ಯಾದಗಿರಿ: ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಗಿರಿ ಜಿಲ್ಲೆ ಯಾದಗಿರಿಯು ಬಿಸಿಲಿಗೆ ಖ್ಯಾತಿ ಪಡೆದಿದ್ದರೂ ಈ ಚಳಿಗಾಲದಲ್ಲಿ ಥಂಡಿಯು ಥರಗುಟ್ಟುವಂತೆ ಮಾಡಿದೆ.
ಬೆಳಿಗ್ಗೆ7.30 ಆದರೂ ಸೂರ್ಯನ ದರ್ಶನ ಆಗುತ್ತಿಲ್ಲ. ಬೆಳಗಿನ ಜಾವ ಅಲ್ಲಲ್ಲಿ ಇಬ್ಬನಿ ಬೀಳುತ್ತಿದೆ. ಇದರಿಂದ ಮನೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ.
ಬೇಸಿಗೆಯಲ್ಲಿ ಜಿಲ್ಲೆಯಲ್ಲಿ43– 44 ಡಿಗ್ರಿ ವರೆಗೆಉಷ್ಣಾಂಶದಾಖಲಾಗುತ್ತದೆ. ಆದರೆ, ಈಗ 31– 32 ಡಿಗ್ರಿ ದಾಖಲಾಗುತ್ತಿದೆ.
ಲುಂಬಿನಿ ವನದಲ್ಲಿ ವಾಕಿಂಗ್ ಬರುವವರ ಸಂಖ್ಯೆ ಇಳಿಮುಖವಾಗಿದೆ. ಈ ಮುಂಚೆ ಬೆಳಿಗ್ಗೆ 5 ಗಂಟೆಗೆ ಯೋಗಾಸನ, ವ್ಯಾಯಾಮ ಮಾಡಲು ಬರುವವರು ವಿಪರೀತ ಚಳಿಯ ಕಾರಣದಿಂದಾಗಿ ಸೂರ್ಯ ಮೂಡಿದ ನಂತರ ವಾಹನಗಳಲ್ಲಿ ಬರುತ್ತಿದ್ದಾರೆ. ಚಳಿ ಕಾರಣ ವಾಯುವಿಹಾರಿಗಳ ಸಂಖ್ಯೆ ಅರ್ಧದಷ್ಟು ಕಡಿಮೆ ಆಗಿದೆ. ಜನರು ಸಂಜೆ ವೇಳೆಯಲ್ಲಿ ವಾಕಿಂಗ್ ಬರುತ್ತಿದ್ದಾರೆ. ಹವಾಮಾನ ಬದಲಾವಣೆಯಿಂದ ಬೆಳಿಗ್ಗೆ ಬರುವುದನ್ನೇ ಕೆಲವರು ಬಿಟ್ಟಿದ್ದಾರೆ ಎಂದು ಲುಂಬಿನಿ ವನದ ಉಸ್ತುವಾರಿ ಮೇಘನಾಥ ಅಬ್ರಾಹಂ ಬೆಳ್ಳಿ ಹೇಳುತ್ತಾರೆ.
ವೃದ್ಧರಿಗೆ, ಚರ್ಮರೋಗಿಗಳಿಗೆ ಸಮಸ್ಯೆ
ವೃದ್ಧರು, ಚರ್ಮರೋಗಿಗಳು ಥಂಡಿಯಿಂದ ಇನ್ನಿಲ್ಲದ ಸಮಸ್ಯೆ ಆನುಭವಿಸುತ್ತಿದ್ದಾರೆ. ಆಸ್ತಮಾ ರೋಗಿಗಳು ತಂಪಿನ ವಾತಾವರಣದಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ.
‘ವೃದ್ಧರಿಗೆ ಉಸಿರಾಟದ ಸಮಸ್ಯೆ ಕಾಣಿಕೊಳ್ಳುವ ಸಂಭವ ಇರುತ್ತದೆ. ಉಸಿರಾಟ ತೊಂದರೆಯಾಗಿ ವೈರಲ್ ಸೋಂಕು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಇವರು ಸ್ವೆಟರ್, ಮಂಕಿ ಕ್ಯಾಪ್ ಮುಂತಾದ ಬೆಚ್ಚಗಿನ ಉಡುಗೆ ತೊಡಬೇಕು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾರಾಯಣಪ್ಪ ಸಲಹೆ ನೀಡುತ್ತಾರೆ.
ಎಸಿ ಬಂದ್
15 ದಿನಗಳಿಂದ ವಿಪರೀತ ಚಳಿ ಕಾರಣ ಜನರು ಹವಾನಿಯಂತ್ರಕಗಳನ್ನು ಬಂದ್ ಮಾಡಿದ್ದಾರೆ. ಸಂಜೆಯಾದರೆ ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.