ADVERTISEMENT

ದಿಢೀರ್‌ ಬೆಂಗಳೂರಿಗೆ ತೆರಳಿದ ಹಿಟ್ನಾಳ: ಕುತೂಹಲ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2023, 19:31 IST
Last Updated 10 ಏಪ್ರಿಲ್ 2023, 19:31 IST
   

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಸೋಮವಾರ ಪ್ರಚಾರ ಕಾರ್ಯಗಳನ್ನು ಬದಿಗೊತ್ತಿ ದಿಢೀರ್‌ ಬೆಂಗಳೂರಿಗೆ ತೆರಳಿದರು. ರಾಜ್ಯ ರಾಜ್ಯಕಾರಣದಲ್ಲಿ ಮಹತ್ವದ ಬದಲಾವಣೆ ನಡೆಯುತ್ತಿದ್ದು, ಅದರಲ್ಲಿ ಭಾಗವಹಿಸಲು ಹಿಟ್ನಾಳ ತೆರಳಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.

ಹಿಟ್ನಾಳ ಏ. 3ರಂದು ಕ್ಷೇತ್ರ ವ್ಯಾಪ್ತಿಯ ಗುಡಗೇರಿ ಗ್ರಾಮದಿಂದ ಆರಂಭಿಸಿದ್ದ ಪ್ರಚಾರವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದರು. ಏ. 10ರಿಂದ 12ರ ಈ ಮೂರು ದಿನಗಳ ಅವಧಿಯಲ್ಲಿ ಗಿಣಗೇರಾ, ಹಿಟ್ನಾಳ ಹಾಗೂ ಬಂಡಿ ಹರ್ಲಾಪುರ ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅವರ ಪ್ರಚಾರ ಕಾರ್ಯಗಳು ನಿಗದಿಯಾಗಿದ್ದವು.

ಸೋಮವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕರೆ ಮಾಡಿ ಆದಷ್ಟು ಬೇಗನೆ ಬೆಂಗಳೂರಿಗೆ ಬರುವಂತೆ ಸೂಚಿಸಿದರು. ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಿಟ್ನಾಳ ದಿಢೀರನೆ ರಾಜ್ಯ ರಾಜಧಾನಿಗೆ ತೆರಳಿದರು ಎಂದು ಗೊತ್ತಾಗಿದ್ದು, ಅಲ್ಲಿಂದ ಅವರು ದೆಹಲಿಗೆ ಹೋಗುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ADVERTISEMENT

ವಿಧಾನಸಭಾ ಚುನಾವಣೆಗೆ ಬಿಜೆಪಿ ಇನ್ನು ಪಟ್ಟಿ ಪ್ರಕಟಿಸಿಲ್ಲ. ಆದರೆ, ಕೆಲವರಿಗೆ ಟಿಕೆಟ್‌ ಸಿಗುವುದಿಲ್ಲ ಎನ್ನುವುದು ಖಾತ್ರಿಯಾಗಿರುವ ಕಾರಣ ಪ್ರಮುಖ ನಾಯಕರೊಬ್ಬರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲಿದ್ದಾರೆ ಎನ್ನುವ ಮಾಹಿತಿಯಿದೆ. ಅಥಣಿ ಕ್ಷೇತ್ರದಿಂದ ಲಕ್ಷ್ಮಣ ಸವದಿ ಟಿಕೆಟ್‌ ಆಕಾಂಕ್ಷಿಯಾಗಿದ್ದರೂ ಪಕ್ಷದಲ್ಲಿ ಸಕಾರಾತ್ಮಕವಾಗಿ ಸ್ಪಂದನೆ ದೊರೆತಿಲ್ಲ ಎನ್ನಲಾಗಿದೆ. ಅವರು ಕಾಂಗ್ರೆಸ್‌ ಸೇರ್ಪಡೆಯಾಗುವ ಕಾರ್ಯಕ್ರಮಕ್ಕೆ ಹಿಟ್ನಾಳ ತೆರಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.