ಸೈದಾಪುರ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕೊರೊನಾ ವೈರಸ್ ಹಾವಳಿಯಿಂದ ತಪ್ಪಿಸಿಕೊಳ್ಳಲು ಸ್ಟೀಮ್ ಉಪಕರಣ ಅಳವಡಿಸಿಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ(ಡಿವೈಎಸ್ಪಿ) ಹಾಗೂ ಗುರುಮಠಕಲ್ ವೃತ್ತ ನಿರೀಕ್ಷಕ ಅವರ ಮಾರ್ಗದರ್ಶನದಂತೆ ಪಿಎಸ್ಐ ಭೀಮರಾಯ ಬಂಕ್ಲಿ ಅವರು ಜಿಲ್ಲೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ತಮ್ಮ ಠಾಣೆಯ ಒಂದು ಕೋಣೆಯಲ್ಲಿ ಈ ವ್ಯವಸ್ಥೆ ಮಾಡಿದ್ದಾರೆ.
ಕೊರೊನಾ ಸಂಕಷ್ಟದಲ್ಲಿ ಮನೆ ಮದ್ದು ಬಳಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊರೊನಾ ವಿರುದ್ಧ ಹೋರಾಡುವ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಹೊಸ ವಿಧಾನವನ್ನು, ಉಪಕರಣವನ್ನು ಜಿಲ್ಲೆಯಲ್ಲಿ ಮೊಟ್ಟಮೊದಲು ಈ ಪೊಲೀಸ್ ಠಾಣೆಯಲ್ಲಿ ಅಳವಡಿಸಲಾಗಿದೆ.
ಗ್ಯಾಸ್ ಮೂಲಕ ಕುಕ್ಕರ್ನಲ್ಲಿ ನೀರಿಗೆ ಜಿಂದಾತಿಲ್ಮಾಸತ್ ಎಣ್ಣೆಯನ್ನು ಹಾಕಿ ಕುದಿಸಲಾಗುತ್ತದೆ. ಕುಕ್ಕರ್ನಲ್ಲಿ ಸುಮಾರು 10 ರಿಂದ 15 ನಿಮಿಷಗಳ ಕಾಲ ನೀರನ್ನು ಕುದಿಸಿದ ಬಳಿಕ ಅದರಿಂದ ಬರುವ ಹಬೆ ಪೈಪ್ ಮೂಲಕ ಹೊರಗೆ ಬರುವಂತೆ ಮಾಡಲಾಗಿದೆ. ಪೈಪ್ ಮೂಲಕ ಬರುವ ಹಬೆಯನ್ನು ಸುಮಾರು 5 ನಿಮಿಷ ಪ್ರತಿಯೊಬ್ಬ ಸಿಬ್ಬಂದಿ ತೆಗೆದುಕೊಳ್ಳಬಹುದು.
ಠಾಣೆಯಲ್ಲಿ ಕಷಾಯ: ತುಳಸಿ, ಚಕ್ಕೆ, ಲವಂಗ, ಯಾಲಕ್ಕಿ, ಮೆಣಸು, ಶುಂಠಿ, ಟೀ ಪುಡಿ, ಬೆಲ್ಲ ಹಾಕಿ ಕುದಿಸಿ ಕಷಾಯ ತಯಾರಿಸಿ ಬೆಳಿಗ್ಗೆ ಮತ್ತು ಸಂಜೆ ಹೊತ್ತು ಪ್ರತಿಯೊಬ್ಬ ಸಿಬ್ಬಂದಿಗೂ ಕುಡಿಯಲು ನೀಡಲಾಗುತ್ತಿದೆ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ಅಲ್ಲದೇ ಸಾಮಾನ್ಯ ಜ್ವರ, ಕೆಮ್ಮು ಈ ರೀತಿಯ ಸಮಸ್ಯೆಗಳು ಬರದಂತೆ ತಡೆಯುವಲ್ಲಿ ಪರಿಣಾಮಕಾರಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.