
ನಟ ವರುಣ್ ಧವನ್
ಚಿತ್ರ ಕೃಪೆ: Instagram/@varundvn
‘ಬಾರ್ಡರ್ 2’ ಸಿನಿಮಾ ಬಿಡುಗಡೆಗೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ನನ್ನ ಪಾತ್ರವನ್ನು ಟ್ರೋಲ್ ಮಾಡುತ್ತಿದ್ದಾಗ ಸಲ್ಮಾನ್ ಖಾನ್ ಅವರು ಕರೆ ಮಾಡಿ ನನಗೆ ಬೆಂಬಲ ನೀಡಿದ್ದರು‘ ಎಂದು ಬಾಲಿವುಡ್ ನಟ ವರುಣ್ ಧವನ್ ಹೇಳಿಕೊಂಡಿದ್ದಾರೆ.
ಬಾರ್ಡರ್ 2 ಸಿನಿಮಾದ ‘ಘರ್ ಕಬ್ ಆವೋಗೆ’ ಹಾಡಿನಲ್ಲಿ ವರುಣ್ ಅವರ ನಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ಅವರ ನಟನೆಯನ್ನು ಪ್ರಶ್ನಿಸಿದ್ದರು. ವರುಣ್ ಸೈನಿಕ ಪಾತ್ರಕ್ಕೆ ಸರಿಹೊಂದುವುದಿಲ್ಲ ಎಂದು ಟೀಕಿಸಿದ್ದರು.
ಜನವರಿ 23 ರಂದು ಬಿಡುಗಡೆಯಾದ ಬಾರ್ಡರ್ 2 ಸಿನಿಮಾ ಬ್ಲಾಕ್ಬಸ್ಟರ್ ಆಗಿದ್ದು ₹500 ಕೋಟಿ ಗಳಿಕೆಯ ಸಮೀಪದಲ್ಲಿದೆ.
‘ಬಾರ್ಡರ್ 2’ ಬಿಡುಗಡೆಯಾದ ನಂತರ ಸಲ್ಮಾನ್ ಖಾನ್ ಅವರು ನನಗೆ ಕರೆ ಮಾಡಿದ್ದರು. ಅವರು ಕರೆಯಲ್ಲಿ ನನಗೆ ಸಾಕಷ್ಟು ವಿಷಯಗಳನ್ನು ಹೇಳಿದ್ದರು’ ಎಂದು ವರುಣ್ ಧವನ್ ಹೇಳಿಕೊಂಡಿದ್ದಾರೆ.
‘ನಿಮ್ಮೆಲ್ಲರ ಬಗ್ಗೆ ನನಗೆ ತುಂಬಾ ಸಂತೋಷವಿದೆ ಎಂದು ಹೇಳಿದ ಸಲ್ಮಾನ್ ಖಾನ್ ಅವರ ಮಾತು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಯಿತು. ರಾತ್ರಿ 2 ಗಂಟೆಯವರೆಗೂ ಮಾತನಾಡುತ್ತಿದ್ದೆವು. ಅವರ ಮಾತಿನಿಂದ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಯಿತು’ ಎಂದು ಹೇಳಿಕೊಂಡಿದ್ದಾರೆ.
‘ಟ್ರೋಲಿಂಗ್ ಇಂದು ಫ್ಯಾಷನ್ ಆಗಿ ಮಾರ್ಪಟ್ಟಿದೆ. ಕೆಲವರು ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳತ್ತಾರೆ. ನಾನು ಅದನ್ನು ಎಂದಿಗೂ ಗಂಭೀರವಾಗಿ ಪರಿಗಣಿಸಲಿಲ್ಲ. ನನಗೆ ನನ್ನ ಕುಟುಂಬದ ಬೆಂಬಲವಿತ್ತು. ಹಾಗಾಗಿ ನಾನು ಇದಕ್ಕೆಲ್ಲ ಹೆಚ್ಚು ತಲೆಕೆಡಿಸಿಕೊಂಡಿಲ್ಲ’ ಎಂದು ವರುಣ್ ಹೇಳಿದ್ದಾರೆ.
‘ಸಾಮಾಜಿಕ ಮಾಧ್ಯಮದಲ್ಲಿ ನಡೆಯುವ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಟ್ರೋಲಿಂಗ್ ಯಾಕೆ ಮಾಡುತ್ತಾರೆ? ಎಂಬುದು ನನಗೆ ಇಂದಿಗೂ ಅರ್ಥವಾಗಿಲ್ಲ. ಸಾಮಾಜಿಕ ಮಾಧ್ಯಮವನ್ನು ಬಳಸಿ. ಆದರೆ ಅದರ ಬಗ್ಗೆ ಎಂದಿಗೂ ಗಂಭೀರವಾಗಿ ಯೋಚಿಸಬೇಡಿ. ನೀವು ಯಾರು, ಏನು ಎಂಬುದು ನಿಮಗೆ ತಿಳಿದಿದೆ. ಪ್ರೇಕ್ಷಕರು ನಿಮ್ಮ ಸಿನಿಮಾಗಳನ್ನು ಇಷ್ಟಪಡುತ್ತಾರೆ ಹಾಗೂ ಟ್ರೋಲ್ ಕೂಡ ಮಾಡುತ್ತಾರೆ. ಅವರು ಯಾರ ಬಗ್ಗೆಯೂ ಒಳ್ಳೆಯದನ್ನು ಹೇಳಲು ಇಷ್ಟ ಪಡುವುದಿಲ್ಲ’ ಎಂದಿದ್ದಾರೆ.
‘ಬಾರ್ಡರ್ 2 ಸಿನಿಮಾದಲ್ಲಿ ಸೈನಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದರಿಂದ ನನ್ನೊಳಗೆ ಖಂಡಿತವಾಗಿಯೂ ಸಾಕಷ್ಟು ಆತ್ಮವಿಶ್ವಾಸ ಬೆಳೆದಿದೆ. ಬಾರ್ಡರ್ನಂತಹ ದೊಡ್ಡ ಚಿತ್ರದ ಭಾಗವಾಗಿರುವುದು ನಿಜಕ್ಕೂ ಖುಷಿ ಇದೆ’ ಎಂದು ವರುಣ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.