ಸಲ್ಮಾನ್ ಖಾನ್
ಮುಂಬೈ: ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, ದಂಪತಿಗಳ ನಡುವೆ ಹೊಂದಾಣಿಕೆ ಕ್ಷೀಣಿಸುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಜೂನ್ 21ರಂದು ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲಿರುವ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನ ಮೂರನೇ ಸೀಸನ್ನ ಮೊದಲ ಅತಿಥಿಯಾಗಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರು ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ. ಕಾರ್ಯಕ್ರಮ ಪ್ರಸಾರವಾಗುವುದಕ್ಕೂ ಮುನ್ನ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
‘ಹಿಂದೆಲ್ಲ ದಂಪತಿಯರು ಪರಸ್ಪರ ತ್ಯಾಗ ಜೀವನ ನಡೆಸುತ್ತಿದ್ದರು. ದಂಪತಿಯ ನಡುವೆ ಸಹಿಷ್ಣುತೆ ಇರುತ್ತಿತ್ತು. ಈಗ ಹಾಗಲ್ಲ.. ರಾತ್ರಿ ಮಲಗುವ ವೇಳೆ ಒಬ್ಬರ ಕಾಲು ತಾಕಿದರೆ, ಜೋರಾಗಿ ಗೊರಕೆ ಹೊಡೆದರೆ ಅದು ವಿಚ್ಛೇದನಕ್ಕೆ ಕಾರಣವಾಗುತ್ತದೆ’ ಎಂದು ಸಲ್ಮಾನ್ ಅಭಿಪ್ರಾಯಪಟ್ಟಿದ್ದಾರೆ.
‘ದಂಪತಿಯ ನಡುವೆ ಮೂಡುವ ಸಣ್ಣ ತಪ್ಪು ತಿಳುವಳಿಕೆಯು ವಿಚ್ಛೇದನಕ್ಕೆ ಕೊಂಡೊಯ್ಯತ್ತದೆ. ಅಷ್ಟೇ ಏಕೆ ವಿಚ್ಛೇದನದ ನಂತರ ಹೆಂಡತಿಯಾದವಳು ಜೀವನಾಂಶದ ರೂಪದಲ್ಲಿ ಗಂಡನ ಸಂಪಾದನೆಯಲ್ಲಿ ಅರ್ಧ ಭಾಗವನ್ನು ತೆಗೆದುಕೊಂಡು ಹೋಗುತ್ತಾಳೆ’ ಎಂದು ಲೇವಡಿ ಮಾಡಿದ್ದಾರೆ.
ಸಲ್ಮಾನ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದೆ. ಜೀವನಾಂಶದ ಬಗ್ಗೆ ನಟ ಅಭಿಪ್ರಾಯಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದರೆ, ಇನ್ನು ಕೆಲವರು ಯುಜುವೇಂದ್ರ ಚಾಹಲ್ ಮತ್ತು ಹಾರ್ದಿಕ್ ಪಾಂಡ್ಯ ಉದಾಹರಣೆಯನ್ನು ಮುಂದಿಟ್ಟು ಸಲ್ಮಾನ್ ಹೇಳಿಕೆಯನ್ನು ಸಮರ್ಥಿಸಿದ್ದಾರೆ.
ಸಲ್ಮಾನ್ ಖಾನ್, ರಶ್ಮಿಕಾ ನಟನೆಯ ‘ಸಿಕಂದರ್’ ಇತ್ತೀಚೆಗೆ ಬಿಡುಗಡೆಯಾಗಿದ್ದು, ಅಪೂರ್ವ ಲಖಿಯಾ ನಿರ್ದೇಶನದ ಮುಂದಿನ ಚಿತ್ರದಲ್ಲಿ ಸಲ್ಮಾನ್ ಅಭಿನಯಿಸಲಿದ್ದಾರೆ.
59 ವರ್ಷ ವಯಸ್ಸಿನ ಸಲ್ಮಾನ್ ಖಾನ್ ಅವಿವಾಹಿತರಾಗಿಯೇ ಉಳಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.