ಗುರುಮಠಕಲ್: ಸಮೀಪದ ಬೋರಬಂಡಾ ಗ್ರಾಮದ ಹೊರವಲಯದಲ್ಲಿರುವ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಗುರುವಾರ ರಾಮನವಮಿ ಉತ್ಸವ ಶ್ರಧ್ದಾ ಭಕ್ತಿಯಿಂದ ಜರುಗಿತು.
ಬೆಳಿಗ್ಗೆ 5 ಗಂಟೆಗೆ ಸುಪ್ರಭಾತ ಸೇವೆಯೊಂದಿಗೆ ಧಾರ್ಮಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದ್ದು, ವಿಶೇಷ ಪಂಚಾಮೃತ ಅಭಿಷೇಕ ಮಾಡಲಾಯಿತು. ಮೂಲ ವಿಗ್ರಹಗಳಿಗೆ ವಿಶೇಷ ಅಲಂಕಾರ, ಷೋಡಶೋಪಚಾರಗಳು ನಡೆದವು. ಬಾಲ ರಾಮ ದೇವರ ಉತ್ಸವ ಮೂರ್ತಿಗೆ ಅಭಿಷೇಕ, ಅಲಂಕಾರ ಸೇವೆಗಳು ಮಾಡಿದ ನಂತರ, ರಥಕ್ಕೆ ಅಲಂಕಾರ ಮತ್ತು ಪೂಜಾ ಕಾರ್ಯಗಳನ್ನು ಮಾಡಿ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥೋತ್ಸವದ ನಂತರ ಉಂಜಲು ಸೇವೆ (ಡೋಲೋತ್ಸವ) ನಂತರ ಮಹಾ ನೈವೇದ್ಯ ಮತ್ತು ಮಹಾ ಮಂಗಳಾರತಿಯನ್ನು ಮಾಡಿ ಪ್ರಸಾದ ವಿತರಣೆ ಮಾಡಲಾಯಿತು. ನೆರೆಯ ನಾರಾಯಣಪೇಟ ನಗರದ ಎಸ್.ಪಿ.ಬಾಲಸುಬ್ರಮಣ್ಯಂ ಅಭಿಮಾನಿಗಳ ಸಂಘದಿಂದ ಆಯೋಜಿಸಲಾಗಿದ್ದ ಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮ ಹಾಗೂ ಮಕ್ಕಳ ಭರತನಾಟ್ಯ ಪ್ರದರ್ಶನಗಳು ರಾಮ ನವಮಿ ಉತ್ಸವದ ರಂಗು ಹೆಚ್ಚಿಸಿದ್ದವು.
ದೇವಸ್ಥಾನ ಸಮಿತಿಯ ನರೇಂದ್ರ ರಾಠೋಡ ಹಾಗೂ ಕುಟುಂಬಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.