ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕಿತ್ತಾಟ ನಡೆಯುತ್ತಿರುವ ನಡುವೆ, ನಟ ಅನಿಲ್ ಕಪೂರ್ಗೆ ಮುಖ್ಯಮಂತ್ರಿಯಾಗಿ ಎಂಬ ಒತ್ತಾಯ ಶುರುವಾಗಿದೆ.
ಬಿಜೆಪಿ ಮತ್ತು ಶಿವಸೇನೆ ನಡುವೆ ಮುಖ್ಯಮಂತ್ರಿ ಕುರ್ಚಿಗಾಗಿ ಹಗ್ಗಜಗ್ಗಾಟ ನಡೆಯುತ್ತಿದೆ. ಇದು ಮುಗಿಯುವವರೆಗೂ ನಟ ಅನಿಲ್ ಕಪೂರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ. ನಾಯಕ್ ಸಿನಿಮಾದಲ್ಲಿ ಒಂದು ದಿನ ಮುಖ್ಯಮಂತ್ರಿಯಾಗಿದ್ದನ್ನು ದೇಶವೇ ಒಪ್ಪಿದೆ ಎಂದು ವಿಜಯ್ ಗುಪ್ತ ಎನ್ನುವವರು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಅನೇಕರು ಸಮ್ಮತಿ ಸೂಚಿಸಿದ್ದು, ಸರಿಯಾದ ಮಾತನ್ನೇ ಹೇಳಿದ್ದೀರಿ ಎಂದು ಕಮೆಂಟ್ಗಳನ್ನು ಮಾಡಿದ್ದಾರೆ. ಇದನ್ನು ರೀಟ್ವೀಟ್ ಮಾಡಿಕೊಂಡು ಸಖತ್ ಪಂಚ್ ನೀಡಿರುವ ಅನಿಲ್ ಕಪೂರ್, ‘ನಾನು ಉತ್ತಮ ನಾಯಕ’ ಎಂದು ಹೇಳಿದ್ದಾರೆ.
2001ರಲ್ಲಿ ನಾಯಕ್ ಸಿನಿಮಾದಲ್ಲಿ ಅನಿಲ್ ಕಪೂರ್ ಒಂದು ದಿನ ಮಟ್ಟಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ರಾಣಿ ಮುಖರ್ಜಿ, ಅಮರೀಶ್ ಪುರಿ ಅಭಿನಯಿಸಿದ್ದಾರೆ. ಎಸ್.ಶಂಕರ್ ಇದನ್ನು ನಿರ್ದೇಶಿಸಿದ್ದರು. ಟೆಲಿವಿಷನ್ ವರದಿಗಾರ ಪಾತ್ರವನ್ನು ಅನಿಲ್ ಕಪೂರ್ ಇದರಲ್ಲಿ ನಿರ್ವಹಿಸಿದ್ದಾರೆ. ಒಂದು ದಿನ ಮುಖ್ಯಮಂತ್ರಿ ಪದವಿಯನ್ನು ನನಗೆ ನೀಡಿ ಎಂದು ಅನಿಲ್ ಸವಾಲು ಹಾಕುತ್ತಾರೆ. ಇದರಿಂದ ಒಂದು ದಿನಮಟ್ಟಿಗೆ ಅವರು ಸಿ.ಎಂ ಆಗುತ್ತಾರೆ.
ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿಗೆ ಬಹುಮತ ದೊರೆತಿದ್ದು, ಮುಖ್ಯಮಂತ್ರಿ ನೇಮಕದ ಕಸರತ್ತು ನಡೆಯುತ್ತಿದೆ. ಬಿಜೆಪಿ ಈ ಹಿಂದಿನ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ಗೆ ಆ ಸ್ಥಾನವನ್ನು ನೀಡಿದೆ. ಆದರೆ, ಶಿವಸೇನೆ ಎರಡುವರೆ ವರ್ಷ ನಮ್ಮವರಿಗೆ ಸಿ.ಎಂ ಸ್ಥಾನ ಬಿಟ್ಟುಕೊಡಬೇಕು ಎಂಬ ಬೇಡಿಕೆಯನ್ನು ಇಟ್ಟಿದೆ. ಇದರಿಂದ ಮುಖ್ಯಮಂತ್ರಿ ನೇಮಕಕ್ಕೆ ಬಿಕ್ಕಟು ಉಂಟಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.