ಅದು ‘ಏಪ್ರಿಲ್’ ಚಿತ್ರದ ಮುಹೂರ್ತ ಕಾರ್ಯಕ್ರಮ. ನಟ ಚಿರಂಜೀವಿ ಸರ್ಜಾ ಉತ್ಸಾಹದಿಂದ ಮಾತುಕತೆಯಲ್ಲಿ ತೊಡಗಿದ್ದರು. ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಡುತ್ತಿರುವ ಸತ್ಯ ರಾಯಲ ಅವರ ಮುಖದಲ್ಲಿ ಕೊಂಚ ದುಗುಡ ಇಣುಕಿತ್ತು. ಮುಹೂರ್ತದ ಸ್ಥಳದಲ್ಲಿದ್ದ ಪೋಸ್ಟರ್ವೊಂದು ನೋಡುಗರ ಚಿತ್ತ ಸೆಳೆಯಿತು.
ಪೋಸ್ಟರ್ನಲ್ಲಿದ್ದ ಚಿರು ಅವರ ಕಣ್ಣುಗಳಲ್ಲಿ ರೋಷವಿತ್ತು. ಅವರ ಕೈಯಲ್ಲಿ ಹಿಡಿದಿದ್ದ ಚಿತ್ರದಲ್ಲಿ ನಟಿ ರಚಿತಾ ರಾಮ್ ಕಾಣೆಯಾಗಿದ್ದರು. ರಚಿತಾ ಹಿಡಿದಿದ್ದ ಚಿತ್ರದಲ್ಲಿ ಬಾಲಕಿ ನಾಪತ್ತೆ ಎಂದು ಬರೆದಿತ್ತು. ಅವರ ಕಣ್ಣುಗಳಲ್ಲಿ ಆತಂಕ ಮಡುಗಟ್ಟಿತ್ತು!
ಎಲ್ಲರಲ್ಲೂ ಈ ವಿಚಿತ್ರ ಪೋಸ್ಟರ್ ಕುತೂಹಲ ಕೆರಳಿಸಿತ್ತು. ಅದನ್ನು ತಣಿಸಲು ನಿರ್ದೇಶಕ ಸತ್ಯ ರಾಯಲ ಚಿತ್ರತಂಡದೊಟ್ಟಿಗೆ ಮಾತಿಗೆ ಕುಳಿತರು. ‘ಆ್ಯಕ್ಷನ್, ಥ್ರಿಲ್ಲರ್ ಕಥೆ ಇದು. ಟೈಟಲ್ ಪಾತ್ರದ ಹೆಸರಷ್ಟೇ. ಅದು ತಿಂಗಳಲ್ಲ’ ಎಂದು ಸ್ಪಷ್ಟಪಡಿಸಿದರು.
ಕಥೆ, ಚಿತ್ರಕಥೆಯ ಜವಾಬ್ದಾರಿಯನ್ನು ಅವರೇ ನಿಭಾಯಿಸಿದ್ದಾರೆ. ‘ಚಿತ್ರಕ್ಕೆ ಏಪ್ರಿಲ್ ಶೀರ್ಷಿಕೆ ಇಡಲಾಗಿದೆ. ಇದೇ ಇದರ ಕುತೂಹಲಕಾರಿ ಅಂಶ. ನಾಯಕನ ಮೂಲಕ ಅದನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದೇನೆ. ಕೊನೆಗೆ, ಅದಕ್ಕೊಂದು ಸಮರ್ಥನೆಯೂ ಸಿಗಲಿದೆ. ಒಂದು ಭಾಗದಲ್ಲಿ ಅವಳಿಗಾಗಿ ಹುಡುಕಾಟ ನಡೆಸುವುದೇ ಅಧಿಕಾರಿಯ ಕಾಯಕ. ಮತ್ತೊಂದು ಭಾಗದಲ್ಲಿ ಅವಳದು ಮಗಳಿಗಾಗಿ ಪರಿತಾಪ’ ಎಂದು ವಿವರಿಸಿದರು.
‘ನಾನು ಇಲ್ಲಿಯವರೆಗೂ ಮಾಡಿರದಂತಹ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ’ ಎಂದು ಹೇಳಿಕೊಂಡರು ಚಿರಂಜೀವಿ ಸರ್ಜಾ.
ನಾಲ್ಕು ಹಾಡುಗಳಿಗೆ ಸಚಿನ್ ಬಸ್ರೂರು ಸಂಗೀತ ನೀಡಿದ್ದಾರೆ. ಗಿರೀಶ್ ಆರ್. ಗೌಡ ಅವರ ಛಾಯಾಗ್ರಹಣವಿದೆ. ಸಂಕಲನ ಪ್ರತೀಕ್ ಶೆಟ್ಟಿ ಅವರದು. ಹರೀಶ್ ಸಂಭಾಷಣೆ ಬರೆದಿದ್ದಾರೆ. ನಾರಾಯಣಬಾಬು ಬಂಡವಾಳ ಹೂಡಿದ್ದಾರೆ. ಬೆಂಗಳೂರಿನ ಧರ್ಮಗಿರಿ ಮಂಜುನಾಥಸ್ವಾಮಿ ದೇಗುಲದಲ್ಲಿ ಮುಹೂರ್ತ ನೆರವೇರಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.