ಯಾದಗಿರಿ: ತರಕಾರಿ, ಸೊಪ್ಪುಗಳ ದರದಲ್ಲಿ ಕಳೆದ ವಾರಕ್ಕಿಂತ ಈ ವಾರ ಏರಿಳಿತವಾಗಿದೆ. ಆದರೆ, ಕೆಲ ತರಕಾರಿಗಳ ಅಭಾವ ಉಂಟಾಗಿದೆ.
ಕೆಲ ತರಕಾರಿಗಳು ಮಾರುಕಟ್ಟೆಗೆ ಬಾರದಿದ್ದರಿಂದ ಅವುಗಳ ಬೆಲೆ ಹೆಚ್ಚಾಗಿದೆ. ಇದರಿಂದ ಗ್ರಾಹಕರು ಚೌಕಾಶಿಗೆ ಇಳಿದಿದ್ದಾರೆ. ಆದರೆ, ವ್ಯಾಪಾರಿಗಳು ಕಡಿಮೆ ಬೆಲೆಗೆ ಕೊಡುವುದಕ್ಕೆ ಒಪ್ಪುತ್ತಿಲ್ಲ.
ಕಳೆದ ವಾರಕ್ಕಿಂತ ಟೊಮೆಟೊ ಬೆಲೆಗೆ ಕೇ.ಜಿ. ₹10 ಕಡಿಮೆಯಾಗಿದೆ. ಈಗಕೇ.ಜಿ.ಗೆ ₹30 ರಂತೆ ಮಾರಾಟವಾಗುತ್ತಿದೆ. ಬೆಂಡೆಕಾಯಿ ಕಳೆದ ವಾರಕ್ಕಿಂತ ₹20 ಹೆಚ್ಚಳವಾಗಿದ್ದು, ಕೇ.ಜಿ. ₹60 ಇದೆ. ದೊಣ್ಣೆಮೆಣಸಿನಕಾಯಿ ಕಳೆದ ವಾರ ₹50 ಕೇ.ಜಿ. ಇದ್ದಿದ್ದು, ಈ ವಾರ ₹80 ಕೇ.ಜಿ. ಆಗಿದೆ.
ಈರುಳ್ಳಿ ಬೆಲೆಯೂ ಇಳಿಕೆಯಾಗಿದೆ. ಕಳೆದ ವಾರ ₹50 ಕೇ.ಜಿ. ಇದ್ದಿದ್ದು, ಈ ವಾರ ₹40 ಕೇ.ಜಿ. ಆಗಿದೆ. ಬೀನ್ಸ್ ಬೆಲೆ ಈ ವಾರ ₹100 ಕೇಜಿ ಇದೆ. ಗಜ್ಜರಿ ಬೆಲೆ ಮಾತ್ರ ಕಳೆದ ವಾರಕ್ಕಿಂತ ₹40 ಹೆಚ್ಚಳವಾಗಿ ಈಗ ₹100 ಕ್ಕೆ ಮಾರಾಟ ಆಗುತ್ತಿದೆ. ಬೀಟ್ರೂಟ್ ₹40 ಇದ್ದಿದ್ದು, ₹ 60ಕ್ಕೆ ಹೆಚ್ಚಳವಾಗಿದೆ. ಅದರಂತೆ ಸೌತೆಕಾಯಿ, ಹಾಗಲಕಾಯಿ ಕಳೆದ ವಾರಕ್ಕಿಂತ ಈ ವಾರ ₹20 ಹೆಚ್ಚಳವಾಗಿದೆ.
ಬದನೆಕಾಯಿ, ಆಲೂಗಡ್ಡೆ, ಹೂಕೋಸು, ಎಲೆಕೋಸು, ಚವಳೆಕಾಯಿ, ಮೆಣಸಿನಕಾಯಿ, ಹೀರೆಕಾಯಿ, ಸೋರೆಕಾಯಿ ಕಳೆದ ವಾರದಂತೆ ಒಂದೇ ದರ ಇದೆ.
ಸೊಪ್ಪುಗಳ ದರ: ಸೊಪ್ಪುಗಳ ದರ ಕಳೆದ ವಾರದಂತೆ ಯಥಾಸ್ಥಿತಿ ದರ ಕಾಪಾಡಿಕೊಂಡಿದೆ. ಆದರೆ, ಮೆಂತೆ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ದರ ಹೆಚ್ಚಳವಾಗಿದೆ.
ಪಾಲಕ್ ಸೊಪ್ಪು ₹20ಗೆ 3 ಕಟ್ಟು, ಸಬ್ಬಸಿಗೆ ₹10ಗೆ 1 ಕಟ್ಟು, ಮೆಂತೆ ₹30ಗೆ 1 ಕಟ್ಟು, ರಾಜಗಿರಿ ಸೊಪ್ಪು ₹20ಗೆ 3 ಕಟ್ಟು, ಪುಂಡಿ ಪಲ್ಯೆ ₹20ಗೆ 3 ಕಟ್ಟು ಇದೆ. ಕೊತ್ತಂಬರಿ ಕಳೆದ ವಾರ ₹30ಗೆ ಒಂದು ಕಟ್ಟು ಮಾರಾಟವಾಗುತ್ತಿತ್ತು. ಈ ವಾರ ₹50ಗೆ ಒಂದು ಕಟ್ಟು ಬೆಲೆ ಇದೆ. ಅದರಂತೆ ಪುದೀನಾ ಬೆಲೆಯೂ ಕಳೆದ ವಾರಕ್ಕಿಂತ ₹20 ಹೆಚ್ಚಳವಾಗಿ ₹50 ಆಗಿದೆ.ಈರುಳ್ಳಿ ಸೊಪ್ಪು ₹80 ಕೇ.ಜಿ., ಬೆಳ್ಳುಳ್ಳಿ ಕೇ.ಜಿ. ₹160, ಶುಂಠಿ ₹100 ಕೇ.ಜಿ. ಇದೆ.
***
ಕೆಲ ತರಕಾರಿಗಳು ಮಾರುಕಟ್ಟೆಯಲ್ಲಿ ಅಭಾವ ಉಂಟಾಗಿದ್ದು, ದರ ಹೆಚ್ಚಳವಾಗಿವೆ
–ಅಬ್ದುಲ್ ಹಮೀದ್, ವ್ಯಾಪಾರಿ
***
ಕಳೆದ ವಾರದಂತೆ ತರಕಾರಿ ದರ ಕಡಿಮೆ ಇದ್ದರೂ ಕೆಲ ತರಕಾರಿಗಳು ಸಿಗುತ್ತಿಲ್ಲ. ಹೀಗಾಗಿ ಅವುಗಳ ಬೆಲೆ ಜಾಸ್ತಿಯಾಗಿದೆ
–ಮಲ್ಲಿನಾಥ ಅಲ್ಲಿಪುರ, ಗ್ರಾಹಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.