ADVERTISEMENT

ಯಾದಗಿರಿ: ಬಿಜೆಪಿ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಅಸಮಾಧಾನ, ವಾಗ್ವಾದ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 18:08 IST
Last Updated 3 ಏಪ್ರಿಲ್ 2024, 18:08 IST
   

ಯಾದಗಿರಿ: ಜಿಲ್ಲೆಯ ಗುರುಮಠಕಲ್‌ ಪಟ್ಟಣದಲ್ಲಿ ಬುಧವಾರ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರಿಗೆ ಕಾರ್ಯಕರ್ತರ ಅಸಮಾಧಾನ, ವಾಗ್ವಾದದ ಬಿಸಿ ತಟ್ಟಿದೆ.

ಪಟ್ಟಣದ ಜಿ.ಎಚ್‌. ಫಂಕ್ಷನ್‌ ಹಾಲ್‌ನಲ್ಲಿ ಬುಧವಾರ ಬಿಜೆಪಿ ಮುಖಂಡರ, ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಸಭೆಗೆಂದು ಬಂದವರಲ್ಲಿ ಗುಂಪುಗಾರಿಕೆ ಕಂಡುಬಂದಿತು.

ಸಭೆಗೆ ಆಗಮಿಸಿದ್ದ ನಾಯಕಿ ನಾಗರತ್ನಾ ಕುಪ್ಪಿ ಅವರನ್ನು ವೇದಿಕೆ ಬಾರದಂತೆ ತಡೆದದ್ದು ವಾಗ್ವಾದಕ್ಕೆ ಕಾರಣವಾಗಿದೆ.

ADVERTISEMENT

ಮೋದಿಯವರಿಗಾಗಿ ನಾನು ಚುನಾವಣೆಯಲ್ಲಿ ದುಡಿಯುವುದಾಗಿ ಹೇಳಿದ ನಾಗರತ್ನಾ ಕುಪ್ಪಿ ಅವರು ತಮ್ಮ ಬೆಂಬಲಿಗರನ್ನು ಶಾಂತಗೊಳಿಸಿದರು.

ಜತೆಗೆ 'ಕಳೆದ ಚುನಾವಣೆ ನಂತರ ಈವರೆಗೂ ಕ್ಷೇತ್ರಕ್ಕೆ ಬರಲಿಲ್ಲ, ಕಾರ್ಯಕರ್ತರಿಗೆ ಸಿಗಲಿಲ್ಲ, ಈಗ ಮತ್ತೆ ಚುನಾವಣೆ ವೇಳೆ ಬಂದಿದ್ದೀರಿ. ಜನರಿಗೆ ನಾವೇನೆಂದು ಮತ ಕೇಳಬೇಕು' ಎಂದು ಡಾ.ಉಮೇಶ ಜಾಧವ್‌ ಅವರನ್ನು ಕೆಲ ಬಿಜೆಪಿ ಕಾರ್ಯಕರ್ತರು ತರಾಟೆ ತೆಗೆದುಕೊಂಡು, ಅಸಮಾಧಾನ ಹೊರಹಾಕಿದರು.

ಅಲ್ಲದೇ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅಮೀನರೆಡ್ಡಿ ಯಾಳಗಿಯವರು ವೇದಿಕೆಯಲ್ಲಿ ಕುಳಿತುಕೊಳ್ಳದೇ ಕಾರ್ಯಕರ್ತರ ಪಕ್ಕದಲ್ಲಿಯೇ ಆಸೀನರಾಗಿದ್ದರು. ವೇದಿಕೆ ಮೇಲೆ ಸಂಸದ ಡಾ.ಉಮೇಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ‍, ರಾಜ್ಯ ಬಿಜೆಪಿ ನಾಯಕಿ ಲಲಿತಾ ಅನಪುರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.