ADVERTISEMENT

ಸುಶಾಂತ್‌ ನಿಧನಕ್ಕೆ ಒಂದು ವರ್ಷ; ಸಾಮಾಜಿಕ ಮಾಧ್ಯಮಗಳಿಂದ ʼವಿರಾಮʼ ಪಡೆದ ಅಂಕಿತಾ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 17:24 IST
Last Updated 3 ಜೂನ್ 2021, 17:24 IST
ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌
ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌   

ಮುಂಬೈ: ಬಾಲಿವುಡ್‌ ನಟಿ ಅಂಕಿತಾ ಲೋಖಂಡೆ ಅವರು ಸಾಮಾಜಿಕ ಮಾಧ್ಯಮಗಳಿಂದ ಕೆಲ ಸಮಯ ವಿರಾಮ ಪಡೆಯುವುದಾಗಿ ಇನ್‌ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ.

ʼಇದು ವಿದಾಯವಲ್ಲ. ಮತ್ತೆ ಸಿಗೋಣʼ ಎಂದು ಅವರು ಪ್ರಕಟಿಸಿದ್ದಾರೆ. ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ (ಎಸ್‌ಎಸ್‌ಆರ್‌) ಅವರು ಮೃತಪಟ್ಟು ಒಂದು ವರ್ಷ ಆಗುವುದಕ್ಕೆ ಕೆಲವೇ ದಿನಗಳಿರುವಾಗ ಅಂಕಿತಾ ಈ ರೀತಿ ಪೋಸ್ಟ್‌ ಮಾಡಿರುವುದು ವಿಶೇಷ.

ಈ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಶಾಂತ್‌ಅವರ ಮೊದಲ ವರ್ಷದ ಪುಣ್ಯ ಸ್ಮರಣೆಗೆ ಕೆಲ ದಿನಗಳಿರುವಾಗಲೇ ಸಾಮಾಜಿಕ ಮಾಧ್ಯಮಗಳಿಂದ ʼವಿರಾಮʼ ಪಡೆಯುತ್ತಿರುವುದಾಗಿ ಅಂಕಿತಾ ತಿಳಿಸಿರುವುದಕ್ಕೆ ಕೆಲವರು ಕಿಡಿಕಾರಿದ್ದಾರೆ.

ADVERTISEMENT
ಅಂಕಿತಾ ಲೋಖಂಡೆ ಇನ್‌ಸ್ಟಾಗ್ರಾಂ ಪೋಸ್ಟ್‌

ʼಸಹಾನುಭೂತಿ ಗಿಟ್ಟಿಸಿಕೊಳ್ಳಲು ನೀವಿದನ್ನು ಮಾಡುತ್ತಿದ್ದೀರಿ. ನೀವು ಒಳ್ಳೇ ನಟಿ. ನೀವು ಎಸ್‌ಎಸ್‌ಆರ್‌ ನಿಧನದ ಲಾಭ ಪಡೆದುಕೊಂಡಿರಿʼ ಎಂದು ಪ್ರತಿಕ್ರಿಯಿಸಿದ್ದಾರೆ.

ʼಸುಶಾಂತ್‌ ಮೃತ ವರ್ಷಾಚರಣೆ ಹೊತ್ತಿನಲ್ಲಿ ಈ ಪೋಸ್ಟ್‌ ಮಾಡುವ ಅಗತ್ಯವೇನಿತ್ತು. ಇದು ವಿಚಿತ್ರʼ ಎಂದು ಇನ್ನೊಬ್ಬರು ಟೀಕಿಸಿದ್ದಾರೆ.

ಏತನ್ಮಧ್ಯೆ, ಹಲವರು ಅಂಕಿತಾಗೆ ಬೆಂಬಲ ಸೂಚಿಸಿದ್ದಾರೆ. ʼಮೇಡಂ, ನೀವು ನಿಜವಾಗಿಯೂ ಈ ವಿರಾಮಕ್ಕೆ ಅರ್ಹರು. ದಯವಿಟ್ಟು ದ್ವೇಷದ ಪ್ರತಿಕ್ರಿಯೆಗಳನ್ನು ನಿರ್ಲಕ್ಷಿಸಿʼ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು ʼಪ್ರೀತಿ ಮತ್ತು ಆಶೀರ್ವಾದ ನಿಮಗಿದೆ. ಸುರಕ್ಷಿತವಾಗಿರಿʼ ಎಂದು ಪ್ರತಿಕ್ರಿಯಿಸಿದ್ದಾರೆ.

ಅಂಕಿತಾ ಮತ್ತು ಸುಶಾಂತ್‌ 2016ರಲ್ಲಿ ಬೇರೆಯಾಗುವ ಮೊದಲು, ಆರು ವರ್ಷಗಳ ಕಾಲ ಡೇಟಿಂಗ್‌ ನಡೆಸುತ್ತಿದ್ದರು. ʼಪವಿತ್ರ ರಿಷ್ತಾʼ ಸಿನಿಮಾ ಶೂಟಿಂಗ್‌ ವೇಳೆ ಮೊದಲ ಸಲ ಭೇಟಿಯಾಗಿದ್ದರು. ಅಂಕಿತಾ ಈ ವಿಚಾರವನ್ನೂ ಕೆಲವು ದಿನಗಳ ಹಿಂದೆ ಹಂಚಿಕೊಂಡಿದ್ದರು.

ಸುಶಾಂತ್‌ 2020ರ ಜೂನ್‌ 14ರಂದು ಮೃತಪಟ್ಟಿದ್ದರು. ಅವರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಪ್ರಾಥಮಿಕ ತನಿಖೆ ನಡೆಸಿದ್ದ ಮುಂಬೈ ಪೊಲೀಸರು ಸುಶಾಂತ್‌ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದರು. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.