ADVERTISEMENT

ರಾತ್ರೋ ರಾತ್ರಿ ಕಳುವಾಗಿದ್ದ ಜೋಡೆತ್ತು ಮನೆಗೆ ವಾಪಸ್‌! ಯಾದಗಿರಿಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 6:12 IST
Last Updated 12 ಆಗಸ್ಟ್ 2023, 6:12 IST
ಕಾಣೆಯಾಗಿದ್ದ ಎತ್ತುಗಳು ಮನೆಗೆ ಮರಳಿದ ಬಳಿಕ ರೈತ ತಿರುಪತಿ ಅವುಗಳ ಆರೈಕೆ ಮಾಡಿದರು
ಕಾಣೆಯಾಗಿದ್ದ ಎತ್ತುಗಳು ಮನೆಗೆ ಮರಳಿದ ಬಳಿಕ ರೈತ ತಿರುಪತಿ ಅವುಗಳ ಆರೈಕೆ ಮಾಡಿದರು   

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಸಗರ ಗ್ರಾಮದಲ್ಲಿ ರಾತ್ರೋ ರಾತ್ರಿ ಕಳುವಾಗಿದ್ದ ಜೋಡೆತ್ತು, ಕದ್ದವರಿಂದ‌‌ ತಪ್ಪಿಸಿಕೊಂಡು ತನ್ನ ಅನ್ನದಾತನ ಮನೆ ಸೇರಿದ ಅಪರೂಪದ ಘಟನೆ ಶುಕ್ರವಾರ ನಡೆದಿದೆ.

ಸಗರ ಗ್ರಾಮದ ರೈತ ತಿರುಪತಿ ಅವರಿಗೆ ಸೇರಿದ ಜೋಡೆತ್ತು ಶುಕ್ರವಾರ ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಕೊಟ್ಟಿಗೆಯಿಂದಲೇ ಕಳುವಾಗಿದ್ದವು. ತನಗೆ ಬೆನ್ನೆಲುಬಾಗಿದ್ದ ₹1.5 ಲಕ್ಷ ಮೌಲ್ಯದ ಎತ್ತುಗಳನ್ನು ಕಳೆದುಕೊಂಡಿದ್ದ ರೈತ ತಿರುಪತಿ ಕಣ್ಣೀರಿಟ್ಟಿದ್ದ. ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಎತ್ತುಗಳೇ ಇಲ್ಲದ ಮೇಲೆ ಬದುಕು ಹೇಗೆ ಎಂದು ಕೊರಗಿದ್ದ. ಗ್ರಾಮಸ್ಥರು ರೈತನಿಗೆ ಧೈರ್ಯ ತುಂಬಿದ್ದರು. ಎಲ್ಲರೂ ಸೇರಿ ಎತ್ತುಗಳನ್ನು ಹುಡುಕೋಣ ಎಂದು ಅಭಯ ನೀಡಿದ್ದರು.

ರೈತ ಕಣ್ಣೀರಿಡುತ್ತಾ ಕುಳಿತಿರುವಾಗಲೇ ಜಾಣ ಜೋಡೆತ್ತು ಮಧ್ಯಾಹ್ನದ ಹೊತ್ತಿಗೆ ರೈತನ ಮನೆಗೆ ಮರಳಿವೆ. ಅಂದಾಜು 10 ಕಿ.ಮೀ ದೂರಕ್ಕೆ ಹೋಗಿದ್ದಾಗಲೇ ಕಳ್ಳರಿಂದ ತಪ್ಪಿಸಿಕೊಂಡಿವೆ ಎನ್ನಲಾಗುತ್ತಿದೆ.

ADVERTISEMENT

ಕಾಣೆಯಾಗಿದ್ದ ಜೋಡೆತ್ತು ಮರಳಿ ಮನೆಗೆ ಬಂದಿದ್ದರಿಂದ ರೈತ ತಿರುಪತಿ ಸಂತಸಗೊಂಡಿದ್ದು, ಎತ್ತುಗಳ ಮೈ ಸವರಿ ಪ್ರೀತಿ ತೋರಿ, ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.