ಯಾದಗಿರಿ: ‘ಉಟ್ಟ ಬಟ್ಟೆಯಲ್ಲೇ ಪೊಲೀಸ್ರು, ಸೇನೆಯವರು ಕರೆದ್ರಾಂತ ಇಲ್ಲಿಗೆ ಬಂದೀವಿ. ಆರು ದಿನಗಳಿಂದ ಸ್ನಾನ ಇಲ್ಲ. ಇನ್ನೇಲ್ಲಿ ನಮಾಜು ಮಾಡೋದು...’
–ಇದು ಜಿಲ್ಲೆಯ ಶಹಾಪುರ ತಾಲ್ಲೂಕಿನ ರೋಜಾ ಗ್ರಾಮದ ಮುಸ್ಲಿಮರ ಮಾತು.
ತಾತ್ಕಾಲಿಕವಾಗಿಹೊಸೂರ ಗ್ರಾಮದ ಕಾಳಜಿ ಕೇಂದ್ರದಲ್ಲಿ ಗ್ರಾಮಸ್ಥರು ಆಶ್ರಯ ಪಡೆದಿದ್ದಾರೆ.
ರೋಜಾ ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರನ್ನು ಬಿಟ್ಟು ಯಾರು ನೆಲೆಸಿಲ್ಲ. ಅಪರೂಪದ ಗ್ರಾಮದಲ್ಲಿ ಭೀಮಾ ನದಿ ಪ್ರವಾಹ ದೈನಂದಿನ ಪ್ರಾರ್ಥನೆಗೆ ಅಡ್ಡಿಯಾಗಿದೆ. 120 ಮನೆಗಳಿದ್ದು, 400 ಜನರು ಇದ್ದಾರೆ. ಕೃಷಿ ಕೆಲಸದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಈಗ ಗ್ರಾಮ ನಡುಗಡ್ಡೆಯಾಗಿದ್ದು, ಗ್ರಾಮಕ್ಕೆ ತೆರಳಲು ಆಗದಂತ ಪರಿಸ್ಥಿತಿ ಇದೆ.
ಹೊಸೂರ ಗ್ರಾಮದ ಕಾಳಜಿ ಕೇಂದ್ರದಲ್ಲಿ ಚಿಂತಾಕ್ರಾಂತರಾಗಿ ಕುಳಿತುಕೊಂಡು ಆಕಾಶ ದಿಟ್ಟಿಸುವುದು ಕಾಣಬಂತು.
ಹೊಸೂರ ಗ್ರಾಮದಲ್ಲಿ ಸ್ಥಾಪಿಸಿರುವ ಕಾಳಜಿ ಕೇಂದ್ರದಲ್ಲಿ ಮೊದಲು 250 ಜನರಿದ್ದರು. ಈಗ ಕೆಲವರು ಸಂಬಂಧಿಕರ ಮನೆಗೆ ತೆರಳಿದ್ದಾರೆ. ಸದ್ಯ 161 ಜನ ಕಾಳಜಿ ಕೇಂದ್ರದಲ್ಲಿ ನೆಲೆಸಿದ್ದಾರೆ.
‘ನಾವು ಹೇಗೋ ಹೊಳಿ ದಂಡಿಗೆ ಹೋಗಿ ಸ್ನಾನ ಮಾಡಿಕೊಂಡು ಬರುಬಹುದು. ಆದರೆ, ಹೆಂಗಸರು ಎಲ್ಲಿಯಂತ ಹೋಗುವುದು. ನಮ್ಮ ಜೀವ ಉಳಿಸಿಕೊಂಡರೆ ಸಾಕು ಎನ್ನುವಂತಾಗಿದೆ. ನಮಾಜು ಎಲ್ಲ ಅಲ್ಲಾಗೆ ಬಿಟ್ಟಿದ್ದೇವೆ’ ಎನ್ನುತ್ತಾರೆ ರೋಜಾ ಗ್ರಾಮಸ್ಥ ಬಾಬುಮಿಯಾ ಅಬ್ದುಲ್ ಕರಿಂ ಸಾಬ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.