ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವಾಣಿಜ್ಯ ಬೆಳೆ ಹತ್ತಿ ಬಿತ್ತನೆಗೆ ರೈತರು ಸಜ್ಜಾಗಿದ್ದು, ನಗರದ ಬೀಜ ಹಾಗೂ ರಸಗೊಬ್ಬರ ಮಾರುವ ಕೆಲ ಮಳಿಗೆಯವರು ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘಟನೆ ಆರೋಪಿಸಿದೆ.
‘ಕೆಲ ಮಾರಾಟಗಾರರು ಹತ್ತಿ ಬಿತ್ತನೆ ಬೀಜದ ಪ್ಯಾಕೆಟ್ ಮೇಲೆ ನಮೂದಿಸಿದ್ದಕ್ಕಿಂತ ದುಬಾರಿ ಬೆಲೆಗೆ ಹತ್ತಿ ಬೀಜವನ್ನು ರೈತರಿಗೆ ಮಾರುತ್ತಿದ್ದಾರೆ’ ಎಂದು ದೂರಿದೆ.
ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಹತ್ತಿ ಬೀಜ ಮಾರಾಟ ಮಾಡಿದ ಬಗ್ಗೆ ರೈತರು ದೂರು ನೀಡಿದ್ದರಿಂದ ಕೆಲ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದುಸುನೀಲಕುಮಾರ ಯರಗೊಳ, ಸಹಾಯಕ ಕೃಷಿ ನಿರ್ದೇಶಕ
‘ಕಳೆದ ವರ್ಷ ನಕಲಿ ಹತ್ತಿ ಬೀಜ ಬಿತ್ತನೆ ಮಾಡಿ ರೈತರು ನಷ್ಟ ಅನುಭವಿಸಿದ್ದರು. ಈಗ ಮತ್ತೆ ನಕಲಿ ಬೀಜ ಮಾರಾಟದ ಶಂಕೆ ಇದ್ದು, ಅಧಿಕಾರಿಗಳು ಕ್ರಮವಹಿಸುತ್ತಿಲ್ಲ. ಅಂಥ ಮಳಿಗೆಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಇಲ್ಲದ ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ. ನಕಲಿ ಬೀಜ ಮಾರಾಟ ಮಾಡಿದ ಕಂಪನಿಯ ವಿರುದ್ಧ ದೂರು ದಾಖಲಾಗಿ ಎಂಟು ತಿಂಗಳಾದರೂ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಮೃದು ಧೋರಣೆ ತಾಳಿದ್ದಾರೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಚೆನ್ನಪ್ಪ ಆನೇಗುಂದಿ ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.