ADVERTISEMENT

ಆಸ್ಟ್ರೀಯಾ ಸಿನಿಮೋತ್ಸವಕ್ಕೆ ಹೊರಟ ‘ಅಮೃತಮತಿ’

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 12:11 IST
Last Updated 26 ಜೂನ್ 2020, 12:11 IST
ಅಮೃತಮತಿ ಸಿನಿಮಾದ ದೃಶ್ಯ
ಅಮೃತಮತಿ ಸಿನಿಮಾದ ದೃಶ್ಯ   

ಬರಗೂರು ರಾಮಚಂದ್ರಪ್ಪ ನಿರ್ದೇಶನದ‘ಅಮೃತಮತಿ’ ಚಿತ್ರವು ಆಸ್ಟ್ರೀಯಾ ದೇಶದ ಅಂತರರಾಷ್ಟ್ರೀಯಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ವಿಶ್ವದಾದ್ಯಂತ ಕೊರೊನಾ ಸಂಕಷ್ಟ ಇರುವುದರಿಂದ ಇದೇ ಮೊದಲ ಬಾರಿಗೆ ಚಲನಚಿತ್ರೋತ್ಸವವನ್ನು ಆನ್‌ಲೈನ್‌ ಸ್ಕ್ರೀನಿಂಗ್‌ ಮೂಲಕ ಆಯೋಜಿಸಲಾಗಿದ್ದು, ಜುಲೈ 22ರಿಂದ ಆಗಸ್ಟ್‌ 5ರವರೆಗೆ ಈ ಚಿತ್ರೋತ್ಸವ ನಡೆಯಲಿದೆ.

ಆನ್‌ಲೈನ್‌ ಸ್ಕ್ರೀನಿಂಗ್‌ ಮಾಡಲಾದ ಚಿತ್ರಗಳು ಸ್ಪರ್ಧಾ ಕಣದಲ್ಲಿದ್ದು,‘ಅಮೃತಮತಿ’ ಚಿತ್ರವು ಸ್ಪರ್ಧಾಕಣಕ್ಕೂ ಆಯ್ಕೆಯಾಗಿದೆ ಎಂದು ಚಿತ್ರದ ನಿರ್ದೇಶಕ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

ADVERTISEMENT

13ನೇ ಶತಮಾನದ ಕನ್ನಡ ಕವಿ ಜನ್ನನಿಂದ ರಚಿತವಾದ ‘ಯಶೋಧರ ಚರಿತೆ’ ಕಾವ್ಯವನ್ನು ಆಧರಿಸಿದೆ. ಈ ಕಾವ್ಯದಲ್ಲಿ ಬರುವಅಮೃತಮತಿಪ್ರಸಂಗವನ್ನು ನಿರ್ದೇಶಕ ಬರಗೂರು ರಾಮಚಂದ್ರಪ್ಪ ಮರುಸೃಷ್ಟಿಸಿ ಮತ್ತು ಮರು ವ್ಯಾಖ್ಯಾನಕ್ಕೆ ಒಳಪಡಿಸಿದ್ದಾರೆ. ಜತೆಗೆ ಚಿತ್ರಕಥೆ, ಸಂಭಾಷಣೆ ಹೊಸೆಯುವ ಜತೆಗೆ ಎರಡು ಗೀತೆಗಳನ್ನು ರಚಿಸಿದ್ದಾರೆ.

ಈ ಚಿತ್ರ ನೋಯ್ಡಾದ ನಾಲ್ಕನೇ ಭಾರತೀಯ ವಿಶ್ವ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು.

ಅಮೃತಮತಿಪಾತ್ರದಲ್ಲಿ ಬಹುಭಾಷಾ ನಟಿ ಹರಿಪ್ರಿಯ ಮತ್ತು ಯಶೋಧರನ ಪಾತ್ರದಲ್ಲಿ ನಟ ಕಿಶೋರ್‌ ಹಾಗೂ ಅಷ್ಟಾವಂಕನಾಗಿ ತಿಲಕ್‌ ನಟಿಸಿದ್ದಾರೆ. ತಾರಾಗಣದಲ್ಲಿ ಹಿರಿಯ ನಟ ಸುಂದರ್‌ ರಾಜ್‌, ಪ್ರಮೀಳಾ ಜೋಷಾಯ್‌, ಸುಪ್ರಿಯಾ ರಾವ್‌, ವತ್ಸಲಾ ಮೋಹನ್‌, ಅಂಬರೀಶ್‌ ಸಾರಂಗಿ, ಭೂಮಿಕಾ ಲಕ್ಷ್ಮಿನಾರಾಯಣ ಇದ್ದಾರೆ.

ಇಂಚರ ಪುಟ್ಟಣ್ಣ ಪ್ರೊಡಕ್ಷನ್‌ ಸಂಸ್ಥೆಯಡಿವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ನಾಗರಾಜು ಆದವಾನಿ, ಸಂಗೀತ ನಿರ್ದೇಶನ ಶಮಿತಾ ಮಲ್ನಾಡ್‌, ಸಂಕಲನ ಸುರೇಶ್‌ ಅರಸು ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.