
ಸುರಪುರ: ಅದು 2000ಕ್ಕಿಂತ ಹಿಂದಿನ ಕಾಲ. ಇಲ್ಲಿನ ಹೋಳಿ ಆಚರಣೆ ಅಂದಿನ ಹೈ.ಕ ಪ್ರದೇಶದಲ್ಲಿ ಪ್ರಸಿದ್ಧಿ ಪಡೆದಿತ್ತು. ಬೇರೆ ಊರಿನ ನೆಂಟರು, ಸ್ನೇಹಿತರು ಹೋಳಿ ಸಂಭ್ರಮ ಕಣ್ತುಂಬಿಕೊಳ್ಳಲೆಂದೆ ಸುರಪುರಕ್ಕೆ ಆಗಮಿಸುತ್ತಿದ್ದರು.
ಶಿವರಾತ್ರಿ ಮರುದಿನ ಹೋಳಿ ಹಬ್ಬಕ್ಕೆ ಚಾಲನೆ ಸಿಗುತ್ತಿತ್ತು. ಅಂದಿನಿಂದಲೇ ಮುಂದಿನ 15 ದಿನ ಹಬ್ಬ ಪರಾಕಾಷ್ಠೆಯಲ್ಲಿರುತ್ತಿತ್ತು. ನಿತ್ಯ ಸಂಜೆ ಆಯಾ ಬಡಾವಣೆಯ ಯುವಕರು ತಂಡ ಕಟ್ಟಿಕೊಂಡು ಪ್ರಮುಖ ಸ್ಥಳಗಳಲ್ಲಿ ಕುಳಿತು ಹಲಗೆ ಬಾರಿಸುತ್ತಾ ಅಶ್ಲೀಲ ಹಾಡುಗಳನ್ನು ಹಾಡುತ್ತಿದ್ದರು.
ರಾತ್ರಿಯಾಗುತ್ತಿದ್ದಂತೆ ಮನೆ ಮನೆಗೆ ನುಗ್ಗಿ ಕಟ್ಟಿಗೆ, ಕುರುಳು ಕಳ್ಳತನ ಮಾಡುತ್ತಿದ್ದರು. ಕಾಮದಹನಕ್ಕೆ ಒಂದೆಡೆ ಸಂಗ್ರಹಿಸಿ ಇಡುತ್ತಿದ್ದರು. ಮನೆ ಕಟ್ಟಲು ಇಟ್ಟಿದ್ದ ಹೊಸ ಕಟ್ಟಿಗೆ ತುಂಡುಗಳನ್ನು ಬಿಡುತ್ತಿರಲಿಲ್ಲ. ದೇಣಿಗೆಯನ್ನೂ ಸಂಗ್ರಹಿಸುತ್ತಿದ್ದರು. ಮನೆ ಮಾಲಿಕರು ರಾತ್ರಿಯೂ ಎಚ್ಚರವಾಗಿರುವ ಸ್ಥಿತಿ ಇತ್ತು.
ರಾತ್ರಿ ಸಮಯದಲ್ಲಿ ಕತ್ತೆ ಸಿಕ್ಕರಂತೂ ಅದರ ಮಜವೇ ಬೇರೆ. ಕತ್ತೆಯ ಮೇಲೆ ಸವಾರಿ ಮಾಡುವುದು ಮಜ ನೀಡುತ್ತಿತ್ತು. ಈಗ ಕತ್ತೆಗಳು ಎಲ್ಲಿಯೂ ಕಾಣುತ್ತಿಲ್ಲ. ನಿತ್ಯ ಬಣ್ಣವನ್ನೂ ಆಡುತ್ತಿದ್ದರು. ಮಧ್ಯರಾತ್ರಿಯ ನಂತರವಷ್ಟೆ ಮನೆಗೆ ತೆರಳುತ್ತಿದ್ದರು.
