ADVERTISEMENT

ಬಿಜೆಪಿ ಪ್ರಣಾಳಿಕೆ ಸಿದ್ಧತೆಗೆ 3 ಲಕ್ಷ ಸಲಹೆಗಳ ಸ್ವೀಕಾರ: ಕೇಶವ ಪ್ರಸಾದ್ ಮೌರ್ಯ

ಪಿಟಿಐ
Published 1 ಏಪ್ರಿಲ್ 2024, 13:06 IST
Last Updated 1 ಏಪ್ರಿಲ್ 2024, 13:06 IST
ಕೇಶವ ಪ್ರಸಾದ್ ಮೌರ್ಯ
ಕೇಶವ ಪ್ರಸಾದ್ ಮೌರ್ಯ   

ನವದೆಹಲಿ: ‘ಲೋಕಸಭಾ ಚುನಾವಣೆಗೆ ಸಂಬಂಧಿಸಿಂತೆ ಬಿಜೆಪಿಯ ಪ್ರಣಾಳಿಕೆ ಸಿದ್ಧತೆಗೆ ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಸುಮಾರು ಮೂರು ಲಕ್ಷ ಸಲಹೆಗಳು ಕಚೇರಿಗೆ ತಲುಪಿವೆ’ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿಯ ಪ್ರಣಾಳಿಕೆ ರಚನಾ ಸಮಿತಿಯ ಕೇಶವ ಪ್ರಸಾದ್ ಮೌರ್ಯ ತಿಳಿಸಿದ್ದಾರೆ.

ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಪ್ರಣಾಳಿಕೆ ಸಿದ್ಧತಾ ಸಮಿತಿಯು ಸ್ವೀಕರಿಸಿರುವ ಎಲ್ಲಾ ಸಲಹೆಗಳನ್ನೂ ಕೂಲಂಕಶವಾಗಿ ಪರಿಶೀಲಿಸಿ, ಅಂತಿಮಗೊಳಿಸಲಾಗುವುದು’ ಎಂದಿದ್ದಾರೆ.

ಬಿಜೆಪಿ ಪ್ರಣಾಳಿಕೆ ಸಿದ್ಧತಾ ಸಮಿತಿಯು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಮೊದಲ ಸಭೆಯನ್ನು ಸೋಮವಾರ ನಡೆಸಿದೆ.

ADVERTISEMENT

‘ಇಂದು ನಡೆದ ಸಭೆಯಲ್ಲಿ ಗಂಭೀರ ಚರ್ಚೆಗಳು ನಡೆದಿವೆ. ಆದರೆ ಅದರ ಮಾಹಿತಿಯನ್ನು ನಾನು ಬಹಿರಂಗಪಡಿಸುವುದಿಲ್ಲ. ಮುಂದಿನ ಐದು ವರ್ಷಗಳಲ್ಲಿ ಸರ್ಕಾರದಿಂದ ಸಾಧ್ಯವಾಗುವುದನ್ನು ಮಾತ್ರ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು. ಜನರು ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದಾರೆ. ನಮ್ಮಿಂದ ಮಾಡಲಾಗದ್ದನ್ನು ನಾವು ಸಾಧ್ಯವಿದೆ ಎಂದೆನ್ನುವುದಿಲ್ಲ’ ಎಂದು ಮೌರ್ಯ ತಿಳಿಸಿದರು.

‘ಪ್ರಣಾಳಿಕೆ ಸಿದ್ಧತೆಯಲ್ಲಿ ಜನರ ಪಾಲುದಾರಿಕೆ ಕುರಿತು ಬಿಜೆಪಿ ಅಭಿಯಾನ ಆಯೋಜಿಸಿತ್ತು. ಯಾವೆಲ್ಲಾ ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಳ್ಳಬೇಕು ಎಂಬುದರ ಕುರಿತು ಮೂರು ಸಾವಿರ ವಿಧಾನಸಭಾ ಕ್ಷೇತ್ರಗಳಿಂದ ಮೂರು ಲಕ್ಷಕ್ಕೂ ಅಧಿಕ ಸಲಹೆಗಳು ಬಂದಿದ್ದವು. ನಮೋ ಆ್ಯಪ್ ಮೂಲಕವೂ ಬಹಳಷ್ಟು ಸಲಹೆಗಳು ಬಂದಿವೆ’ ಎಂದು ಹೇಳಿದ್ದಾರೆ.

‘ಬಿಜೆಪಿಯು ತನ್ನ ವಚನಕ್ಕೆ ಸದಾ ಬದ್ಧವಾಗಿದೆ. ಅದು ಹೀಗೆಯೇ ಮುಂದುವರಿಯಲಿದೆ’ ಎಂದು ಮೌರ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.