ADVERTISEMENT

ಡಿ. 27ಕ್ಕೆ ಬಿಡುಗಡೆ: ಅವನೇ ಶ್ರೀಮನ್ನಾರಾಯಣ ನೋಡಲು ಆನ್‌ಲೈನ್‌ ಬುಕ್ಕಿಂಗ್‌ ಶುರು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 10:25 IST
Last Updated 23 ಡಿಸೆಂಬರ್ 2019, 10:25 IST
   

ರಕ್ಷಿತ್‌ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಪ್ಯಾನ್‌ ಇಂಡಿಯಾ ಸಿನಿಮಾಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಇದೇ 27ರಂದು ಚಿತ್ರವು ರಾಜ್ಯದಲ್ಲಿ ಬಿಡುಗಡೆಯಾಗುತ್ತಿದೆ.

ಚಿತ್ರದ ಟಿಕೆಟ್‌ ಕಾಯ್ದಿರಿಸಲುಆನ್‌ಲೈನ್‌ ಬುಕ್ಕಿಂಗ್‌ ಶುರುವಾಗಿದೆ. ಮೂರು ದಿನಗಳ ಮೊದಲು ಆನ್‌ಲೈನ್‌ ಬುಕ್ಕಿಂಗ್‌ ಶುರುವಾಗುವುದು ಸಾಮಾನ್ಯ. ಆದರೆ, ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಹವಾ ಕಾವೇರುತ್ತಿರುವುದರಿಂದ ಆನ್‌ಲೈನ್‌ ಬುಕ್ಕಿಂಗ್‌ ಒಂದು ವಾರ ಮುಂಚಿತವಾಗಿಯೇ ಆರಂಭವಾಗಿದೆ. ಬೆಂಗಳೂರಿನ ಊರ್ವಶಿ ಹಾಗೂ ಕಾವೇರಿ ಚಿತ್ರಮಂದಿರಗಳಲ್ಲಿ ಈಗಾಗಲೇ ಮೊದಲ ದಿನದ ಎಲ್ಲಾ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿರುವ ಸುದ್ದಿಯೂ ಇದೆ.

ಐದು ಭಾಷೆಗಳಲ್ಲಿ ನಿರ್ಮಿಸಿರುವ ಈ ಚಿತ್ರವನ್ನು ಒಂದೇ ದಿನ ಎಲ್ಲಾ ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಆರಂಭದಲ್ಲಿ ನಿರ್ಧರಿಸಿತ್ತು. ಆದರೆ, ಈಗ ನಿರ್ಧಾರ ಬದಲಿಸಿದೆ. ಕನ್ನಡದಲ್ಲಿ 27ರಂದು ಬಿಡುಗಡೆ ಮಾಡಿದರೆ,‌ ತೆಲುಗಿನಲ್ಲಿ ಜನವರಿ 1, ತಮಿಳು ಹಾಗೂ ಮಲಯಾಳದಲ್ಲಿ ಜನವರಿ 3 ಹಾಗೂ ಹಿಂದಿಯಲ್ಲಿ ಜ.17ರಂದು ಬಿಡುಗಡೆ ಮಾಡಲಾಗುತ್ತಿದೆ.

