ADVERTISEMENT

ಸುರಪುರ | ಕಾಣದ ಸ್ವಚ್ಛತೆ ಗಬ್ಬೆದ್ದ ನಗರ

ದೀಪಾವಳಿ ಹಬ್ಬದ ಸಮಯದಲ್ಲೂ ವಿಲೇವಾರಿಯಾಗದ ತ್ಯಾಜ್ಯ

ಅಶೋಕ ಸಾಲವಾಡಗಿ
Published 21 ಅಕ್ಟೋಬರ್ 2025, 5:13 IST
Last Updated 21 ಅಕ್ಟೋಬರ್ 2025, 5:13 IST
ಸುರಪುರದ ಪಾಂಡುರಂಗ ಗುಡಿ ಹತ್ತಿರ ತ್ಯಾಜ್ಯ ಸಂಗ್ರಹವಾಗಿರುವುದು
ಸುರಪುರದ ಪಾಂಡುರಂಗ ಗುಡಿ ಹತ್ತಿರ ತ್ಯಾಜ್ಯ ಸಂಗ್ರಹವಾಗಿರುವುದು   

ಸುರಪುರ: ಸ್ವಚ್ಛ ಭಾರತದ ಕನಸು ಸುರಪುರ ನಗರಕ್ಕೆ ಕನಸಾಗಿಯೇ ಉಳಿಯುತ್ತಿದೆ. ಕಳೆದ ಹಲವು ತಿಂಗಳುಗಳಿಂದ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ. ಹೀಗಾಗಿ ನಗರ ಗಬ್ಬೆದ್ದು ನಾರುತ್ತಿದೆ. ದೀಪಾವಳಿ ಹಬ್ಬದ ಸಮಯದಲ್ಲೂ ನಾಗರಿಕರಿಗೆ ತ್ಯಾಜ್ಯ ವಿಲೇವಾರಿಯದೇ ಚಿಂತೆಯಾಗಿದೆ.

ಮೊದಲು ಹಸಿ ಕಸ ಮತ್ತು ಒಣ ಕಸ ಎಂದು ವಿಂಗಡಿಸಲಾಗುತ್ತಿತ್ತು. ಈಗ ಎಲ್ಲವನ್ನು ಒಟ್ಟಿಗೆ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ. ಪ್ರತಿ ದಿನ ಬೆಳಗಿನ ಸಮಯ ನಗರಸಭೆಯ ಕಸ ಸಾಗಣೆ ವಾಹನಗಳು ತಮಗೆ ನಿಗದಿ ಪಡಿಸಿದ ವಾರ್ಡ್‍ಗಳಿಗೆ ತೆರಳುತ್ತವೆ. ನಾಗರಿಕರು ಸಂಗ್ರಹಿಸಿಟ್ಟುಕೊಂಡು ತ್ಯಾಜ್ಯವನ್ನು ವಾಹನಕ್ಕೆ ಹಾಕುತ್ತಾರೆ.

ವೆಂಕಟಾಪುರದಲ್ಲಿ 4 ಎಕರೆ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕವಿದೆ. ಅಲ್ಲಿಗೆ ತ್ಯಾಜ್ಯ ಸಾಗಿಸಬೇಕು.
ಆದರೆ ಕಳೆದ ಐದಾರು ತಿಂಗಳುಗಳಿಂದ ವಾಹನಗಳು ಸಮರ್ಪಕವಾಗಿ ಬರುತ್ತಿಲ್ಲ ಇದರಿಂದ ಮನೆಗಳಲ್ಲಿ ತ್ಯಾಜ್ಯ ಉತ್ಪಾದನೆ ಹೆಚ್ಚಾಗುತ್ತಿದೆ. ಸಂಗ್ರಹಗೊಂಡ ತ್ಯಾಜ್ಯವನ್ನು ಅನಿವಾರ್ಯವಾಗಿ ಬೀದಿ ಬದಿ ಹಾಕುತ್ತಿದ್ದಾರೆ.

ADVERTISEMENT

ವಾರ್ಡಿನ ಕೆಲ ಸ್ಥಳಗಳು ಕಸ ಸಂಗ್ರಹದ ತಾಣಗಳಾಗಿ ಬಿಟ್ಟಿವೆ. ಕಸ ತಿನ್ನಲು ಹಂದಿಗಳು ಬಂದು ಇನ್ನಷ್ಟು ಗಬ್ಬೆಬ್ಬಿಸುತ್ತವೆ. ಸೊಳ್ಳೆಗಳ ಉತ್ಪತ್ತಿ ಹೆಚ್ಚುತ್ತಿದೆ. ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಕೆಲ ಸ್ಥಳಗಳಲ್ಲಂತೂ ಜನರು ತಿರುಗಾಡಲು ಬರದಷ್ಟು ಗಲೀಜು ಇರುತ್ತದೆ.

