ಬೆಂಗಳೂರು: ‘ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪುತ್ರ ನಿಖಿಲ್ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮೊದಲು ಆ ಕ್ಷೇತ್ರ ವ್ಯಾಪ್ತಿಯಲ್ಲಿ ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್ಸಿನ ಎಲ್ಲ ಎಂಟು ಪರಾಜಿತ ಅಭ್ಯರ್ಥಿಗಳನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು’ ಎಂದು ಆಹಾರ ಸಚಿವ ಜಮೀರ್ ಅಹಮದ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಂಗಳವಾರ ಮಾತನಾಡಿದ ಅವರು, ‘ಹಾಗೆ ಮಾಡದೆ ಅವರು ತಪ್ಪು ಮಾಡಿದ್ದಾರೆ’ ಎಂದೂ ಅಭಿಪ್ರಾಯಪಟ್ಟರು.
‘ಉಪ ಚುನಾವಣೆಯಲ್ಲಿ ಶಿವರಾಮೇಗೌಡ ಅವರನ್ನು ಕಣಕ್ಕಿಳಿಸುವ ಮೊದಲು ಎಲ್ಲರ ಜೊತೆ ಕುಮಾರಸ್ವಾಮಿ ಚರ್ಚಿಸಿದ್ದರು. ಹೀಗಾಗಿ, ಮೂರು ಲಕ್ಷ ಮತಗಳ ಅಂತರದಿಂದ ಶಿವರಾಮೇಗೌಡ ಗೆಲುವು ಸಾಧಿಸಿದ್ದರು. ನಿಖಿಲ್ ಅವರನ್ನು ಕಣಕ್ಕಿಳಿಸುವಾಗಲೂ ಅದೇ ಕೆಲಸವನ್ನು ಮಾಡಬೇಕಿತ್ತು’ ಎಂದರು.
‘ನಮ್ಮ ಜೊತೆ ಮೂಲ ಕಾಂಗ್ರೆಸ್ಸಿಗರು ಇದ್ದಾರೆ ಸಾಕು. ಬೆನ್ನಿಗೆ ಚೂರಿ ಹಾಕಿದವರು ಬೇಕಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು. ಇದರಿಂದ ಬೇಸರಗೊಂಡು ಚಲುವರಾಯಸ್ವಾಮಿ ಮನೆಯಲ್ಲೇ ಕುಳಿತುಕೊಂಡರು. ಸುಮಲತಾ ಪರವಾಗಿ ಅವರು ಪ್ರಚಾರ ಮಾಡಿಲ್ಲ’ ಎಂದೂ ಜಮೀರ್ ಹೇಳಿದರು.
ಸಿದ್ದರಾಮಯ್ಯ ನಮ್ಮ ನಾಯಕ: ‘ಮತ್ತೆ ನಾನು ಮುಖ್ಯಮಂತ್ರಿ ಆಗುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್, ‘ಈಗಲೂ ಸಿದ್ದರಾಮಯ್ಯ ಅವರೇ ನಮ್ಮ ನಾಯಕ. ಅವರು ನಾಳೆಯೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಮುಂದಿನ ಚುನಾವಣೆ ಬಳಿಕ ಆಗುವುದಾಗಿ ಹೇಳಿದ್ದಾರೆ. ಅವರು ಮುಖ್ಯಮಂತ್ರಿಯಾಗಲಿ ಎಂದು ನಾವಷ್ಟೇ ಅಲ್ಲ, ಜನರೂ ಬಯಸುತ್ತಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.