ಬೆಂಗಳೂರು: ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ನಟಿ ರಾಧಿಕಾ ಕುಮಾರಸ್ವಾಮಿ ಅವರು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸಿಸಿಬಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು.
ಡಾಲರ್ಸ್ ಕಾಲೊನಿ ನಿವಾಸದಿಂದ ಸಿಸಿಬಿ ಕಚೇರಿಯತ್ತ ಹೊರಟ ರಾಧಿಕಾ ಅವರು ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ. ಹಲವು ದಾಖಲೆಗಳೊಂದಿಗೆ ಅವರು ಸಿಸಿಬಿ ಕಚೇರಿಗೆ ತೆರಳಿದ್ದಾರೆ.
ಸಿಸಿಬಿ ಪೊಲೀಸ್ ಸಹಾಯಕ ಆಯುಕ್ತ ನಾಗರಾಜ್ ನೇತೃತ್ವದ ತಂಡ ರಾಧಿಕಾ ಅವರನ್ನು ವಿಚಾರಣೆಗೆ ಒಳಪಡಿಸುತ್ತಿದೆ.
ರಾಜಕಾರಣಿಗಳ ಹೆಸರಿನಲ್ಲಿ ಹಲವರಿಗೆ ವಂಚಿಸಿರುವ ಆರೋಪದ ಮೇರೆಗೆ ಸಿಸಿಬಿ ಬಂಧಿಸಿರುವ ಆರೋಪಿ ಯುವರಾಜ್ (ಸ್ವಾಮಿ) ಖಾತೆಯಿಂದ ರಾಧಿಕಾ ಅವರಿಗೆ ಕೋಟಿಗಟ್ಟಲೆ ಹಣ ವರ್ಗಾವಣೆಗೊಂಡಿರುವ ಆರೋಪವಿದೆ. ಆ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ರಾಧಿಕಾ ಸ್ಪಷ್ಟನೆ ನೀಡಿದ್ದರು.
ಯುವರಾಜ್ ಖಾತೆಯಿಂದ ರಾಧಿಕಾ ಅವರಿಗೆ ₹1.25 ಕೋಟಿ ವರ್ಗಾವಣೆಯಾಗಿರುವ ಆರೋಪವಿದೆ. ಆದರೆ, ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದ ರಾಧಿಕಾ, ಐತಿಹಾಸಿಕ ಸಿನಿಮಾ ಮಾಡಲು ಯುವರಾಜ್ ಮುಂಗಡವಾಗಿ ₹15 ಲಕ್ಷ ನೀಡಿದ್ದರು. ಬೇರೆ ನಿರ್ಮಾಪಕರಿಂದ ₹60 ಲಕ್ಷ ಹಾಕಿಸಿದ್ದರು. ಆದರೆ, ಸಿನಿಮಾ ಅಗ್ರಿಮೆಂಟ್ ಆಗಲಿಲ್ಲ. ಇದಕ್ಕೂ ನನ್ನ ಸಹೋದರ ರವಿರಾಜ್ಗೂ ಸಂಬಂಧವಿಲ್ಲ’ ಎಂದು ಮಾಹಿತಿ ನೀಡಿದ್ದರು.
ಹಣ ವರ್ಗಾವಣೆಗೆ ಸಂಬಂಧಿಸಿ ರಾಧಿಕಾ ಅವರ ಸಹೋದರ ರವಿರಾಜ್ ಅವರನ್ನೂ ಸಿಸಿಬಿ ಅಧಿಕಾರಿಗಳು ಕಳೆದ ವಾರ ವಿಚಾರಣೆಗೆ ಒಳಪಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.