ನಗರಸಭೆಯ ಒಟ್ಟು ಕರದ ಬೇಡಿಕೆ ₹ 2.42 ಕೋಟಿ ಇದೆ. ಅದರಲ್ಲಿ ಘನ ತ್ಯಾಜ್ಯ ವಿಲೇವಾರಿ ತೆರಿಗೆಯಂದೆ ನಾಗರಿಕರಿಂದ ಪ್ರತಿ ವರ್ಷ ₹ 28 ಲಕ್ಷ ಕರ ವಸೂಲಿ ಮಾಡಲಾಗುತ್ತಿದೆ. ಆದರೂ ನಗರದ ನೈರ್ಮಲ್ಯ ಕಾಪಾಡುತ್ತಿಲ್ಲ ಎಂದು ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.

ನಗದ 31 ವಾರ್ಡ್‍ಗಳಲ್ಲಿ 9 ಟಾಟಾ ಎಸಿ, 4 ಟ್ರ್ಯಾಕ್ಟರ್, 2 ಜೆಸಿಬಿ, 2 ಸಕ್ಕಿಂಗ್ ಮಶಿನ್, 2 ಕಂಪ್ಯಾಕ್ಟರ್‌ಗಳಿವೆ. ಒಟ್ಟು 27 ಜನ ವಾಹನ ಚಾಲಕರಿದ್ದು, ನಿತ್ಯ ನಗರದಲ್ಲಿ 12 ಟನ್ ತ್ಯಾಜ್ಯ ಸಂಗ್ರಹವಾಗುತ್ತದೆ.

ಪ್ರಭಾವಿಗಳ ಮನೆಯ ತ್ಯಾಜ್ಯ ಸಂಗ್ರಹ: ತ್ಯಾಜ್ಯ ಸಾಗಣೆಯ 6 ಟಾಟಾ ಎಸಿ, ಒಂದು ಸಕ್ಕಿಂಗ್ ವಾಹನ, ಒಂದು ಕಂಪ್ಯಾಕ್ಟರ್ ದುರಸ್ತಿಯಲ್ಲಿವೆ. ಸುರಪುರ ನಗರದಲ್ಲಿ ಕೇವಲ ಎರಡು ವಾಹನಗಳು ಸಂಚರಿಸುತ್ತಿವೆ. ಪ್ರಭಾವಿಗಳು ತಮ್ಮ ಮನೆಯ ತ್ಯಾಜ್ಯ ವಿಲೇವಾರಿ ಮಾಡಬೇಕು ಎಂದು ಒತ್ತಾಯ ಮಾಡುವುದರಿಂದ ಒಂದು ವಾಹನ ದಿನಾಲೂ ಪ್ರಭಾವಿಗಳ ಮನೆಗೆ ತೆರಳಿ ಕಸ ಸಂಗ್ರಹ ಮಾಡುತ್ತಿದೆ. ಹೀಗಾಗಿ ಇತರ ಮನೆಗಳ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ.

ಸುರಪುರದ ಬಸ್ ನಿಲ್ದಾಣ ಹತ್ತಿರ ವಾಹನಕ್ಕೆ ತ್ಯಾಜ್ಯ ತುಂಬುತ್ತಿರುವುದು

ನೆರವಿಗೆ ಬಾರದ ಸ್ವಚ್ಛತಾ ಹೀ ಸೇವೆ!

ನಗರಸಭೆ ಹೆಚ್ಚು ತ್ಯಾಜ್ಯ ಸಂಗ್ರಹವಾಗುವ 10 ಸ್ಥಳಗಳನ್ನು ಗುರುತಿಸಿ ಕಳೆದ ಸೆ.19 ರಿಂದ ಅ 2ರವರೆಗೆ ಸ್ವಚ್ಛತಾ ಹೀ ಸೇವೆ ಎಂಬ ಅಭಿಯಾನ ನಡೆಸಿತು. ಸ್ಥಳಗಳನ್ನು ಸ್ವಚ್ಛಗೊಳಿಸಿ ಅಲ್ಲಿ ರಂಗವಲ್ಲಿ ಬಿಡಿಸಲಾಗಿತ್ತು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಕದೇ ಮನೆಯಲ್ಲೆ ಸಂಗ್ರಹಿಸಿ ವಾಹನಕ್ಕೆ ನೀಡಿ ಎಂಬ ಅರಿವು ಮೂಡಿಸಲಾಯಿತು. ಆದರೆ ಕಸ ಸಂಗ್ರಹಿಸಲು ವಾಹನಗಳೆ ಬರುತ್ತಿಲ್ಲವಾದ್ದರಿಂದ ಮತ್ತೇ ಈ ಸ್ಥಳಗಳು ತ್ಯಾಜ್ಯಯುಕ್ತವಾಗಿವೆ.

6 ತಿಂಗಳಿಂದ ವೇತನ ಇಲ್ಲ!

