ADVERTISEMENT

ಡಿ.ಕೆ. ಶಿವಕುಮಾರ್ ನನ್ನ ಪಿಎ ಆಗಿದ್ದರೇ?: ದೇವೇಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 17:04 IST
Last Updated 30 ಏಪ್ರಿಲ್ 2019, 17:04 IST
   

ಬಳ್ಳಾರಿ: ‘ನಾನು ಹೆಚ್ಚು ವಿದ್ಯಾಭ್ಯಾಸ ಮಾಡದೇ ಇರುವುದರಿಂದ ಸಂಸತ್ತಿಗೆ ಹೋಗಲು ಅನರ್ಹ ಎಂದು ಹೇಳಿರುವ ಸಚಿವ ಡಿ.ಕೆ.ಶಿವಕುಮಾರ್ ಎಂದಾದರೂ ನನ್ನ ಆಪ್ತ ಸಹಾಯಕರಾಗಿದ್ದರೇ’ಎಂದು ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ‌ ಅವರು, ‘ಸಂಡೂರಿನಲ್ಲಿ ನಡೆದ‌ ಕಾಂಗ್ರೆಸ್ ಸಮಾವೇಶದಲ್ಲಿ ಶಿವಕುಮಾರ್ ನನ್ನ ವಿದ್ಯಾರ್ಹತೆಯನ್ನು ಪ್ರಶ್ನಿಸಿದ್ದಾರೆ. ಮೂರು ದಶಕಕ್ಕೂ ಹೆಚ್ಚು ಕಾಲ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಿರುವೆ. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷನೂ ಆಗಿದ್ದೆ’ಎಂದರು.

ನಂತರ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಶ್ರೀರಾಮುಲು, ‘ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಬಳಿಕ ಯಾವುದೇ ಯೋಜನೆ ಸರಿಯಾಗಿ ಅನುಷ್ಠಾನಗೊಳ್ಳಲಿಲ್ಲ. ಸಂಸದ ವಿ.ಎಸ್.ಉಗ್ರಪ್ಪ ಜನಪರವಾಗಿ ಕಾರ್ಯನಿರ್ವಹಿಸಲಿಲ್ಲ’ ಎಂದು ದೂರಿದರು.

ADVERTISEMENT

ಮೋದಿ ಆಶೀರ್ವಾದದಿಂದ ಪಕ್ಷ ಜಿಲ್ಲೆಯಲ್ಲಿ ಗೆಲುವು ಸಾಧಿಸಲಿದೆ. ಬಳ್ಳಾರಿಗೆ ಪ್ರಚಾರಕ್ಕೆ ಬರುವಂತೆ ಮೋದಿಯವರಿಗೆ‌ ಮನವಿ ಸಲ್ಲಿಸಲಾಗಿದೆ ಎಂದರು.

ಸಿ.ಎಂ.ಇಬ್ರಾಹಿಂ ಮಿಮಿಕ್ರಿ ಕಲಾವಿದ. ಪಕ್ಷದಲ್ಲಿ ಯಡಿಯೂರಪ್ಪನವರ‌ ಮಾತು ನಡೆಯುತ್ತಿಲ್ಲ ಎಂಬ ಅವರ ಮಾತು ಒಪ್ಪುವಂಥದ್ದಲ್ಲ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.