ADVERTISEMENT

ದೆಹಲಿ ಗಣರಾಜ್ಯೋತ್ಸವಕ್ಕೆ ಯೋಗ ತರಬೇತುದಾರ ಶಿವರೆಡ್ಡಿ ನಾಮನಿರ್ದೇಶನ

ತೋಟೇಂದ್ರ ಎಸ್ ಮಾಕಲ್
Published 11 ಜನವರಿ 2024, 8:37 IST
Last Updated 11 ಜನವರಿ 2024, 8:37 IST
   

ಯರಗೋಳ: ನವದೆಹಲಿಯಲ್ಲಿ ಜನವರಿ 26 ರಂದು ಜರುಗಲಿರುವ ಗಣರಾಜ್ಯೋತ್ಸವ ಸಮಾರಂಭಕ್ಕೆ ಯಾದಗಿರಿ ತಾಲ್ಲೂಕಿನ ಅರಕೇರಾ ಬಿ ಗ್ರಾಮದ ಯೋಗ ತರಬೇತುದಾರ ಶಿವರೆಡ್ಡಿ ರಾಜ್ಯ ಆಯುಷ್ ಇಲಾಖೆಯಿಂದ ನಾಮನಿರ್ದೇಶನಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖ ಯೋಗಾಸನಗಳು ಪ್ರದರ್ಶಿಸಲಿದ್ದಾರೆ. ರಾಜ್ಯದ 18 ಜನ ಯೋಗ ತರಬೇತುದಾರರನ್ನು ರಾಜ್ಯ ಆಯುಷ್ ಇಲಾಖೆ (ಕಾರ್ಯಕ್ರಮ) ನಾಮ ನಿರ್ದೇಶನ ಮಾಡಿ, ಪಟ್ಟಿಯನ್ನು ಕೇಂದ್ರ ಸರ್ಕಾರದ ಆಯುಷ್ ಇಲಾಖೆ ಕಾರ್ಯದರ್ಶಿಗಳಿಗೆ ಕಳುಹಿಸಿದ್ದಾರೆ. ಇವರೆಲ್ಲರಿಗೂ ವಿಶೇಷ ಅತಿಥಿಗಳಾಗಿ ಪರಿಗಣಿಸಿ ನವದೆಹಲಿಗೆ ಪ್ರಯಾಣಿಸಲು ಮತ್ತು ಗಣರಾಜ್ಯೋತ್ಸವದಲ್ಲಿ ರಾಜ್ಯದ ಪರವಾಗಿ ಪ್ರತಿನಿಧಿಸಲು ರಾಜ್ಯ

ಆಯುಷ್ ಇಲಾಖೆ ನಿರ್ದೇಶಕರು (ಆಯುಕ್ತರು) ಮತ್ತು ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಯ ನಿರ್ದೇಶಕರು ಶಿಫಾರಸು ಮಾಡಲಾದ ಪ್ರತಿ 'ಪ್ರಜಾವಾಣಿ'ಗೆ ಲಭ್ಯವಾಗಿದೆ.

ADVERTISEMENT

ತರಬೇತುದಾರ ಶಿವರೆಡ್ಡಿ ಯಾದಗಿರಿ ತಾಲ್ಲೂಕಿನ ಮೈಲಾಪುರ ಗ್ರಾಮದ ಸರ್ಕಾರಿ ಹೋಮಿಯೋಪಥಿ ಚಿಕಿತ್ಸಾಲಯದಲ್ಲಿ ಯೋಗ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅರಕೇರಾ ಗ್ರಾಮದಲ್ಲಿ ಪ್ರಾಥಮಿಕ,ಹೆಡಗಿಮದ್ರ ಗ್ರಾಮದಲ್ಲಿ ಪ್ರೌಢ, ಯಾದಗಿರಿಯಲ್ಲಿ ಪದವಿಪೂರ್ವ, ಜವಾಹರ್ ಮಹಾವಿದ್ಯಾಲಯದಲ್ಲಿ ಬಿಎ, ಎಲ್ ಎಲ್ ಬಿ ಪದವಿ, ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪಿಜಿ ಡಿಪ್ಲೋಮಾ ಇನ್ ಯೋಗ ಸರ್ಟಿಫಿಕೇಟ್ ಕೋರ್ಸ್ ಪೂರ್ಣಗೊಳಿಸಿದ್ದಾರೆ.

2009 ರಲ್ಲಿ ವಿಭಾಗ ಮಟ್ಟದಲ್ಲಿ ದ್ವಿತೀಯ, 2010 ರಲ್ಲಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ, 2015 -16 ಯಾದಗಿರಿಯಲ್ಲಿ ನಡೆದ ರಾಷ್ಟ್ರೀಯ ಯೋಗ ದಿನಾಚರಣೆಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ, 2016 ಮೈಸೂರು ದಸರಾ ಮಹೋತ್ಸವದಲ್ಲಿ, 2016 ಬಿಕೆಎಸ್ ಅಯ್ಯಂಗಾರ್ ಮೆಮೋರಿಯಲ್ ರಾಷ್ಟ್ರಮಟ್ಟದ ಯೋಗ ಸ್ಪರ್ಧೆ,

2017 ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ ಕಲಬುರಗಿ ಆಯೋಜಿಸಿದ ಮುಕ್ತ ಯೋಗ ಸ್ಪರ್ಧೆ, 2017 ಡಾ. ರಾಜಕುಮಾರ್ ರಾಷ್ಟ್ರಮಟ್ಟದ ಮುಕ್ತ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. 2023ರಲ್ಲಿ ಮೈಸೂರು ದಸರಾ ಯೋಗದಲ್ಲಿ ಸ್ಪರ್ಧೆಯ ನಿರ್ಣಾಯಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಸ್ವಾಮಿ ವಿವೇಕಾನಂದ ಯೋಗ ಟ್ರಸ್ಟ್ ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ಉಚಿತ ಯೋಗ ತರಬೇತಿ ನೀಡುತ್ತಿದ್ದಾರೆ. 2017 ರಾಜ್ಯಮಟ್ಟದ ಯೋಗ ಪ್ರತಿಭಾ ಪುರಸ್ಕಾರ ಲಭಿಸಿದೆ. ರಾಜ್ಯ ಯೋಗಾಸನ ಸಂಸ್ಥೆ ನಿರ್ಣಾಯಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.