IST
ಯಾದಗಿರಿ ತಾಲ್ಲೂಕಿನ ಅರಕೇರಾ (ಕೆ) ಗ್ರಾಮದ ಕಸ್ತೂರಿ ಬಾ ಗಾಂಧಿ ವಸತಿ ಶಾಲೆಗೆ ಶನಿವಾರ ನ್ಯಾಯಾಧೀಶ ಮರಿಯಪ್ಪ ಭೇಟಿ ನೀಡಿ ಮಕ್ಕಳಿಂದ ಮಾಹಿತಿ ಪಡೆದರು
ಯಾದಗಿರಿ ತಾಲ್ಲೂಕಿನ ಅರಕೇರಾ (ಕೆ) ಗ್ರಾಮದ ಕಸ್ತೂರಿ ಬಾ ಗಾಂಧಿ ವಸತಿ ಶಾಲೆಗೆ ಶನಿವಾರ ನ್ಯಾಯಾಧೀಶ ಮರಿಯಪ್ಪ ಭೇಟಿ ನೀಡಿ ಮಕ್ಕಳಿಂದ ಮಾಹಿತಿ ಪಡೆದರು   

ಯಾದಗಿರಿ: ಮಕ್ಕಳಿಂದಲೇ ಶೌಚಾಲಯ ಸ್ವಚ್ಛಗೊಳಿಸುವ ಮೂಲಕ ಸುದ್ದಿಯಾಗಿದ್ದ ತಾಲ್ಲೂಕಿನ ಅರಕೇರಾ (ಕೆ) ಗ್ರಾಮದ ಕಸ್ತೂರಿ ಬಾ ಗಾಂಧಿ ವಸತಿ ಶಾಲೆಗೆ ಶನಿವಾರ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಸತಿ ನಿಲಯ, ಅಡುಗೆ ಕೋಣೆ, ಶೌಚಾಲಯ ಸ್ಥಳ, ಶಾಲಾ ಕೋಣೆ ಹೀಗೆ ಎಲ್ಲ ಕಡೆ ಸಂಚರಿಸಿ ಅಲ್ಲಿನ ವಾತಾವರಣ ವೀಕ್ಷಿಸಿದರು.

ಇದೇ ವೇಳೆ ವಸತಿ ನಿಲಯದ ಮಕ್ಕಳನ್ನು ಮಾತನಾಡಿಸಿದ ನ್ಯಾಯಾಧೀಶ ಮರಿಯಪ್ಪ ಅವರ ಸಮಸ್ಯೆಗಳನ್ನು ಆಲಿಸಿದರು. ಮಕ್ಕಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳು ಕಣ್ಣಿಗೆ ಕಟ್ಟಿದಂತಾದವು. ಶೌಚಾಲಯ ಶುಚಿಗೊಳಿಸಲು ಯಾರೂ ಇಲ್ಲ. ಕಳೆದ ಫೆಬ್ರುವರಿ ತಿಂಗಳಿಂದ ಮಾಸಿಕವಾಗಿ ನೀಡುವ ಉಪಯುಕ್ತ ವಸ್ತುಗಳ ಕಿಟ್ ವಿತರಿಸಿಲ್ಲ. ತರಕಾರಿ ಎಲ್ಲೆಂದರಲ್ಲಿ ಚೆಲ್ಲುವ, ಕೆಟ್ಟಿರುವ ಇನ್‌ವರ್ಟರ್‌, ಗುಡ್ಡಕ್ಕೆ ಹೊಂದಿಕೊಂಡಿರುವ ಈ ಸ್ಥಳಕ್ಕೆ ಆಗಾಗ ಕಾಣಿಸಿಕೊಳ್ಳುವ ಹಾವು, ಚೇಳುಗಳು, ಕಸದ ರಾಶಿ ಹಾಕಿರುವ ಬಗ್ಗೆ ಹೀಗೆ ಹಲವು ಸಮಸ್ಯೆಗಳು ಮಕ್ಕಳಿಂದ ಕೇಳಿದ ಅವರು ದಂಗಾದರು.

ADVERTISEMENT

ಈ ಸಮಸ್ಯೆಗಳ ನಡುವೆ ಮಕ್ಕಳು ಹೇಗೆ ಇರಬೇಕು? ಹೇಗೆ ಅಭ್ಯಾಸ ಮಾಡಬೇಕು? ಇದೆಲ್ಲವೂ ಒಂದು ವಾರದಲ್ಲಿ ಬಗೆಹರಿಸಬೇಕು ಎಂದು ಡಿಡಿಪಿಐ ಸಿ.ಎಸ್.ಮುಧೋಳ ಅವರಿಗೆ ಸೂಚಿಸಿದರು.

ಈ ವಸತಿ ಸಹಿತ ಶಾಲಾ ಕಟ್ಟಡ ಮತ್ತು ವಾತಾವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನ್ಯಾಯಾಧೀಶರು, ಇದರ ಉಸ್ತುವಾರಿ ಸರಿಯಿಲ್ಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಒಗ್ಗಟ್ಟಿನಿಂದ ಇದ್ದು ಎಲ್ಲವೂ ಕೆಲಸ ಮಾಡಿ. ಆದರೆ, ಆ ವಾತಾವರಣ ಇಲ್ಲಿ ಕಾಣಿಸುತ್ತಿಲ್ಲ ಎಂದರು. ಇಲ್ಲಿನ‌ ಉಸ್ತುವಾರಿಗಳಾದವರು ಎಲ್ಲವೂ‌ ಗಮನಿಸಿ ಮಕ್ಕಳ ಹಿತ ಕಾಪಾಡಬೇಕು ಎಂದು ಸೂಚಿಸಿದರು.

ಒಂದು ವಾರದ ನಂತರ ಮತ್ತೆ ಭೇಟಿ ನೀಡುತ್ತೇನೆ. ಅಷ್ಟರಲ್ಲಿ ಎಲ್ಲವೂ ಸರಿ ಆಗಬೇಕು ಎಂದು ನ್ಯಾಯಾಧೀಶರು ಸೂಚನೆ ನೀಡಿದರು.

ಕಿಟ್‌ಗಳ ವಿತರಣೆ: ಸ್ಥಳದಲ್ಲಿಯೇ ಕಿಟ್‌ಗಳ ವ್ಯವಸ್ಥೆ ಮಾಡಿದ ಡಿಡಿಪಿಐ ಮುಧೋಳ್ ಅವರು, ಶೌಚಾಲಯ ಸ್ವಚ್ಛತೆಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು ಎಂದರು.

ಬಿಇಒ ಜಾನೆ, ಮುಖ್ಯಶಿಕ್ಷಕಿ ನಿವೇದಿತಾ ಪಟ್ಟೇದಾರ್‌ ಸೇರಿದಂತೆ ಬಿಆರ್‌ಸಿ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.

ಆಯುಕ್ತರಿಗೆ ವರದಿ ಸಲ್ಲಿಕೆ:

ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ವರದಿ ತರಿಸಿ ಸೂಕ್ತ ಕ್ರಮಕ್ಕಾಗಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಕಳುಹಿಸಲಾಗಿದೆ. ಹೊರಗುತ್ತಿಗೆ ಆಧಾರದ ಮೇಲಿರುವ ವಾರ್ಡನ್ ಅವರನ್ನು ಬದಲಾಯಿಸಲು ಸೂಚಿಸಲಾಗಿದೆ. ಸಿ.ಎಸ್.ಮುಧೋಳ ಡಿಡಿಪಿಐ ಯಾದಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.