
ಕೆಂಭಾವಿ: ಕಳೆದ ಕೆಲವು ದಿನಗಳಿಂದ ಪಟ್ಟಣ ಸೇರಿದಂತೆ ಹಲವೆಡೆ ಕಳ್ಳರು ತಮ್ಮ ಕೈ ಚಳಕ ತೋರಿಸುತ್ತಿದ್ದು ಇದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ.
ಹೊಲಗದ್ದೆಗಳಲ್ಲಿ ಅಳವಡಿಸಿರುವ ರೈತರ ಪಂಪ್ಸೆಟ್ ಹಾಗೂ ಬೆಲೆಬಾಳುವ ಮೋಟಾರ ಕೇಬಲ್ಗಳನ್ನು ಕಳ್ಳರು ಕದಿಯುತ್ತಿದ್ದು ರೈತರ ಗೋಳಾಟ ಕೇಳುವವರು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ.
ಪ್ರಮುಖವಾಗಿ ಕೃಷ್ಣಾ ಕಾಲುವೆಯ ಪಕ್ಕದಲ್ಲಿ ಅಳವಡಿಸಿರುವ ಮೋಟಾರ್ಗಳನ್ನೆ ಗುರಿಯಾಗಿಸಿಕೊಂಡಿರುವ ಕಳ್ಳರು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ರೈತರಿಂದ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂಥಾ ಘಟನೆ ಸೋಮವಾರ ರಾತ್ರಿ ಸಂಭವಿಸಿದ್ದು ನಾರಾಯಣಪುರ ಎಡದಂಡೆ ಕಾಲುವೆಯಿಂದ ಜೇವರ್ಗಿ ಶಾಖಾ ಕಾಲುವೆಯ ಪಕ್ಕದಲ್ಲಿ ಅಳವಡಿಸಿದ್ದ ಹತ್ತಾರು ಮೋಟಾರ್ಗಳ ಕೇಬಲ್ಗಳನ್ನು ಕಳ್ಳತನ ಮಾಡಲಾಗಿದೆ ಇದರಲ್ಲಿ ಪಟ್ಟಣದ ಅನೇಕ ಪ್ರಮುಖರ ಜಮೀನುಗಳಲ್ಲಯೂ ಕಳ್ಳತನವಾಗಿದ್ದು ಇದರಿಂದ ರೈತರು ಚಿಂತೆಗೀಡಾಗಿದ್ದಾರೆ.
ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಗ ಮೌಖಿಕವಾಗಿ ದೂರು ನೀಡಿರುವ ರೈತರು ಕೂಡಲೆ ಕಳ್ಳರನ್ನು ಪತ್ತೆಹಚ್ಚಿ ಮುಂದಿನ ದಿನಗಳಲ್ಲಿ ಇಂಥಾ ಘಟನೆಗಳು ಮರುಕಳಿಸದಂತೆ ನಿಗಾ ವಹಿಸಬೇಕೆಂದು ಮನವಿ ಮಾಡಿದ್ದಾರೆ.
‘ಇತ್ತಿಚೆಗೆಷ್ಟೆ ಮೋಟಾರ್ಗೆ ಹೊಸ ಕೇಬಲ್ ಅಳವಡಿಸಲಾಗಿತ್ತು. ಸಾವಿರಾರು ರೂಪಾಯಿ ಖರ್ಚು ಮಾಡಿ ವ್ಯವಸ್ಥೆ ಮಾಡಿಕೊಂಡಿದ್ದೆವು ರಾತೋರಾತ್ರಿ ಕಳ್ಳರು ಕೇಬಲ್ಗಳನ್ನು ಕದ್ದಿರುವುದರಿಂದ ಜಮೀನುಗಳಿಗೆ ನೀರು ಹಾಯಿಸಲು ಆಗದಂತಾಗಿದೆ’ ಎಂದು ರೈತ ಮುದೆಪ್ಪ ಪುಜಾರಿ ಹೇಳುತ್ತಾರೆ.
ಈ ಬಾಗದಲ್ಲಿ ಕಾಲುವೆ ನೀರನ್ನು ಅವಲಂಬಿಸಿ ಹಲವಾರು ರೈತರು ಪಂಪ್ಸೆಟ್ ಮೂಲಕ ತಾವು ಬೆಳೆದ ಮೆಕ್ಕೆಜೋಳ, ಮೆಣಸಿನಕಾಯಿ, ಶೇಂಗಾ, ಜೋಳ ಸೇರಿದಂತೆ ಅನೇಕ ಬೆಳೆಗಳಿಗೆ ನೀರು ಹರಿಸುತ್ತಾರೆ ಇದೀಗ ಕಳ್ಳರ ಕಾಟದಿಂದ ರೈತರು ಕಂಗಾಲಾಗಿದ್ದಾರೆ.
‘ಒಂದೆಡೆ ವಿದ್ಯುತ್ ಕೊರತೆ, ಇನ್ನೊಂದೆಡೆ ವಾರಾಬಂದಿ ಮೂಲಕ ಕಾಲುವೆಗೆ ನೀರು ಹರಿಸಲಾಗುತ್ತಿದ್ದು ಕಳ್ಳರ ಕಾಟದಿಂದ ರೈತರು ಬೆಳೆಗೆಳಿಗೆ ನೀರು ಹರಿಸುವುದು ಕಷ್ಟವಾಗುತ್ತಿದ್ದು, ರಾತ್ರಿ ಹೊತ್ತು ಹೊಲಗಳನ್ನು ಕಾಯುವಂತಾಗಿದೆ’ ಎನ್ನುತ್ತಾರೆ ರೈತ ವಿಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.