ಪ್ರಾತಿನಿಧಿಕ ಚಿತ್ರ
ಶಹಾಪುರ: ನಗರದ ಮಾರ್ಟ್ ಅಂಗಡಿಯಲ್ಲಿ ₹ 4.50 ಲಕ್ಷ ಮೌಲ್ಯದ ಡ್ರೈ ಫ್ರುಟ್ಸ್ ಕಳವು ಆರೋಪ ಸಾಬೀತಾಗಿದ್ದರಿಂದ ಬುಧವಾರ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ಶೋಭಾ ಅವರು ಅಪರಾಧಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಇಟಗಿಹಾಳ ಗ್ರಾಮದ ಓಂಕಾರ ತುಕಾರಾಮ ಕಾಂಬ್ಳೆ ಶಿಕ್ಷೆಗೆ ಒಳಗಾದ ಅಪರಾಧಿ.
2024 ಅಕ್ಬೋಬರ್ 23ರಂದು ನಗರದ ರಾಕಂಗೇರಾ ಬಡಾವಣೆಯಲ್ಲಿರುವ ಮಾರ್ಟ್ ಅಂಗಡಿಯ ಮೇಲಿನ ಟಿನ್ ಶೆಡ್ ಕತ್ತರಿಸಿ, ರಾತ್ರಿ ವೇಳೆಯಲ್ಲಿ ₹ 4.50 ಲಕ್ಷ ಮೌಲ್ಯದ ಬೆಳೆಬಾಳುವ ಡ್ರೈ ಫ್ರುಟ್ಸ್ , ಕಿರಾಣಿ ಸಾಮಾನು, ಸ್ಟೇಷನರಿ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ತೆರಳಿದ್ದ. ಗಲ್ಲಾದಲ್ಲಿದ್ದ ₹ 45 ಸಾವಿರ ನಗದು ಹಣ ದೋಚಿಕೊಂಡು ಪರಾರಿಯಾಗಿದ್ದ ಎಂದು ಅಂಗಡಿ ಮಾಲೀಕ ಮಹ್ಮದ್ ಇಲಿಯಾಸ್ ದಾದುಲ್ಲಾ ಅವರು ಶಹಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಎನ್. ಪಾಟೀಲ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ವರದಿ ಸಲ್ಲಿಸಿದ್ದರು. ದೂರುದಾರ ಪರವಾಗಿ ಎಪಿಪಿ ದಿವ್ಯಾರಾಣಿ ನಾಯಕ ಸುರಪುರ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.