ಕಕ್ಕೇರಾ: ಪಟ್ಟಣದ ಸೋಮನಾಥ ದೇವರ ರಥೋತ್ಸವ ರವಿವಾರ ಸಂಜೆ ಸಂಭ್ರಮದಿಂದ ಜರುಗಿತು.
ಪೂಜ್ಯ ನಂದಣ್ಣಪ್ಪ ಪೂಜಾರಿ ರಥ, ಕಳಸಕ್ಕೆ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಸರ್ವಾಲಂಕೃತಗೊಂಡಿದ್ದ ತೇರು ಮುಂದೆ ಸಾಗುತ್ತಿದ್ದಂತೆ ಭಕ್ತರು ಹೂ, ಹಣ್ಣು, ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ಸೋಮನಾಥ ದೇವರಿಗೆ ಹರಕೆ ಹೊತ್ತವರು ಬಾಜಾಭಜಂತ್ರಿಗಳೊಂದಿಗೆ ದೀರ್ಘದಂಡ ನಮಸ್ಕಾರ ಹಾಕಿದರು.
ಪೂಜ್ಯ ಕರಿಮಡ್ಡೆಪ್ಪ ಮುತ್ಯಾ, ಅಯ್ಯಣ್ಣ ಪೂಜಾರಿ, ಭೀಮಣ್ಣ ಮುತ್ಯಾ, ಮುಖಂಡರಾದ ಹನುಮಂತ್ರಾಯ ನಾಯಕ ಜಹಾಗೀರದಾರ, ಸೋಮನಿಂಗಪ್ಪ ದೇಸಾಯಿ, ನಿಂಗಣ್ಣ ಬೂದಗುಂಪಿ, ರಾಜು ಹವಾಲ್ದಾರ್, ಗುಂಡಪ್ಪ ಸೋಲಾಪುರ, ಬಸಯ್ಯಸ್ವಾಮಿ, ಚಿದಾನಂದ ಕಮತಗಿ, ರಮೇಶ ಶೆಟ್ಟಿ, ಶ್ಯಾಮು ಶೆಟ್ಟಿ, ಉಪತಹಶೀಲ್ದಾರ ರೇವಪ್ಪ ತೆಗ್ಗಿನಮನಿ, ಮಲಕಾಜಪ್ಪ, ನಿಂಗಣ್ಣ ಬಾಕ್ಲಿ, ವೀರಸಂಗಪ್ಪ ಸಾಹುಕಾರ, ಮಲ್ಲಣ್ಣ ಜಂಪಾ, ಬಸವರಾಜ ಆರೇಶಂಕರ, ಬಸವರಾಜ ಶೆಟ್ಟಿ, ಮದನಸಾಬ, ಅಲ್ಲಾಭಕ್ಷ ಸೇರಿದಂತೆ ಅಪಾರ ಭಾಗಿಯಾಗಿದ್ದರು.
ಟ್ರ್ಯಾಕ್ಟರ್, ಟಂಟಂ, ಕ್ರಶರ್, ಬೈಕ್, ಪಾದಯಾತ್ರೆಗಳ ಮೂಲಕ ಸಾವಿರಾರು ಭಕ್ತರು ಆಗಮಿಸಿದ್ದರು. ಭಕ್ತರು ಸಿಹಿತಿನಿಸು ಖರೀದಿಸಿದರೇ, ಚಿಕ್ಕಮಕ್ಕಳು ಪೀಪಿ ಊದುತ್ತಾ, ಜೋಕಾಲಿ, ತೊಟ್ಟಿಲುಗಳಲ್ಲಿ ಕುಳಿತು ಸಂಭ್ರಮಿಸಿದರು. ಉತ್ತಮ ವ್ಯಾಪಾರ ಕಂಡು ಬಂದಿತು. ಸಂಜೆ ಹಾಸ್ಯ ಕಲಾಗಾರ ಸಿದ್ದು ನಾಲತವಾಡ್ ಸೇರಿದಂತೆ ಎರಡು ನಾಟಕ ಕಂಪನಿ ಕಲಾವಿದರು ಆಗಮಿಸಿದ್ದು ಜಾತ್ರೆಗೆ ಮೆರಗು ತಂದಿತ್ತು.
ಡಿವೈಎಸ್ಪಿ, ಹುಣಸಗಿ ವೃತ್ತ ನಿರೀಕ್ಷಕ ಮಾರ್ಗದರ್ಶನದಲ್ಲಿ ಕೊಡೇಕಲ್ ಪಿಎಸ್ಐ ಶ್ರೀಶೈಲ ಅಂಬಾಟೆ ಹಾಗೂ ಹುಣಸಗಿ, ನಾರಾಯಣಪೂರ, ಕೆಂಭಾವಿ ಪಿಎಸ್ಐಗಳು ಸೇರಿದಂತೆ ಸ್ಥಳೀಯ ಠಾಣಾಧಿಕಾರಿ ಮಧುಕರನಾಯಕ ಹಾಜರಿದ್ದು ಪಾರ್ಕಿಂಗ್, ಬಂದೋಬಸ್ತ್ ನಿಭಾಯಿಸಿದರು.
ಮಧ್ಯ ಮಾರಾಟ ಮಾಡುವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ತಹಶೀಲ್ದಾರ್ ಅವರಿಗೆ ಮನವಿ ಮಾಡಿದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.