ರಾಮನಗರ: ‘ಮೈತ್ರಿ ಬಳಿಕ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ನರೇಂದ್ರ ಮೋದಿ ಗಳಸ್ಯ ಕಂಠಸ್ಯ ಆಗಿದ್ದಾರೆ. ಸಹವಾಸದಿಂದ ದೇವೇಗೌಡರು ಸುಳ್ಳು ಹೇಳುವುದಕ್ಕೆ ಶುರು ಮಾಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಗುರುವಾರ ಇಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
‘ಪ್ರಧಾನಿ ಮೋದಿ ಮತ್ತು ನನ್ನ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಹೇಳುವ ದೇವೇಗೌಡರು ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಲಿ’ ಎಂದು ಸವಾಲು ಹಾಕಿದರು.
‘ಚುನಾವಣೆ ಬಳಿಕ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಮೇಕೆದಾಟು ಯೋಜನೆ ಜಾರಿಗೆ ತರುತ್ತೇವೆ ಎಂದು ಹೇಳುತ್ತಿರುವ ದೇವೇಗೌಡರು ಅಲ್ಲಿಯವರೆಗೆ ಕಾಯದೆ ಮುಂಚೆಯೇ ಅನುಮತಿ ಕೊಡಿಸಲಿ’ ಎಂದರು.
ಕಾವೇರಿ ಜಲಾನಯನ ಪ್ರದೇಶಕ್ಕೆ ಅವರ ಕೊಡುಗೆ ಶೂನ್ಯ. ನುಡಿದಂತೆ ಎಂದಿಗೂ ನಡೆದುಕೊಂಡಿಲ್ಲ. ಈ ವಿಷಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎರಡೂ ಒಂದೇ ಎಂದು ವಾಗ್ದಾಳಿ ನಡೆಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ‘ಪಕ್ಷಾತೀತವಾಗಿ ಮೇಕೆದಾಟು ಪಾದಯಾತ್ರೆ ಕೈಗೊಂಡಾಗ ದೇವೇಗೌಡರು ಬೆಂಬಲ ಕೊಡಲಿಲ್ಲ. ಈಗ, ಕಾವೇರಿ ಜಲಾನಯನ ಪ್ರದೇಶದಲ್ಲಿದ ಮೂರು ಕ್ಷೇತ್ರಗಳಲ್ಲಿ ಅವರ ಕುಟುಂಬದವರೇ ಸ್ಪರ್ಧಿಸಿದ್ದಾರೆ. ರೈತರು ಎಲ್ಲಿ ತಿರಸ್ಕರಿಸುತ್ತಾರೊ ಎಂಬ ಭಯದಿಂದ ಮೇಕೆದಾಟು ಯೋಜನೆಗೆ ಪಕ್ಷಾತೀತ ಹೋರಾಟ ಮಾಡಬೇಕು ಎಂದು ಹೇಳುತ್ತಿದ್ದಾರೆ’ ಎಂದು ಕುಹಕವಾಡಿದರು.
ಸುಳ್ಳೇ ಮೋದಿ ಗ್ಯಾರಂಟಿ. ಒಬ್ಬರು ಸುಳ್ಳು ಹೇಳಿದರೆ ಮತ್ತೊಬ್ಬರು ಕಣ್ಣೀರು ಹಾಕುತ್ತಾರೆ. ಕೆಲಸ ಮಾಡುವ ನಾನು ಬೇಕೋ ಅಥವಾ ಅವರು ಬೇಕೋ ಎಂದು ಜನ ತೀರ್ಮಾನಿಸಲಿ– ಡಿ.ಕೆ. ಸುರೇಶ್ ಕಾಂಗ್ರೆಸ್ ಅಭ್ಯರ್ಥಿ
‘ಸುರೇಶ್ ಬೇಕೋ ವೈಟ್ ಕಾಲರ್ ಡಾಕ್ಟರ್ ಬೇಕೋ?’
‘ಸುರೇಶ್ ಅವರು ಪಂಚಾಯಿತಿ ಸದಸ್ಯನಂತೆ ಕೆಲಸ ಮಾಡಿದ್ದಾರೆ. ಜನರ ನಡುವೆ ನಿಂತು ಕಷ್ಟ–ಸುಖಗಳಿಗೆ ಸ್ಪಂದಿಸುವ ಸುರೇಶ್ ಬೇಕೋ ಅಥವಾ ವೈಟ್ ಕಾಲರ್ ಡಾಕ್ಟರ್ ಮಂಜುನಾಥ್ ಬೇಕೋ ಎಂದು ಕ್ಷೇತ್ರದ ಮತದಾರರು ಈಗಾಗಲೇ ನಿರ್ಧರಿಸಿದ್ದಾರೆ. ಸುರೇಶ್ ಗೆಲುವು ಖಚಿತ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ ‘ದೇವೇಗೌಡರು ಪ್ರಧಾನಿ ಸಿ.ಎಂ ಆಗಿದ್ದರು. ಎಚ್.ಡಿ. ಕುಮಾರಸ್ವಾಮಿ ಎರಡು ಸಲ ಸಿ.ಎಂ ಆಗಿದ್ದರು. ಆದರೂ ಈ ಕ್ಷೇತ್ರದಲ್ಲಿ ಮನೆ ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸಿದ್ದಾರೆ’ ಎಂದು ವ್ಯಂಗ್ಯವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.