ಯಾದಗಿರಿ: ‘ರಾಜ್ಯದಲ್ಲಿ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಸ್ಟ್ಯಾಂಪ್ ಪೇಪರ್ ಮೇಲೆ ಬರೆದುಕೊಡಬೇಕಾ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಕೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಅಧಿಕಾರವನ್ನು ಪೂರೈಸುತ್ತಾರೆ. ಅಧಿಕಾರ ಪೂರ್ಣಗೊಳಿಸುವುದಾಗಿ ಸಿದ್ದರಾಮಯ್ಯ ಅವರು ಹೇಳಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಹೇಳಿದ್ದಾರೆ. ಹೈಕಮಾಂಡ್ ಕೂಡ ಮುಖ್ಯಮಂತ್ರಿಯನ್ನು ತೆಗೆಯುವುದಾಗಿ ಹೇಳಿಲ್ಲ’ ಎಂದರು.
‘ಶಾಸಕ ಮುನಿರತ್ನ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಿಲ್ಲ ಎಂದರೆ, ಅವರಿಗೆ ಮನೆಗೆ ಹೋಗಿ ಕರೆಯಬೇಕಾ? ಸಿಎಂ ಹಾಗೂ ಡಿಸಿಎಂ ಆಗಲಿ ಆಹ್ವಾನ ಕೊಡುವುದಿಲ್ಲ. ಅಲ್ಲಿನ ಅಧಿಕಾರಿಗಳು ಆಹ್ವಾನ ಕೊಡುತ್ತಾರೆ. ಅವರಿಗೆ ಕುಂಕುಮ ಹಚ್ಚಿ ಪ್ರತ್ಯೇಕವಾಗಿ ಕರೆಯಬೇಕಿತ್ತಾ? ಶಿಷ್ಟಾಚಾರ ಪಾಲನೆ ಆಗದ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಲಿ’ ಎಂದರು.
‘ಮುನಿರತ್ನ ಅವರು ಸರ್ಕಾರಿ ಕಾರ್ಯಕ್ರಮಕ್ಕೆ ಆರ್ಎಸ್ಎಸ್ನ ಗಣವೇಷಧಾರಿಯಾಗಿ ಬಂದು ಸರ್ಕಾರ ಹಾಗೂ ಜನರಿಗೆ ಅವಮಾನ ಮಾಡಿದ್ದಾರೆ. ಆದರೆ, ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.