ವಾಹನ ಚಾಲಕರಿಗೆ ಕಳೆದ 6 ತಿಂಗಳಿಂದ ವೇತನ ನೀಡಿಲ್ಲ. ನಗರಸಭೆ ತಾನು ಸಂಗ್ರಹಿಸುವ ತೆರಿಗೆಯ ಹಣದಲ್ಲಿ ವೇತನ ನೀಡಬೇಕು. ತೆರಿಗೆ ಸಂಗ್ರಹವಾಗುವಲ್ಲಿ ಏರುಪೇರು ಆಗುವುದರಿಂದ ವೇತನ ಪಾವತಿ ವಿಳಂಬವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ವಾಹನ ಚಾಲಕರು ಹೊರಗುತ್ತಿಗೆ ಆಧಾರದಲ್ಲಿ ನೇಮಕವಾದವರು. ನಗರಸಭೆ ₹ 18 ಸಾವಿರ ವೇತನ ನೀಡುತ್ತದೆ. ಏಜೆನ್ಸಿಯವರು ಚಾಲಕರಿಗೆ ₹ 14900 ನೀಡುತ್ತಾರೆ. ಬೆಳಿಗ್ಗೆ 5.30ಕ್ಕೆ ಚಾಲಕರು ತಮ್ಮ ಕರ್ತವ್ಯ ಆರಂಭಿಸುತ್ತಾರೆ. ಬೆಳಿಗ್ಗೆ 9.30ರ ವರೆಗೂ ತ್ಯಾಜ್ಯ ಸಾಗಣೆ ಕೆಲಸ ಮಾಡುತ್ತಾರೆ. 10 ಗಂಟೆಗೆ ನಗರಸಭೆಗೆ ಹಾಜರಾಗಿ ಅಧಿಕಾರಿಗಳು ವಹಿಸುವ ತ್ಯಾಜ್ಯ ವಿಲೇವಾರಿ ಕೆಲಸವನ್ನು ಮಧ್ಯಾಹ್ನ 2ರ ವರೆಗೂ ಮಾಡುತ್ತಾರೆ. ತಮ್ಮ ಸೇವೆ ಕಾಯಂ ಮಾಡಬೇಕೆಂಬುದು ಅವರ ಬಲವಾದ ಬೇಡಿಕೆ.

ಯಾರು ಏನು ಹೇಳುತ್ತಾರೆ

ಕೆಟ್ಟ ವಾಹನಗಳನ್ನು ದುರಸ್ತಿ ಮಾಡಲಾಗಿದೆ. ಎಲ್ಲ ವಾಹನಗಳು ಈಗ ಕಾರ್ಯಕ್ಷಮತೆ ಹೊಂದಿದ್ದು ತ್ಯಾಜ್ಯ ಸಂಗ್ರಹಕ್ಕೆ ಮನೆಗೆ ಮನೆಗೆ ಬರಲು ಸಜ್ಜಾಗಿವೆ

–ಶಾಂತಪ್ಪ ಹೊಸೂರ ಎಇಇ

ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕಸ ಗುಡಿಸುವ ಚರಂಡಿ ತೆಗೆಯುವ ಪೌರಕಾರ್ಮಿಕರು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದಾರೆ. ಸೊಳ್ಳೆ ಉತ್ಪತ್ತಿ ತಡೆಯಲು ನಿಯಮಿತವಾಗಿ ಫಾಗಿಂಗ್ ಮಾಡಲಾಗುತ್ತಿದೆ

–ಹಣಮಂತ ಯಾದವ ಹಿರಿಯ ನೈರ್ಮಲ್ಯ ನಿರೀಕ್ಷಕ ನಗರಸಭೆ

ನಾಗರಿಕರ ಆರೋಗ್ಯದೊಂದಿಗೆ ಆಟವಾಡುತ್ತಿದೆ. ನೈರ್ಮಲ್ಯ ಮರೀಚಿಕೆಯಾಗಿದೆ. ಕಸದ ವಾಹನ ಬರುತ್ತಿಲ್ಲ. ತ್ಯಾಜ್ಯ ವಿಲೇವಾರಿ ಮಾಡಲು ಜನರು ಹರಸಾಹಸ ಪಡುವಂತಾಗಿದೆ.

–ಉಸ್ತಾದ ವಜಾಹತ್ ಹುಸೇನ್ ಜೆಡಿಎಸ್ ಮುಖಂಡ

ಘನತ್ಯಾಜ್ಯ ವಿಲೇವಾರಿಗಾಗಿಯೇ ಪ್ರತ್ಯೇಕ ಸೆಸ್ ಮೂಲಕ ತೆರಿಗೆ ಸಂಗ್ರಹಿಸುವ ನಗರಸಭೆ ನೈರ್ಮಲ್ಯವನ್ನೇ ಮರೆತಿದೆ. ಸ್ವಚ್ಛತೆ ಕಾಪಾಡಿ ಜನರ ಆರೋಗ್ಯ ರಕ್ಷಣೆಯ ಜವಾಬ್ದಾರಿ ನಗರಸಭೆಗೆ ಇದೆ.

–ರಾಘವೇಂದ್ರ ಭಕ್ರಿ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.