ಹುಣ್ಣಿಮೆಯ ದಿನ ನಡೆಯುತ್ತಿದ್ದ ಕಾಮದಹನದ ಅದ್ಧೂರಿಗೆ ಸಾಟಿಯೇ ಇರಲಿಲ್ಲ. ಯುವಕರೆಲ್ಲ ಸೇರಿ ಕಾಮದೇವನ ಚಿತ್ರಪಟವನ್ನು ಕೋಲಿಗೆ ಕಟ್ಟಿ ತಮ್ಮ ತಮ್ಮ ಬಡಾವಣೆಗಳಲ್ಲಿ ಹಲಗೆಯೊಂದಿಗೆ ಮೆರೆಸುತ್ತಿದ್ದರು. ನಿರ್ದಿಷ್ಟ ಪಡಿಸಿದ ಜಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಕಟ್ಟಿಗೆ, ಕುರುಳು ಒಟ್ಟಿ ಚಿತ್ರಪಟವನ್ನು ನೇತು ಹಾಕಿ ಪೂಜೆ ಸಲ್ಲಿಸುತ್ತಿದ್ದರು.
ಲಬೋ ಲಬೋ ಎಂದು ಶಬ್ದ ಮಾಡುತ್ತಾ ಪ್ರದಕ್ಷಿಣೆ ಹಾಕಿ ಅಗ್ನಿಸ್ಪರ್ಶ ಮಾಡುತ್ತಿದ್ದರು. ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಜನರಿಗೆ ಪ್ರಸಾದ ವಿತರಿಸುತ್ತಿದ್ದರು. ಬೆಂಕಿ ಎರಡು ಮೂರು ದಿನ ಇರುತ್ತಿತ್ತು. ಈಗ ಅರ್ಧಗಂಟೆಯಲ್ಲಿ ಬೆಂಕಿ ನಂದಿರುತ್ತದೆ. ಮರುದಿನ ಜನರು ಬೆಂಕಿಯಲ್ಲಿ ಗಡ್ಡೆ, ಗೆಣಸು ಸುಟ್ಟು ತಿನ್ನುತ್ತಿದ್ದರು. ಕೆಲವರು ಬೆಂಕಿ ಕೆಂಡವನ್ನು ಮನೆಗೆ ಒಯ್ದು ದೀಪ ಬೆಳಗಿಸುತ್ತಿದ್ದರು.
ಹೋಳಿ ಹುಣ್ಣಿಮೆಯ ಮರುದಿನ ಬೆಳಗಿನ ಜಾವದಿಂದ ರಂಗಿನಾಟ ಜೋರು ಪಡೆಯುತ್ತಿತ್ತು. ಪ್ರಮುಖ ಸ್ಥಳಗಳಲ್ಲಿ ಬ್ಯಾರೆಲ್ ಗಟ್ಟಲೆ ಬಣ್ಣ ಕಲಿಸಿ ಇಡಲಾಗುತ್ತಿತ್ತು. ಜನರನ್ನು ಬ್ಯಾರೆಲ್ನಲ್ಲಿ ಅದ್ದಿ ತೆಗೆಯುತ್ತಿದ್ದರು. ಮನೆ ಮನೆಗೆ ತೆರಳಿ ತಮ್ಮ ಸ್ನೇಹಿತರಿಗೆ ಬಣ್ಣ ಹಚ್ಚಿ ಅವರನ್ನೂ ತಮ್ಮ ಜೊತೆ ಕರೆದುಕೊಂಡು ಹೋಗುತ್ತಿದ್ದರು.
ಅಣುಕು ಶವಯಾತ್ರೆ, ಹಲಗೆ ವಾದನ, ಅಶ್ಲೀಲ ಹಾಡುಗಳ ಭರಾಟೆ ರಂಗಿನಾಟದ ಹೈಲೈಟ್ ಆಗಿತ್ತು. ಸಂಜೆವರೆಗೂ ಬಣ್ಣದಾಟ ಇರುತ್ತಿತ್ತು. ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ನಂತರ ಸಮೀಪದ ನದಿ, ಬಾವಿಗಳಿಗೆ ತೆರಳಿ ಸ್ನಾನ ಮಾಡುತ್ತಿದ್ದರು. ರಾತ್ರಿ ತಿಂಡಿ ತಿನಿಸು ಮಾಡಿಸಿ ಸವಿಯುತ್ತಿದ್ದರು. ಮನೆ ಮನೆಗೆ ಪ್ರಸಾದ ಹಂಚುತ್ತಿದ್ದರು.
