ಯಾದಗಿರಿ: ನಗರದಲ್ಲಿ ಈಗಾಗಲೇ 36 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿದ್ದು, ಮುಂದೆ ಬಿಸಿಲಿನ ಝಳಹೆಚ್ಚುವ ಸಾಧ್ಯತೆ ಕಂಡುಬರುತ್ತಿದೆ.ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಹೆಚ್ಚಿದಂತೆ ಸಾರ್ವಜನಿಕರು ತಂಪಾದ ನೀರು ಕುಡಿಯಲು ಮಣ್ಣಿನ ಮಡಕೆ ಖರೀದಿಸಲು ಮುಂದಾಗುತ್ತಿದ್ದಾರೆ.
ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಮಣ್ಣಿನ ಮಡಕೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಗೋಲಾಕಾರ, ಉದ್ದನೆಯ ಹೂಜಿ ಆಕಾರದ, ನಳ ಹೊಂದಿರುವ ಮಡಕೆಗಳು ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಕುಂಬಾರರು ಮಡಕೆಗಳನ್ನು ಸಿದ್ಧಮಾಡಿದ್ದಾರೆ.
ರಸ್ತೆ ಬದಿ ಸಾಲಾಗಿ ಮಾರಾಟಕ್ಕೆ ಇಟ್ಟಿರುವ ಮಡಕೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ಇದರ ಜೊತೆಗೆ ಮಣ್ಣಿನ ಒಲೆ, ಕುಂಡಗಳು, ಗಲ್ಲೆಗಳು ಮಾರಾಟಕ್ಕೆ ಲಭ್ಯ ಇವೆ.
ನಗರದ ಗಾಂಧಿ ವೃತ್ತ, ಸರ್ಕಾರಿ ಜಿಲ್ಲಾ ಆಸ್ಪತ್ರೆ ಸಮೀಪದಲ್ಲಿ ವಿವಿಧ ಬಗೆಯ ಮಡಕೆಗಳನ್ನು ಮಾರಾಟಕ್ಕೆ ಇಡಲಾಗಿದೆ. ಗಾತ್ರ, ವಿನ್ಯಾಸಕ್ಕೆ ತಕ್ಕಂತೆ ₹50 ರಿಂದ ₹300ರ ವರೆಗೆ ಬೆಲೆ ನಿಗದಿಪಡಿಸಲಾಗಿದೆ. ಒಂದು ದಿನಕ್ಕೆ 8 ರಿಂದ 10 ಮಡಕೆಗಳು ಮಾರಾಟವಾಗುತ್ತವೆ. ಗಿರಾಕಿಗಳು ಚೌಕಾಸಿ ಮಾಡಿ ಕೊಂಡು ಕೊಳ್ಳುವುದರಿಂದ ಒಂದು ದಿನಕ್ಕೆ ಎಲ್ಲಾ ಖರ್ಚು ಕಳೆದು ₹200 ಉಳಿದರೆ ಹೆಚ್ಚು ಎನ್ನುತ್ತಾರೆ ಮಡಕೆ ವ್ಯಾಪಾರಿಗಳು.
‘ಬೇಸಿಗೆಯಲ್ಲಿ ಮಡಕೆಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಬೆಲೆ ಹೆಚ್ಚು ಕಡಿಮೆ ಆಗುತ್ತದೆ’ ಎನ್ನುತ್ತಾರೆ ವ್ಯಾಪಾರಿ ಶಿವಕುಮಾರ ಕುಂಬಾರ.
ಇಂದಿನ ಆಧುನಿಕ ಯುಗದಲ್ಲಿಯೂ, ಬಡವರ ಫ್ರಿಜ್ ಎಂದು ಖ್ಯಾತಿ ಪಡೆದಿರುವ ಮಣ್ಣಿನ ಮಡಕೆ ತನ್ನದೇ ಆದ ವಿಶಿಷ್ಟ ಗುಣಗಳನ್ನು ಹೊಂದಿದೆ.
ಕಲ್ಲಂಗಡಿ ವ್ಯಾಪಾರ ಜೋರು: ಬಿಸಿಲಿನ ತಾಪ ತಣಿಸಲು ಸಾರ್ವಜನಿಕರು ಕಲ್ಲಂಗಡಿ ಹಣ್ಣು ತಿನ್ನಲು ಮತ್ತು ಖರೀದಿಸಲು ಮುಗಿ ಬೀಳುತ್ತಿದ್ದಾರೆ. ನಗರದ ಕೋರ್ಟ್ ಎದುರಿಗೆ ಕಲ್ಲಂಗಡಿ ಹಣ್ಣಿನ ರಾಶಿ ಕೈ ಬೀಸಿ ಕರೆಯುತ್ತದೆ.
ಕಲಬುರ್ಗಿ, ಆಳಂದ, ಜೇವರ್ಗಿ, ಶಹಾಪುರ, ನಾರಾಯಣಪೇಟ, ಗುರು ಮಠಕಲ್ ಕಡೆಯಿಂದ ಕಲ್ಲಂಗಡಿ ತರಿಸಿಕೊಳ್ಳಲಾಗುತ್ತದೆ.
1ಕೆ.ಜಿಗೆ ₹ 20 ದರ ನಿಗದಿ ಪಡಿಸಲಾಗಿದೆ. ಒಂದು ದಿನಕ್ಕೆ 10 ರಿಂದ 15 ಕ್ವಿಂಟಲ್ ಮಾರಾಟ ಮಾಡಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.