ರಾಯಚೂರು: ‘ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ದುಡಿಯುತ್ತಿರುವುದು ಬಾಡಿಗೆ ಎತ್ತುಗಳು’ ಎಂದು ನಟರಾದ ದರ್ಶನ್ ಮತ್ತು ಯಶ್ ಅವರನ್ನು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಮೂದಲಿಸಿದರು.
ಮಂಗಳವಾರ ಏರ್ಪಡಿಸಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ರಾಜಕೀಯದಲ್ಲಿ ಸಿನಿಮಾ ನಟರು ಯಶಸ್ಸು ಸಾಧಿಸಿದ ಉದಾಹರಣೆ ಆಂಧ್ರಪ್ರದೇಶದಲ್ಲಿ ಮಾತ್ರ ಸಾಧ್ಯ. ಕರ್ನಾಟಕದಲ್ಲಿ ಅಂಥದ್ದು ನಡೆದಿಲ್ಲ. ನಟ ಎನ್ಟಿಆರ್ ಅವರು ಈ ಹಿಂದೆ ರಾಯಚೂರು, ಸಿಂಧನೂರಿಗೆ ಪ್ರಚಾರಕ್ಕೆ ಬಂದಿರುವಾಗ ಲಕ್ಷಾಂತರ ಜನರು ಸೇರಿದ್ದರು. ಆದರೆ, ಎನ್ಟಿಆರ್ ನೋಡಿಕೊಂಡು ಯಾರೂ ಮತ ಹಾಕಲಿಲ್ಲ. ಶಿವಮೊಗ್ಗ ವಿಧಾನಸಭೆ ಕ್ಷೇತ್ರಕ್ಕೆ ಗೀತಾ ಶಿವರಾಜಕುಮಾರ್ ಸ್ಪರ್ಧಿಸಿದಾಗ ಚಿತ್ರರಂಗದವರು ಪ್ರಚಾರ ನಡೆಸಿದ್ದರು. ಆದರೂ ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ ಎಂದರು.
ರಾಯಚೂರು ವಿಧಾನಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಪೂಜಾಗಾಂಧಿ ಅವರಿಗೂ ಮತಗಳು ಅಷ್ಟೋಂದು ಬರಲಿಲ್ಲ. ಸಿನಿಮಾ ನಟ, ನಟಿಯರನ್ನು ನೋಡುವುದಕ್ಕೆ ಬಂದವರೆಲ್ಲ ಮತ ಹಾಕುವುದಿಲ್ಲ. ನಟಿ ಸುಮಲತಾ ಅವರು ಸಿನಿಮಾ ರಂಗವನ್ನು ಬಿಟ್ಟು ರಾಜಕೀಯ ರಂಗದಲ್ಲಿ ಹೆಸರು ಮಾಡಿಕೊಳ್ಳಲಿ, ಕಾದು ನೋಡೊಣ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.