ಗುತ್ತೇದಾರ ಕುಟುಂಬ ಪ್ರಸ್ತುತ ಪಡಿಸುತ್ತಿದ್ದ ದುಂದುಮೆ ಹಾಡು ಹೋಳಿ ಆಚರಣೆಗೆ ಮೆರಗು ನೀಡುತ್ತಿತ್ತು. ಅರಮನೆ ಸೇರಿದಂತೆ ಗಣ್ಯರ ಮನೆಗೆ ತೆರಳಿ ಹಾಡು ಹಾಡಿ ಅವರು ಪ್ರೀತಿಯಿಂದ ಕೊಟ್ಟ ಹಣ ತೆಗೆದುಕೊಳ್ಳುತ್ತಿದ್ದರು. ಆ ಹಣದಿಂದ ಇಡೀ ಬಡಾವಣೆಗೆ ಊಟ ಹಾಕಿಸುತ್ತಿದ್ದರು.
ಮಾಹಿತಿ ತಂತ್ರಜ್ಞಾನದ ಅಧುನಿಕ ಜಗತ್ತು, ಟಿವಿ. ಮೋಬೈಲ್ ಈ ರಂಗಿನ ವೈಭವ ಕಸಿದುಕೊಂಡಿದೆ. 15 ದಿನದ ಬಣ್ಣದ ಹಬ್ಬ 2 ದಿನಕ್ಕೆ ಕುಸಿದು ಸಪ್ಪೆಯಾಗಿದೆ. ಈಗಿನ ಮಕ್ಕಳಿಗೆ ಅಂದಿನ ವೈಭವ ಇತಿಹಾಸದಂತೆ ಭಾಸವಾಗುತ್ತದೆ.
ಅಂದಿನ ಹೋಳಿ ವೈಭವಕ್ಕೆ ಸಾಟಿಯೇ ಇರಲಿಲ್ಲ. ಜನರ ಪ್ರೀತಿ ಬಾಂಧವ್ಯ ಭಾತೃತ್ವತೆ ಬೆಸೆಯಲು ಈ ಹಬ್ಬ ಕಾರಣವಾಗಿತ್ತು. ಈ ವೈಭವ ಮತ್ತೆ ಮರುಕಳಿಸಲಿಲಕ್ಷ್ಮಣ ಗುತೇದಾರ ದುಂದುಮೆ ಹಾಡುಗಾರ
ಇಲ್ಲಿನ ಹೋಳಿ ಆಚರಣೆ ಹಾಡುಗಳ ಬಗ್ಗೆ ಸಂಶೋಧನಾ ಪ್ರಬಂಧ ಮಂಡಿಸಬಹುದು. ಅಷ್ಟೊಂದು ಆಳವಾದ ಮಾಹಿತಿ ಇಲ್ಲಿನ ರಂಗಿನಾಟದಲ್ಲಿ ಇದೆಪ್ರಕಾಶಚಂದ ಜೈನ್ ಸಾಹಿತಿ
ಲೇಖಕನಿಲ್ಲದ ಅಶ್ಲೀಲ ಹಾಡುಗಳು...
‘ಆ ಕಂಠ ಈ ಕಂಠ ತತ್ರಾಣಿ ಕಂಠ ಅವನಮ್ಮ .. ಬಹಳ ತುಂಟ ಅವನ..ಹಾಕ್ಯಾರ ಬಂಗಾರದ ಕಂಠ. ದುಂದುಮೆ ಬಸವಂತಾನೇ ಒಬ್ಬ | ದುಂದುಮೆ ಹಾಡಿನ ಪ್ರಭಾವಕ್ಕೆ ಒಳಗಾಗಿ ಅದೇ ರಾಗದಲ್ಲಿ ಅಂದಿನ ಯುವಕರು ಇಂತಹ ಅಸಂಖ್ಯೆ ಅಶ್ಲೀಲ ಹಾಡುಗಳನ್ನು ಹಾಡುತ್ತಿದ್ದರು. ಅವುಗಳ ಜನಪ್ರಿಯತೆ ಮುಗಿಲು ಮುಟ್ಟಿತ್ತು. ಕೇಳಲು ಅಶ್ಲೀಲವಾಗಿರುವ ಈ ಹಾಡುಗಳಿಗೆ ಹಬ್ಬದ 15 ದಿನ ಅಲಿಖಿತ ಪರವಾನಗಿ ಇರುತ್ತಿತ್ತು. ಯಾರೂ ಸಿಡುಕುತ್ತಿರಲಿಲ್ಲ. ಸವಾಲು ಜವಾಬು ರೀತಿಯಲ್ಲಿ ಹಾಡುಗಳು ಪೈಪೋಟಿಯಿಂದ ಕೂಡಿರುತ್ತಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.