ADVERTISEMENT

ಹೊಸ ವರ್ಷಾಚರಣೆ: ಸುರಪುರ ಶಾಲೆಗಳಲ್ಲಿ ಭೂರಿ ಭೋಜನ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 10:59 IST
Last Updated 2 ಜನವರಿ 2020, 10:59 IST
ಸುರಪುರದ ಶೆಳ್ಳಗಿ ಗ್ರಾಮದಲ್ಲಿ ಮಕ್ಕಳು ಬುಧವಾರ ಭೂರಿ ಭೋಜನ ಸವಿದರು
ಸುರಪುರದ ಶೆಳ್ಳಗಿ ಗ್ರಾಮದಲ್ಲಿ ಮಕ್ಕಳು ಬುಧವಾರ ಭೂರಿ ಭೋಜನ ಸವಿದರು   

ಸುರಪುರ: ಸುರಪುರ ಮತ್ತು ಹುಣಸಗಿ ತಾಲ್ಲೂಕಿನ ಹಲವು ಸರ್ಕಾರಿ ಶಾಲೆಗಳಲ್ಲಿ ಬುಧವಾರ ಮಕ್ಕಳ ಬಿಸಿಯೂಟದ ಬದಲು ಭೂರಿ ಭೋಜನವನ್ನಾಗಿ ಪರಿವರ್ತಿಸುವ ಮೂಲಕ ಹೊಸ ವರ್ಷ ಆಚರಿಸಲಾಯಿತು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮೌನೇಶ ಕಂಬಾರ ಎಲ್ಲ ಶಾಲೆಯ ಮಖ್ಯ ಶಿಕ್ಷಕರಿಗೆ ವಿಭಿನ್ನ ಬಿಸಿಯೂಟ ನೀಡುವ ಮೂಲಕ ನೂತನ ವರ್ಷ ಸ್ವಾಗತಿಸಿ ಎಂದು ಮನವಿ ಮಾಡಿದ್ದರು.

ಇದಕ್ಕೆ ಸ್ಪಂದಿಸಿದ ಶಿಕ್ಷಕರು ತಮ್ಮಲ್ಲೆ ದೇಣಿಗೆ ಸಂಗ್ರಹಿಸಿ ಮಕ್ಕಳಿಗೆ ಭೂರಿ ಭೋಜನ ನೀಡಿದರು. ಶಿರಾ, ಉಪ್ಪಿಟ್ಟು, ಗುಲಾಬ ಜಾಮೂನ್, ಜಿಲೇಬಿ, ಮೈಸೂರುಪಾಕ್, ಉಪ್ಪಿಟ್ಟು, ಪಲಾವ್, ಪೂರಿ, ಮೊಸರನ್ನ, ಇಡ್ಲಿ, ಇವೆಲ್ಲವು ಬಿಸಿಯೂಟದ ಮೆನು ಆಗಿತ್ತು.

ADVERTISEMENT

ಮಕ್ಕಳು ಭೂರಿ ಭೋಜನ ಸವಿದರು. ತಾಲ್ಲೂಕಿನಲ್ಲಿ ಈ ರೀತಿಯ ಬಿಸಿಯೂಟ ಆಗಾಗ ಸಮುದಾಯದ ಸಹಕಾರದಿಂದ ನೀಡಲಾಗುತ್ತಿದೆ. ಇದರಿಂದ ಮಕ್ಕಳ ಹಾಜರಾತಿ ಗಣನೀಯವಾಗಿ ಹೆಚ್ಚಿದೆ. ಶೆಳ್ಳಗಿ, ಜಂಗಿನಗಡ್ಡಿ, ನಾರಾಯಣಪುರ, ಹಾವಿನಾಳ, ಬಂಡೋಳಿ ಇನ್ನು ಹಲವು ಶಾಲೆಗಳಲ್ಲಿ ಈ ದೃಶ್ಯ ಕಂಡು ಬಂತು.

‘ಕಳೆದ ಎರಡು ವರ್ಷಗಳಿಂದ ಈ ರೀತಿಯ ಬಿಸಿಯೂಟ ನೀಡಲಾಗುತ್ತಿದೆ. ಶಿಕ್ಷಕರು ತಮ್ಮ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಇತರ ಸಮಾರಂಭಗಳಿಗೆ ಖರ್ಚು ಮಾಡುವ ಹಣವನ್ನು ಇದಕ್ಕೆ ವ್ಯಯಿಸುತ್ತಿದ್ದಾರೆ. ಸಮುದಾಯದ ಸ್ಪಂದನೆ ಪೂರಕವಾಗಿದೆ’ ಎನ್ನುತ್ತಾರೆ ಮೌನೇಶ ಕಂಬಾರ.

‘ಮಕ್ಕಳಿಗೆ ಪ್ರತಿ ದಿನ ಒಂದೇ ತೆರನಾದ ಬಿಸಿಯೂಟ ಸವಿದು ಬೇಸರವಾಗಿರುತ್ತದೆ. ಆಗಾಗ ಇಂತಹ ಭೋಜನ ವ್ಯವಸ್ಥೆ ಮಾಡುವುದರಿಂದ ಮಕ್ಕಳು ಶಾಲೆಯ ಕಡೆ ಆಕರ್ಷಿತರಾಗುತ್ತಾರೆ. ಇದು ಮಕ್ಕಳ ವಿದ್ಯಾಭ್ಯಾಸದ ಮೇಲೂ ಪೂರಕವಾಗುತ್ತದೆ’ ಎನ್ನುವುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.