ADVERTISEMENT

ಸಣ್ಣ ಪಟ್ಟಣದ ಕಥೆ ಜನರಿಗೆ ಇಷ್ಟ: ನಟ ಜಿತೇಂದ್ರ ಕುಮಾರ್

ಪಿಟಿಐ
Published 20 ಜೂನ್ 2020, 11:23 IST
Last Updated 20 ಜೂನ್ 2020, 11:23 IST
‘ಚಮನ್ ಬಹಾರ್’ ಚಿತ್ರದ ದೃಶ್ಯ
‘ಚಮನ್ ಬಹಾರ್’ ಚಿತ್ರದ ದೃಶ್ಯ   

ಮುಂಬೈ: ಸಣ್ಣ ಪಟ್ಟಣಗಳ ಕಥೆಗಳನ್ನು ಆಧರಿಸಿರುವ ಸಿನಿಮಾಗಳು ಈಗಿನ ಸಂದರ್ಭದಲ್ಲಿ ಹೆಚ್ಚು ಜನಪ್ರಿಯ ಆಗುತ್ತಿವೆ ಎಂದು ನಟ ಜಿತೇಂದ್ರ ಕುಮಾರ್ ಹೇಳುತ್ತಾರೆ. ಇಂತಹ ಕಥೆಗಳು ವೀಕ್ಷಕರಿಂದ ಒಳ್ಳೆಯ ಸ್ಪಂದನ ಪಡೆಯುತ್ತವೆ ಎನ್ನುವುದು ಜಿತೇಂದ್ರ ಅವರ ಮಾತು.

‘ಶುಭ್ ಮಂಗಲ್ ಜ್ಯಾದಾ ಸಾವಧಾನ್’ ಚಿತ್ರದಲ್ಲಿ ಆಯುಷ್ಮಾನ್‌ ಖುರಾನಾ ಜೊತೆ ಅಭಿನಯಿಸಿದ ಜಿತೇಂದ್ರ ಅವರು ನಂತರ ಅಮೆಜಾನ್‌ ಪ್ರೈಮ್‌ನ ‘ಪಂಚಾಯತ್’ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಈಗ ಅವರು ನೆಟ್‌ಫ್ಲಿಕ್ಸ್‌ ಸಿನಿಮಾ ‘ಚಮನ್ ಬಹಾರ್‌’ನಲ್ಲಿ ನಟಿಸಿದ್ದಾರೆ.

‘ಪಾತ್ರಗಳನ್ನು ನಿಭಾಯಿಸುವಾಗ ಕಲಾವಿದನಾಗಿ ನನ್ನ ಮೊದಲ ಆದ್ಯತೆಯು, ಆ ಪಾತ್ರಗಳು ವಾಸ್ತವಕ್ಕೆ ಹತ್ತಿರವಾಗಿ ಇರುವಂತೆ ನೋಡಿಕೊಳ್ಳುವುದಾಗಿರುತ್ತದೆ. ಶೂಟಿಂಗ್‌ಗೆ ತೆರಳುವ ಮೊದಲು, ನನಗೆ ನೀಡಿರುವ ಪಾತ್ರವನ್ನು ಅಭಿನಯಿಸಲು ಅಗತ್ಯ ಸಿದ್ಧತೆಗಳನ್ನು ನಡೆಸುತ್ತೇನೆ. ಅದಕ್ಕಾಗಿ ಬಹಳಷ್ಟು ಸಮಯ ಮೀಸಲಿಡುತ್ತೇನೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಚಮನ್ ಬಹಾರ್’ ಚಿತ್ರವು ಬಿಲ್ಲು ಎನ್ನುವ ಪಾನ್‌ ಅಂಗಡಿ ಮಾಲೀಕನ ಕಥೆ. ಇದನ್ನು ವಾಸ್ತವಕ್ಕೆ ಹತ್ತಿರವಾಗಿ ಇರುವಂತೆ ರೂಪಿಸಲಾಗಿದೆ. ಇದರಲ್ಲಿ ಬಿಲ್ಲು, ಒಬ್ಬಳು ಹುಡುಗಿಯೆಡೆಗೆ ಆಕರ್ಷಿತನಾಗಿರುತ್ತಾನೆ. ಆದರೆ, ತನ್ನ ಪ್ರೀತಿಯನ್ನು ನಿವೇದಿಸಿಕೊಳ್ಳುವುದಿರಲಿ, ಆಕೆಯ ಜೊತೆ ಮಾತು ಆರಂಭಿಸಲು ಕೂಡ ಅವನಿಗೆ ಸಾಧ್ಯವಾಗಿರುವುದಿಲ್ಲ.

‘ಸಣ್ಣ ಪಟ್ಟಣಗಳಿಗೆ ಸಂಬಂಧಿಸಿದ ಕಥೆಗಳನ್ನು ವೀಕ್ಷಕರು ಹೆಚ್ಚು ತೀವ್ರವಾಗಿ ತಮ್ಮದಾಗಿಸಿಕೊಳ್ಳುತ್ತಾರೆ. ಅಂತಹ ಕಥೆಗಳಲ್ಲಿ ನಾವು ಪಾತ್ರ ನಿಭಾಯಿಸಿದಾಗ ಭಿನ್ನ ಸಂಸ್ಕೃತಿಗಳ ನಡುವೆ ಸೇತುವೆಯಂತೆ ಕೆಲಸ ಮಾಡಿದಂತೆಯೂ ಆಗುತ್ತದೆ. ಇದೊಂದು ಬಹಳ ವಿಶಿಷ್ಟವಾದ ಅನುಭವ’ ಎಂದು ಅವರು ಹೇಳಿದ್ದಾರೆ.

‘ಚಮನ್ ಬಹಾರ್‌’ ಚಿತ್ರವು ಪ್ರೀತಿಯ ಭಿನ್ನ ರೂಪಗಳ ಮೇಲೆ ಬೆಳಕು ಚೆಲ್ಲುವ, ಮನರಂಜನೆ ನೀಡುವ ಪ್ರೇಮಕಥೆ ಎಂದು ಜಿತೇಂದ್ರ ಬಣ್ಣಿಸಿದ್ದಾರೆ. ಈ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಶುಕ್ರವಾರ ಬಿಡುಗಡೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.