
ಕಕ್ಕೇರಾ: ಅತ್ಯಂತ ವೈಭವ, ಸಂಭ್ರಮದಿಂದ ಜರುಗಿದ ದಕ್ಷಿಣ ಕಾಶಿ ತಿಂಥಣಿ ಮೌನೇಶ್ವರ ಜಾತ್ರೆಯು ಸೋಮವಾರ ಮಧ್ಯರಾತ್ರಿ ಪಲ್ಲಕ್ಕಿಯು ಗುಹಾಪ್ರವೇಶ ಮಾಡುವುದರೊಂದಿಗೆ ಸಂಪನ್ನಗೊಂಡಿತು.
ಗುಹಾಪ್ರವೇಶದ ಸೋಮವಾರ ಅಸಂಖ್ಯಾತ ಭಕ್ತ ಸಮೂಹ ಆಗಮಿಸಿ ಧೂಳಗಾಯಿ ಸಮರ್ಪಿಸಿದರು. ಸುರಪುರದ ಕಾಳಮ್ಮದೇವಿ ಪಲ್ಲಕ್ಕಿ ಹಾಗೂ ಮೌನೇಶ್ವರ ಪಲ್ಲಕ್ಕಿಗಳು ಜೋಡಿಯಾಗಿ ಪುರವಂತರ ಸೇವೆ ಹಾಗೂ ವಾದ್ಯಮೇಳದೊಂದಿಗೆ ಬೆಳಿಗ್ಗೆ ಕೃಷ್ಣಾನದಿಗೆ ಗಂಗಾಸ್ನಾನಕ್ಕೆ ತೆರಳಿ, ಸಂಜೆ ಕೈಲಾಸಕಟ್ಟೆ ತಲುಪಿ ಮಹಾಸೇವಾಗೈದು, ನಂತರ 5 ಸುತ್ತು ದೇವಸ್ಥಾಕ್ಕೆ ಪ್ರದಕ್ಷಿಣೆ ಹಾಕಿದ ನಂತರ ಮೌನೇಶ್ವರ ಮೂರ್ತಿ ಗುಹಾಪ್ರವೇಶವಾಯಿತು. ಈ ವೇಳೆ ಭಕ್ತರಿಂದ ‘ಏಕ ಲಾಕ್ ಐಂ ಸಿ ಹಜಾರ್ ಪಾಚೋಪೀರ ಪೈಗಂಬರ್ ಜೀತಾ ಪೈಗಂಬರ್ ಮೌನೋದ್ದೀನ್ ಕಾಶೀಪತಿ ಗಂಗಾಧರ ಹರಹರ ಮಹಾದೇವ....’ ಎಂಬ ಜಯಘೋಷಗಳು ಮೊಳಗಿದವು.
ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ರಾಜ್ಯಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಇದರೊಂದಿಗೆ ಜಾತ್ರೆ ಸಂಪನ್ನಗೊಂಡಿತು.
ದೇವಸ್ಥಾನದ ಮೌನೇಶ್ವರಸ್ವಾಮಿ, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಎಸ್ಪಿ ಪ್ಲಥ್ವಿಕ್ ಶಂಕರ್ ಹಾಗೂ ಸಹಾಯಕ ಆಯುಕ್ತ ಶ್ರೀಧರ್ ಗೋಟೂರ್ ಜಾತ್ರೋತ್ಸವ ಸಂದರ್ಭದಲ್ಲಿ ಭೇಟಿ ನೀಡಿದರು.
ಕಕ್ಕೇರಾ ಪಟ್ಟಣದ ಸಮೀಪದ ಮೌನೇಶ್ವರ ಜಾತ್ರೆಯಲ್ಲಿ ಶರಣರ ಸಮಾಗಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.