ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ರೈತರು ಮುಂಗಾರು ಹಂಗಾಮಿನ ಬೆಳೆಯಾಗಿ ಭತ್ತ ಬೆಳೆಯಲು ಸಸಿಯನ್ನು ಸಿದ್ಧಪಡಿಸಿದ್ದಾರೆ.
ರೈತರು 40 ದಿನದ ಸಸಿಯನ್ನು ನಾಟಿ ಮಾಡುತ್ತಾರೆ. ನಾರಾಯಣಪುರ ಎಡದಂಡೆ ಮುಖ್ಯಕಾಲುವೆಗೆ ಮುಂಗಾರು ಹಂಗಾಮಿನ ಬೆಳೆಗಳಿಗೆ ಸಾಮಾನ್ಯವಾಗಿ ಜುಲೈ ಮೂರನೇ ವಾರದಲ್ಲಿ ನೀರು ಬಿಡುತ್ತಾರೆ ಎನ್ನುತ್ತಾರೆ ರೈತ ಶಿವಪ್ಪ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಆಲಮಟ್ಟಿ ಜಲಾಶಯಕ್ಕೆ ಸಾಕಷ್ಟು ನೀರು (511 ಟಿ.ಎಂ.ಸಿ ಅಡಿ ಸದ್ಯ ಸಂಗ್ರಹವಿದೆ) ಹರಿದು ಬರುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.
ನಾರಾಯಣಪುರ ಜಲಾಶಯದ ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಕೃಷ್ಣಾ ನದಿಯಲ್ಲಿ ನೀರಿನ ಹರಿವು ಇಲ್ಲವಾಗಿದೆ. ಇದು ರೈತರಿಗೆ ತುಸು ಆತಂಕವನ್ನು ಉಂಟು ಮಾಡಿದೆ ಎನ್ನುತ್ತಾರೆ ಕೃಷ್ಣಾ ಅಚ್ಚಕಟ್ಟು ಪ್ರದೇಶ ರೈತ ಹಿತ ರಕ್ಷಣಾ ಸಮಿತಿ ಮುಖಂಡ ಶರಣಪ್ಪ ಪ್ಯಾಟಿ.
ಅಲ್ಲದೆ, ಕಾಲುವೆಗೆ ನೀರು ಬಂದ ತಕ್ಷಣ ಕೃಷಿ ಚಟುವಕೆಗಳು ಗರಿಗೆದರುತ್ತವೆ. ಈಗಾಗಲೇ ಕೆಲವು ಕಡೆ ನಾಟಿ ಮಾಡಿದ ಹತ್ತಿ, ತೊಗರಿ ಹಾಗೂ ಮೆಣಸಿನಕಾಯಿ ಬೆಳೆಗೆ ಹೆಚ್ಚು ಲಾಭವಾಗಲಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ಎಂಜಿನಿಯರ್ ಅವರು ಕಾಲುವೆ ದುರಸ್ತಿ ಹಾಗೂ ಸಣ್ಣಪುಟ್ಟ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ಕಾಲುವೆ ನೀರು ಅವಲಂಬಿತ ರೈತರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.