ADVERTISEMENT

ಚಿತ್ರದ ಟ್ರೇಲರ್‌ ದೊಡ್ಡ ಮಟ್ಟದಲ್ಲಿ ಹಿಟ್‌ ಆದ ಬೆನ್ನಲ್ಲೇ, ‘ಹ್ಯಾಂಡ್ಸಾಪ್‌’ ಹಾಡು ವೈರಲ್‌ ಆಗಿದೆ. ಹ್ಯಾಂಡ್ಸಾಪ್‌ ಚಾಲೆಂಜ್‌ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.ಆ ಹಾಡಿನಲ್ಲಿ ರಕ್ಷಿತ್‌ ಶೆಟ್ಟಿ ಹಾಕಿರುವ ಸ್ಟೆಪ್‌ ಅನ್ನು ಅನುಕರಿಸಿ ನಟ– ನಟಿಯರು, ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ.ಹ್ಯಾಂಡ್ಸಾಪ್‌ ಚಾಲೆಂಜ್‌ಗೆ ನಟಿ ಸಂಯುಕ್ತ ಹೆಗ್ಡೆ ಹಾಕಿರುವ ಸ್ಟೆಪ್‌ ಕೂಡ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಸಚಿನ್‌ ರವಿ ನಿರ್ದೇಶನದ ‘ಅವನೇಶ್ರೀಮನ್ನಾರಾಯಣ’ ಚಿತ್ರದ ಮೂಲಕ ರಕ್ಷಿತ್‌ ಶೆಟ್ಟಿ ದೊಡ್ಡ ಗ್ಯಾಪ್‌ನ ಬಳಿಕ ಪರದೆ ಮೇಲೆ ನಾರಾಯಣನ ಅವತಾರ ಎತ್ತಿದ್ದಾರೆ. ಅಂದಹಾಗೆ ಈ ನಾರಾಯಣ ‘ಕಿರಿಕ್‌ ಪಾರ್ಟಿ’ಯ ಕರ್ಣನಷ್ಟು ಮುಗ್ಧನಲ್ಲ. ಬಹಳ ಚಾಲಾಕಿಯಂತೆ! ಇದೊಂದು ಫ್ಯಾಂಟಸಿ ಸಿನಿಮಾ. ಎರಡು ಸಾವಿರ ದೃಶ್ಯಗಳನ್ನು ವಿಎಫ್ಎಕ್ಸ್‌ ಬಳಸಿ ಸಿದ್ಧಪಡಿಸಿರುವುದು ಇದರ ಮತ್ತೊಂದು ವಿಶೇಷ. ಬರೋಬ್ಬರಿ 200 ದಿನಗಳ ಕಾಲ ಚಿತ್ರದ ಶೂಟಿಂಗ್‌ ನಡೆಸಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಹೊಸ ದಾಖಲೆ. ಮೂವತ್ತು ವರ್ಷದ ಹಿಂದೆ ನಡೆದ ಕಥೆಯನ್ನು ಆ ಕಾಲಘಟ್ಟಕ್ಕೆ ತಕ್ಕಂತೆ ಚಿತ್ರೀಕರಿಸಲಾಗಿದೆಯಂತೆ.

ಚಿತ್ರದಲ್ಲಿ ಬರುವ ಗ್ರಾಮದ ಹೆಸರು ಅಮರಾವತಿ. ಅಲ್ಲಿ ಸೃಷ್ಟಿಯಾಗುವ ಸಮಸ್ಯೆಗಳಿಗೆ ಪರಿಹಾರ ಹುಡುಕುವುದೇ ನಾರಾಯಣನ ಕೆಲಸ. ನಾರಾಯಣ ಪೊಲೀಸ್‌ ಅಧಿಕಾರಿ. ಆತ ಕಡುಭ್ರಷ್ಟನೂ ಹೌದು. ಆದರೆ, ತನ್ನ ಬುದ್ಧಿವಂತಿಕೆಯಿಂದ ಸಮಸ್ಯೆ ಪರಿಹರಿಸುವುದರಲ್ಲಿ ಆತ ನಿಸ್ಸೀಮ. ನಾರಾಯಣನ ಪ್ರಿಯತಮೆ ಲಕ್ಷ್ಮಿ ಪಾತ್ರದಲ್ಲಿಶಾನ್ವಿ ಶ್ರೀವಾಸ್ತವ ಕಾಣಿಸಿಕೊಂಡಿದ್ದಾರೆ.

ಮೂರು ವರ್ಷಗಳ ಹಿಂದೆ ರಕ್ಷಿತ್‌ ನಟನೆಯ ‘ಕಿರಿಕ್‌ ಪಾರ್ಟಿ’ ಚಿತ್ರ ಭರ್ಜರಿ ಗೆಲುವು ಕಂಡಿತ್ತು. ಆ ಬಳಿಕ ಅವರ ಯಾವುದೇ ಸಿನಿಮಾ ತೆರೆ ಕಂಡಿಲ್ಲ. ಹಾಗಾಗಿ, ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

ಎಚ್‌.ಕೆ.ಪ್ರಕಾಶ್‌ ಮತ್ತು ಪುಷ್ಕರ್‌ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ.ಚರಣ್‌ ರಾಜ್‌ ಮತ್ತು ಬಿ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದಾರೆ. ಕರಂ ಚಾವ್ಲಾ ಅವರ ಛಾಯಾಗ್ರಹಣವಿದೆ. ಅಚ್ಯುತ್‌ ಕುಮಾರ್‌, ರಿಷಬ್‌ ಶೆಟ್ಟಿ, ಪ್ರಮೋದ್‌ ಶೆಟ್ಟಿ, ಬಾಲಾಜಿ ಮೋಹನ್‌, ಗೋಪಾಲಕೃಷ್ಣ ದೇಶ‍ಪಾಂಡೆ, ಮಧುಸೂದನ್‌ ರಾವ್, ಗೌತಮ್‌ ರಾಜ್‌, ಸಲ್ಮಾನ್‌ ಅಹಮ್ಮದ್‌, ಅನಿರುದ್ಧ್‌ ಮಹೇಶ್‌ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.