ADVERTISEMENT

ಕಾವೇರಿ ಉಳಿವಿಗಾಗಿ 10 ಕ್ಷೇತ್ರದಲ್ಲಿ ಎನ್‌ಡಿಎ ಗೆಲ್ಲಲಿ: ಎಚ್‌.ಡಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 14:54 IST
Last Updated 14 ಏಪ್ರಿಲ್ 2024, 14:54 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ಪಾಂಡವಪುರ (ಮಂಡ್ಯ ಜಿಲ್ಲೆ): ‘ಕಾವೇರಿ ನೀರಿನ ಉಳಿವಿಗಾಗಿ ದೆಹಲಿ ಮಟ್ಟದಲ್ಲಿ ದಿಟ್ಟ ಹೋರಾಟ ನೀಡಬೇಕಾದರೆ ಹಳೇ ಮೈಸೂರು ಭಾಗದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ 10 ಎನ್‌ಡಿಎ ಅಭ್ಯರ್ಥಿಗಳು ಗೆಲ್ಲಬೇಕು. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ನ ಶಕ್ತಿ–ದರ್ಪ ಕುಗ್ಗಿಸಲು ನಾವು ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಲ್ಲಬೇಕು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಇಲ್ಲಿ ಭಾನುವಾರ ಕುಮಾರಸ್ವಾಮಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕಾವೇರಿ ನೀರಿಗಾಗಿ ಶಕ್ತಿ ಮೀರಿ ಹೋರಾಟ ನಡೆಸಿದ್ದೇನೆ. ನನ್ನ ಕೊನೆ ಉಸಿರು ಇರುವವರೆಗೂ ಹೋರಾಡಿಯೇ ತೀರುತ್ತೇನೆ. ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದರೆ ಕಾವೇರಿ ಸಮಸ್ಯೆ ನಿವಾರಣೆ ಜೊತೆಗೆ ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ಅನುಕೂಲವಾಗುತ್ತದೆ’ ಎಂದರು.

‘ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಮೇಕೆದಾಟು ಯೋಜನೆಗೆ ಪರಿಹಾರ ದೊರೆಯಲಿದೆ. ರಾಜ್ಯದಿಂದ ಹೆಚ್ಚು ಸೀಟುಗಳನ್ನು ಗೆಲ್ಲಿಸಿ ಅವರ ಕೈ ಬಲಪಡಿಸಬೇಕು’ ಎಂದು ಕೋರಿದರು.

ADVERTISEMENT

ಡಿಕೆಶಿ ವಿರುದ್ಧ ಆರೋಪ: ‘ಕರ್ನಾಟಕದಲ್ಲಿ ನೀರಾವರಿ ಸಚಿವರೊಬ್ಬರಿದ್ದಾರೆ, ಬಹಳ ತಜ್ಞರು. ಅವರೊಬ್ಬ ಜಲಸಂಪನ್ಮೂಲ ಸಚಿವರಷ್ಟೇ ಅಲ್ಲ. ಬಿಡಿಎ, ವಾಟರ್ ಬೋರ್ಡ್‌, ಕಾರ್ಪೊರೇಷನ್ ಸೇರಿದಂತೆ ಎಲ್ಲ ಕಡೆಯೂ ದರ್ಬಾರು ಮಾಡಿ ದೋಚುತ್ತಿದ್ದಾರೆ. ಅವರು ಕೈಯಲ್ಲಿ ತೆಗೆದುಕೊಳ್ಳುವುದಿಲ್ಲ, ಬರೀ ಬಾಚಿಕೊಕೊಳ್ಳುವುದೇ ಆಗಿದೆ. ಬಾಚಿ ಬಾಚಿ ರಾಜಸ್ತಾನ, ಛತ್ತೀಸಗಢಕ್ಕೆ ಕಳುಹಿಸುತ್ತಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.