
ಹುಣಸಗಿ: ಶಿವರಾತ್ರಿ ಅಂಗವಾಗಿ ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಶಿವರಾತ್ರಿ ಅಮವಾಸ್ಯೆಯಿಂದ ಮೂರು ದಿನಗಳವರೆಗೆ ಜರುಗುವ ಸಂಗಮೇಶ್ವರ ಜಾತ್ರೆಯಲ್ಲಿ ಪಾಲ್ಗೊಳ್ಳಲು ಕೊಡೇಕಲ್ಲನ ಭಕ್ತರು ಶುಕ್ರವಾರದಿಂದ ಪಾದಯಾತ್ರೆ ಕೈಗೊಂಡರು.
ಕಾಲಜ್ಞಾನಿ ಬಸವೇಶ್ವರ ಐಕ್ಯಸ್ಥಳದಲ್ಲಿ (ಊರಾನ ಗುಡಿ) ಬಸವಣ್ಣನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಭಕ್ತರ ಪಾದಯಾತ್ರೆಗೆ ಚಾಲನೆ ನೀಡಿ ಬಸವಪೀಠದ ಪೀಠಾಧಿಪತಿ ವೃಷಬೇಂದ್ರ ಅಪ್ಪ ಮಾತನಾಡಿ, ‘ಕಾಗಿನೆಲೆ ಎಂಬುದು ಅಸಂಖ್ಯಾತ ಭಕ್ತರ ಶ್ರದ್ಧಾ ಕೇಂದ್ರ ಹಾಗೂ ಪುಣ್ಯ ಕ್ಷೇತ್ರವಾಗಿದೆ. ಕೊಡೇಕಲ್ಲ ಬಸವಣ್ಣನವರ ದ್ವಿತಿಯ ವರ ಪುತ್ರರಾಗಿದ್ದ ಸಂಗಮೇಶ್ವರರು ಕಾಗಿನೆಯಲ್ಲಿಯೇ ನೆಲೆ ನಿಂತಿದ್ದಾರೆ ಎಂಬುದು ಇತಿಹಾಸ ದಿಂದ ತಿಳಿಯುತ್ತದೆ. ನಾಡಿನ ಶ್ರೇಷ್ಟ ಸಂತರು ದಾಸವರೇಣ್ಯರಾದ ಕನಕದಾಸರು ತಮ್ಮ ಮುಂಡಿಗೆಗಳ ಅರ್ಥ ಬಿಡಿಸಲು ಕೊಡೇಕಲ್ಲದ ಸಂಗಮೇಶ್ವರರನ್ನು ಕಾಗಿನೆಲೆಗೆ ಕರೆಸಿಕೊಂಡಿದ್ದರು ಎಂದು ಸ್ಥಳ ಪುರಾಣದಲ್ಲಿ ತಿಳಿದು ಬರುತ್ತದೆ’ ಎಂದರು.
‘ಕಾಲಜ್ಞಾನಿ ಕೊಡೇಕಲ್ಲ ಬಸವಣ್ಣನವರ ಮತ್ತೋರ್ವ ಪುತ್ರ ರಾಚಪ್ಪಾಜಿ ಯವರು ಮೈಸೂರು ಹತ್ತಿರದ ಕಪ್ಪಡಿಯಲ್ಲಿ (ಕೆ.ಆರ್.ನಗರ) ಐಕ್ಯರಾದರೆಂದು ತಿಳಿದು ಬಂದಿದೆ. ಆದ್ದರಿಂದ ಪ್ರತಿವರ್ಷ ಶಿವರಾತ್ರಿ ಅಮವಾಸ್ಯೆಯ ಮರು ದಿನದಿಂದ ಮೂರು ದಿನಗಳವರೆಗೆ ಕಾಗಿನೆಲೆಯಲ್ಲಿ ಜರುಗುವ ಸಂಗಮೇಶ್ವರರ ಪಲ್ಲಕ್ಕಿ ಉತ್ಸವದಲ್ಲಿ ಯಾದಗಿರಿ ಜಿಲ್ಲೆಯ ಕೊಡೇಕಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸರ್ವಧರ್ಮದ ಭಕ್ತರು ಭಾಗಿಯಾಗುತ್ತಾರೆ’ ಎಂದರು.
‘ಪಾದಯಾತ್ರೆ ಕೈಗೊಂಡಿರುವ 250 ಕ್ಕೂ ಹೆಚ್ಚು ಪಾಲ್ಗೊಂಡಿದ್ದು, ಭಕ್ತರಿಗೆ ಗುರು ಬಸವೇಶ್ವರರ ಆಶಿರ್ವಾದ ಸದಾ ಇರಲಿ’ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವೀರಪ್ಪಯ್ಯ ತಾತಾ, ಪ್ರಭುಸ್ವಾಮಿ ಕೊಡೇಕಲ್ಲಮಠ, ಅಲ್ಲಮಪ್ರಭು ಕೊಡೇಕಲ್ಲಮಠ, ಕನಕು ಜೀರಾಳ, ಪ್ರಭು ಪೂಜಾರಿ, ವೀರಸಂಗಯ್ಯ ದೊಡ್ದಡೇಗೌಳ, ಪರಶು ಮಡಿವಾಳರ, ಸಂಗಮೇಶ ಅಡ್ಡಿ, ದೇವು ನೀಲಗಾರ, ಪರಶುರಾಮ ಹೊಸೂರ,
ಕಾಗಿನೆಲೆ ಸಂಗಮೇಶ್ವರ, ಬಸವೇಶ್ವರ ಭಜನಾ ಮಂಡಳಿ ಸದಸ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.