ಸುರಪುರ: ಕುಡಿಯುವ ನೀರಿಗಾಗಿ ಸವರ್ಣೀಯರು ಮತ್ತು ದಲಿತರ ಮಧ್ಯೆ ಹೊಡೆದಾಟ ನಡೆದಿದ್ದು, ಹಲವರು ಗಾಯಗೊಂಡ ಘಟನೆ ತಾಲ್ಲೂಕಿನ ವಾಗಣಗೇರಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ವಾಗಣಗೇರಿ, ತಳವಾರಗೇರಾ ಎರಡು ಗ್ರಾಮಗಳು ಪರಸ್ಪರ ಹೊಂದಿಕೊಂಡಿದ್ದು, ದಲಿತರ ಬಡಾವಣೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ತಳವಾರಗೇರಾ ಗ್ರಾಮದ ಕೊಳವೆಬಾವಿಯಲ್ಲಿ (ಕೈ ಪಂಪು) ಸಾಕಷ್ಟು ನೀರಿನ ಲಭ್ಯತೆಯೂ ಇದೆ. ವಾಗಣಗೇರಿ ಬಡಾವಣೆಯಲ್ಲಿ ಕೊಳವೆಬಾವಿ ಕೆಟ್ಟಾಗ ದಲಿತರು ತಳವಾರಗೇರಾ ಗ್ರಾಮದ ಕೊಳವೆಬಾವಿಯಿಂದ ನೀರು ತರುತ್ತಾರೆ.
ಸರ್ವಣೀಯರು ನೀರು ತೆಗೆದುಕೊಂಡ ನಂತರವೇ ದಲಿತರು ನೀರು ತೆಗೆದುಕೊಳ್ಳಬೇಕು ಇದು ವಾಸ್ತವಿಕ ಸ್ಥಿತಿ. ಭಾನುವಾರ ಬೆಳಗ್ಗೆ ದಲಿತರು ನೀರು ತೆಗೆದುಕೊಳ್ಳಲು ಹೋದಾಗ ತಳವಾರಗೇರಾ ಗ್ರಾಮದ ಸರ್ವರ್ಣೀಯರು ತಕರಾರು ತೆಗೆದಿದ್ದಾರೆ. ಪರಸ್ಪರ ಎರಡು ಕೋಮುಗಳ ನಡುವೆ ವಾಗ್ವಾದ ನಡೆದು ಮಾರಾಮಾರಿಗೆ ತಿರುಗಿದೆ. ಘಟನೆಯಲ್ಲಿ ದಲಿತ ಸಮುದಾಯದ ಮಾನಪ್ಪ ಕಟ್ಟಿಮನಿ, ಗೋಪಾಲಪ್ಪ ಕಟ್ಟಿಮನಿ, ಬಸವರಾಜ ಕಟ್ಟಿಮನಿ, ಮಹೇಶಕುಮಾರ ಕಟ್ಟಿಮನಿ, ಶರಣಪ್ಪ ಕಟ್ಟಿಮನಿ, ಮಾನಯ್ಯ ಕಟ್ಟಿಮನಿ ಗಂಭಿರವಾಗಿ ಗಾಯಗೊಂಡಿದ್ದು ,ಹೆಚ್ಚಿನ ಚಿಕಿತ್ಸೆಗಾಗಿ ಜಿಲಾಸ್ಪತ್ರೆಗೆ ರವಾನಿಸಲಾಗಿದೆ. ಉಳಿದ 12 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಡಿಯುವ ನೀರಿನ ವಿಷಯದಲ್ಲಿ ಸರ್ವಣೀಯರು ಜಾತೀಯತೆ ಮಾಡಿದ್ದು ಅಸ್ಪ್ಯಶ್ಯತೆ ಎಸಗಿದ್ದಾರೆ ಎಂದು ಘಟನೆಯಲ್ಲಿ ಗಾಯಗೊಂಡಿರುವ ಮಾನಪ್ಪ ಕಟ್ಟಿಮನಿ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.