ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ
ಪಿಟಿಐ ಚಿತ್ರ
ಶ್ರೀನಗರ: ‘ಇಂಡಿಯಾ’ ಕೂಟದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ತಮಗೆ ಯಾವುದೇ ಆಯ್ಕೆಯನ್ನು ಬಿಡದೇ ಇರುವುದರಿಂದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷವು (ಪಿಡಿಪಿ) ಕಾಶ್ಮೀರದ ಎಲ್ಲ ಮೂರು ಲೋಕಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುವುದಾಗಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಬುಧವಾರ ಹೇಳಿದ್ದಾರೆ.
ಸಂಸದೀಯ ಮಂಡಳಿ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
ಎನ್ಸಿ ಇತ್ತೀಚೆಗೆ ಎಲ್ಲ ಮೂರು ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಘೋಷಣೆ ಮಾಡಿತ್ತು. ಇಂಡಿಯಾ ಕೂಟದ ಸ್ಥಾನ ಹಂಚಿಕೆ ಒಪ್ಪಂದದಂತೆ ಅದು ಕಾಶ್ಮೀರದ ಎರಡು ಸ್ಥಾನಗಳನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟಿದೆ.
‘ರಾಜ್ಯದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಎಲ್ಲ ಪಕ್ಷಗಳೂ ಒಂದಾಗಬೇಕಿರುವುದು ಈ ಗಳಿಗೆಯ ಅಗತ್ಯವಾಗಿತ್ತು. ಫಾರೂಕ್ ಅಬ್ದುಲ್ಲಾ ನಮ್ಮ ಹಿರಿಯ ನಾಯಕರಾಗಿದ್ದರಿಂದ ಸ್ಥಾನ ಹಂಚಿಕೆಯ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಮುಂಬೈನಲ್ಲಿ ನಡೆದ ‘ಇಂಡಿಯಾ’ ಕೂಟದ ಸಭೆಯಲ್ಲಿ ನಾನು ಅವರಿಗೆ ಸೂಚಿಸಿದ್ದೆ. ಪಕ್ಷದ ಹಿತಾಸಕ್ತಿ ಬದಿಗಿಟ್ಟು ಅವರು ನ್ಯಾಯ ಸಲ್ಲಿಸುತ್ತಾರೆಂದು ನಾನು ಭಾವಿಸಿದ್ದೆ‘ ಎಂದು ಹೇಳಿದರು.
‘ಆದರೆ, ಕಾಶ್ಮೀರದ ಮೂರು ಸ್ಥಾನಗಳಲ್ಲಿಯೂ ಸ್ಪರ್ಧಿಸುವ ಏಕಪಕ್ಷೀಯ ನಿರ್ಧಾರವನ್ನು ಅವರು ಕೈಗೊಂಡರು. ಪಿಡಿಪಿಗೆ ಜನಬೆಂಬಲವಿಲ್ಲ ಮತ್ತು ಪಕ್ಷ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಿಲ್ಲ ಎಂದು ಒಮರ್ ಹೇಳುವ ಮೂಲಕ ನಮಗೆ ಅವಮಾನ ಮಾಡಿದ್ದಾರೆ. ನಾವು ಚುನಾವಣೆಗೆ ಸ್ಪರ್ಧಿಸುತ್ತೇವೆ ಮತ್ತು ನಿರ್ಧಾರವನ್ನು ಜನರಿಗೆ ಬಿಡುತ್ತೇವೆ’ ಎಂದು ಮೆಹಬೂಬಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.