ADVERTISEMENT

ಗುರುಮಠಕಲ್: ‘ಹೋರಾಟ’ ಮುಗಿಸಿದ ಮುತ್ಸದ್ಧಿ ನಾಗನಗೌಡ ಕಂದಕೂರ

ಎಂ.ಪಿ.ಚಪೆಟ್ಲಾ
Published 29 ಜನವರಿ 2024, 6:21 IST
Last Updated 29 ಜನವರಿ 2024, 6:21 IST
2018ರಲ್ಲಿ ಗುರುಮಠಕಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಪ್ರಮಾಣ ಪತ್ರ ಸ್ವೀಕರಿಸಿದ ನಾಗನಗೌಡ ಕಂದಕೂರ
2018ರಲ್ಲಿ ಗುರುಮಠಕಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಪ್ರಮಾಣ ಪತ್ರ ಸ್ವೀಕರಿಸಿದ ನಾಗನಗೌಡ ಕಂದಕೂರ   

ಗುರುಮಠಕಲ್: ಜೆಡಿಎಸ್ ಪಕ್ಷದ ಆರಂಭದಿಂದಲೂ ಜಿಲ್ಲೆಯಲ್ಲಿ ಪಕ್ಷ ಸಂಘಟನೆ, ಕಾರ್ಯಕರ್ತರ ಜತೆಗೂಡಿ ಹೋರಾಟಗಳನ್ನು ಕಟ್ಟಿ, ಹೋರಾಟಗಳ ಮೂಲಕವೇ ಹೆಗ್ಗುರುತು ಮೂಡಿಸಿಕೊಂಡಿದ್ದ ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ ಮುತ್ಸದ್ಧಿ ರಾಜಕಾರಣಿ, ಮಾಜಿ ಶಾಸಕ ನಾಗನಗೌಡ ಕಂದಕೂರ (73) ತಮ್ಮ ಬದುಕಿನ ‘ಹೋರಾಟ’ವನ್ನು ಭಾನುವಾರ (ಜ.28) ಬೆಳಿಗ್ಗೆ 10.30ಕ್ಕೆ ಮುಗಿಸಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಒಡನಾಡಿಯಾಗಿದ್ದ ನಾಗನಗೌಡ ಕಂದಕೂರ ಅವರು ಹಲವು ರಾಜಕೀಯ ಏಳುಬೀಳುಗಳನ್ನು ಕಂಡವರು. ನಿರಂತರ ಸೋಲಿನಲ್ಲೂ ಕಾರ್ಯಕರ್ತರಿಗೆ ಧೈರ್ಯ ತುಂಬುತ್ತಾ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ತಮ್ಮಿಡಿ ಜೀವನವನ್ನು ಒಂದೇ ಪಕ್ಷದಲ್ಲಿ ಕಳೆಯುತ್ತೇನೆ ಎಂದು ಪದೇ ಪದೆ ಹೇಳುತ್ತಿದ್ದ ಅವರು, ಜೆಡಿಎಸ್ ಪಾಳಯ ಮತ್ತು ದೇವೇಗೌಡ ಕುಟುಂಬದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದರು.

ವಿದ್ಯಾರ್ಥಿ ದೆಸೆಯಿಂದಲೇ ಅಣ್ಣ ಸದಾಶಿವರೆಡ್ಡಿ ಕಂದಕೂರ ಅವರಿಂದ ಪ್ರೇರಿತರಾಗಿ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡ ಅವರು, ರಾಜ್ಯದಲ್ಲಿ ಮೊದಲ ಕಾಂಗ್ರೆಸೇತರ ಸರ್ಕಾರದ ರಚಿಸಿದ ದೇವೇಗೌಡ, ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್ ಅವರೊಂದಿಗೆ ಒಡನಾಟ ಬೆಳೆಸಿದರು. ರೈತಪರ ಹೋರಾಟಗಳಲ್ಲಿ ದೇವೇಗೌಡರೊಂದಿಗೆ ಪಾಲ್ಗೊಳ್ಳುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡರು.

ADVERTISEMENT

ಪಕ್ಷನಿಷ್ಠೆಗೆ ಹೆಸರು: ಜನತಾಪಕ್ಷದೊಂದಿಗೆ ಹೆಜ್ಜೆಹಾಕಿದ್ದ ನಾಗನಗೌಡರು ಮತಕ್ಷೇತ್ರದಲ್ಲಿ ಜನಾಂದೋಲನಗಳನ್ನು ರೂಪಿಸುವುದು, ಕಾರ್ಯಕರ್ತರ ಕಷ್ಟಗಳಲ್ಲಿ ಜತೆಯಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದರು. ಜನತಾಪಕ್ಷವು ಬಿರುಕು ಬಿಟ್ಟ ನಂತರ ಎಚ್.ಡಿ.ದೇವೇಗೌಡರ ಜನತಾದಳ (ಜ್ಯಾತ್ಯತೀತ)ದೊಂದಿಗೆ ಸಾಗಿದರು.

ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ನಾಗನಗೌಡ ಕಂದಕೂರ
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರೊಂದಿಗೆ ನಾಗನಗೌಡ ಕಂದಕೂರ ಅವರ ಒಡನಾಟ

ನಾಗನಗೌಡ ಕಂದಕೂರ ಅವರ ರಾಜಕೀಯ ಹೆಜ್ಜೆಗಳು:

  • ನಾಗನಗೌಡ ಕಂದಕೂರ ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯದ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.

  • ಕಂದಕೂರ ಕ್ಷೇತ್ರದಿಂದ 1986ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಜಿಲ್ಲಾ ಪಂಚಾಯಿತಿಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದು ಅವರ ಮೊದಲ ರಾಜಕೀಯ ಮೆಟ್ಟಿಲು.

  • 1998 ರಲ್ಲಿ ಎಪಿಎಂಸಿ ಸದಸ್ಯರಾಗಿ ಆಯ್ಕೆ 2003  ವರೆಗೆ ಯಾದಗಿರಿ ಎಪಿಎಂಸಿ ಅಧ್ಯಕ್ಷರಾಗಿ ಅಧಿಕಾರ.

  • 2007ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಕೆ.ಡಿ.ಬಿ (ಕೆ.ಕೆ.ಆರ್.ಡಿ.ಬಿ) ಅಧ್ಯಕ್ಷರಾಗಿ ನೇಮಕ

  • 2008ರಿಂದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆ 2008ರಲ್ಲಿ ಗುರುಮಠಕಲ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧೆ 9208 ಮತಗಳ ಅಂತರದಿಂದ ಸೋಲು

  • 2013ರಲ್ಲಿ ಗುರುಮಠಕಲ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಮರು ಸ್ಪರ್ಧೆ 1650 ಮತಗಳಿಂದ ಸೋಲು

  • 2018ರಲ್ಲಿ ಗುರುಮಠಕಲ್ ವಿಧಾನಸಭಾ ಕ್ಷೇತ್ರದಿಂದ 24480 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ ಚಿಂಚನಸೂರ ವಿರುದ್ಧ ಗೆಲುವು (ಶೇ 52.40 ಮತಗಳೊಂದಿಗೆ) ಮೊದಲಬಾರಿ ಶಾಸಕರಾಗಿ ಆಯ್ಕೆ.

  • 2019ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.